ಮಹದಾಯಿ : ಬಿಜೆಪಿ ಕಚೇರಿ ಮುಂದೆ 4ನೇ ದಿನ ಧರಣಿ
ಬೆಂಗಳೂರು, ಡಿಸೆಂಬರ್ 26 : ಕರ್ನಾಟಕ ಬಿಜೆಪಿ ಕಚೇರಿ ಮುಂದೆ ರೈತರು ನಡೆಸುತ್ತಿರುವ ಧರಣಿ 4ನೇ ದಿನಕ್ಕೆ ಕಾಲಿಟ್ಟಿದೆ. ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಧರಣಿಗೆ ಜನರು, ಹಲವಾರು ಸಂಘಟನೆಗಳು ಬೆಂಬಲ ನೀಡಿವೆ.
ಬೆಂಗಳೂರು ನಗರದ ಕೊರೆಯುವ ಚಳಿಯನ್ನು ಲೆಕ್ಕಿಸದೇ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಮಹದಾಯಿ ಪ್ರತಿಭಟನೆ, ಯಡಿಯೂರಪ್ಪ ಇನ್ನೂ ಬಂದಿಲ್ಲ
ಜಯ ಕರ್ನಾಟಕ, ರಕ್ಷಣಾ ವೇದಿಕೆ, ಎಸ್ಡಿಪಿಐ, ಆಟೋ ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ರೈತರಿಗೆ ಬೆಂಬಲ ನೀಡಿದ್ದಾರೆ. ದಾನಿಗಳು ರೈತರಿಗೆ ಕುಡಿಯುವ ನೀರು, ಹೊದಿಕೆ, ಉಪ, ಉಪಹಾರದ ವ್ಯವಸ್ಥೆ ಮಾಡುತ್ತಿದ್ದಾರೆ.
ಮಹಿಳೆಯರು ಉಳಿದುಕೊಳ್ಳಲು ಕಲ್ಯಾಣ ಮಂಟಪದ ವ್ಯವಸ್ಥೆಯನ್ನು ಮಾಡಲಾಗಿದೆ. ಅದಕ್ಕೆ ರೈತರು ಬಾಡಿಗೆ ಪಾವತಿ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಇಂದು ರೈತರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಹೊರಟ್ಟಿ ಭೇಟಿ : ವಿಧಾನಪರಿಷತ್ ಸದಸ್ಯ ಮತ್ತು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ರೈತರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಎಲ್ಲಾ ಪಕ್ಷದ ನಾಯಕರು ಒಪ್ಪಿದರೆ ದೆಹಲಿಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲು ದೇವೇಗೌಡರನ್ನು ಒಪ್ಪಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಮಹದಾಯಿ ವಿವಾದ: ಗೋವಾ ಸಿಎಂಗೆ ಮತ್ತೊಮ್ಮೆ ಸಿದ್ದು ಪತ್ರ
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ರೈತ ನಾಯಕ ವೀರೇಶ್ ಸೊರಬದಮಠ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಮಂಗಳವಾರ ಧರಣಿ ಸ್ಥಳಕ್ಕೆ ಬಂದು ಭೇಟಿ ಮಾಡುವೆ ಎಂದು ಹೇಳಿದ್ದಾರೆ.
ಮಹಾದಾಯಿಗಾಗಿ ಬಂದ ರೈತರ ಬೆಂಬಲಕ್ಕೆ ನಿಂತ ಜನಸಾಮಾನ್ಯರ ವೇದಿಕೆ
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಂಗಳವಾರ ಧರಣಿ ನಿರತರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ರೈತರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಬಿಬಿಎಂಪಿ ವತಿಯಿಂದ ಒದಗಿಸಲಾಗುತ್ತದೆ ಎಂದು ಹೇಳಿದರು.