ಮಹದಾಯಿ ನೀರಿನ ಚಿಂತೆ ಬಿಟ್ಟುಬಿಡಿ ಎಂದಿದ್ದ ಬಿಎಸ್ವೈ ಈಗ ಯು ಟರ್ನ್
ಬೆಂಗಳೂರು, ಡಿಸೆಂಬರ್ 26: ಕುಡಿಯುವ ನೀರನ್ನು ತರುವ ಭಾರ ನನ್ನ ಮೇಲಿದೆ. ಇದು ನನ್ನ ಜವಾಬ್ದಾರಿ. ಇಂದಿನಿಂದ ನೀರಿನ ಚಿಂತೆ ಬಿಟ್ಟುಬಿಡಿ. ನೀರನ್ನು ನಾ ತಂದೆ ತರುವೆ' ಎಂದು ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇದೀಗ ಯು-ಟರ್ನ್ ಹೊಡೆದಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿ ಮುಂದೆ ನಡೆಸುತ್ತಿರುವ ಮಹದಾಯಿ ರೈತರ ಹಾಗೂ ಯಡಿಯೂರಪ್ಪ ನಡುವಿನ ಸಂಧಾನ ಮಾತುಕತೆ ವಿಫಲಗೊಂಡಿದೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ ವೈ, "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದಂತೆ ಬಿಜೆಪಿ ನಾಯಕರನ್ನು ನಾವು ಒಪ್ಪಿಸಿದ್ದೇವೆ. ಗೋವಾ ಕಾಂಗ್ರೆಸ್ ನಾಯಕರನ್ನು ಒಪ್ಪಿಸಿ ಯೋಜನೆ ಜಾರಿಗೆ ಪ್ರಯತ್ನ ಮಾಡಬೇಕಿರುವುದು ಸಿದ್ದರಾಮಯ್ಯ" ಎಂದು ಹೇಳುವ ಮೂಲಕ ಯು-ಟರ್ನ್ ಹೊಡೆದರು.
ನೀರಿನ ಚಿಂತೆ ಬಿಟ್ಟುಬಿಡಿ, ನಾ ತಂದೆ ತರುವೆ : ಯಡಿಯೂರಪ್ಪ ಘೋಷಣೆ
ಗೋವಾದ ಪ್ರತಿಪಕ್ಷ ಕಾಂಗ್ರೆಸ್ ನೀರು ಕೊಡಲು ವಿರೋಧ ವ್ಯಕ್ತಪಡಿಸುತ್ತಿದೆ. ಜನವರಿ 6ರಿಂದ ಹೋರಾಟ ಮಾಡುತ್ತೇವೆ ಎಂದು ಗೋವಾ ಕಾಂಗ್ರೆಸ್ ಅಧ್ಯಕ್ಷರು ಹೇಳುತ್ತಿದ್ದಾರೆ. ಇವರ ಮನವೊಲಿಸುವ ಕೆಲಸವನ್ನು ಸಿದ್ದರಾಮಯ್ಯ ಅವರು ಮಾಡಬೇಕು.
ಮಹದಾಯಿ ವಿವಾದ : ಗೋವಾ ಸಿಎಂ ಬರೆದ ಪತ್ರದಲ್ಲೇನಿದೆ?
ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ, ಗೋವಾ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲಿ. ರೈತರು ಮಾಡುತ್ತಿರುವ ಹೋರಾಟದ ಬಗ್ಗೆ ಸಹಾನುಭೂತಿ ಇದೆ. ಅವರು ಸಿದ್ದರಾಮಯ್ಯ ಅವರ ಮನೆ ಮುಂದೆ ಪ್ರತಿಭಟನೆ ಮಾಡಲಿ ಎಂದು ನುಣುಚಿಕೊಳ್ಳಲು ಪ್ರಯತ್ನಿಸಿದರು.
ರೈತರ ಆಕ್ರೋಶಕ್ಕೆ ಕಾರಣವಾದ ಬಿಎಸ್ ವೈ ಹೇಳಿಕೆ
ಮೊದಲು ಯಡಿಯೂರಪ್ಪ ಅವರು ನೀರು ತರುವುದಾಗಿ ಹೇಳಿದ್ದ ಯಡಿಯೂರಪ್ಪನವರು ಅಸಡ್ಡೆ ಮಾತುಗಳನ್ನು ಹಾಡುವ ಮೂಲಕ ತಮ್ಮ ಮಾತನ್ನು ತಪ್ಪಿ ವಚನಭ್ರಷ್ಟರಾಗಿದ್ದಾರೆ ಎಂದು ಮಹದಾಯಿ ಹೋರಾಟ ಸಮಿತಿಯ ಅಧ್ಯಕ್ಷ ವೀರೇಶ್ ಸೊಬರದಮಠ ಆಕ್ರೋಶ ವ್ಯಕ್ತಪಡಿಸಿದರು.
ಅಂದು ಯಡಿಯೂರಪ್ಪ ಹೇಳಿದ್ದೇನು?
ಇಂದಿನಿಂದ ನೀರಿನ ಚಿಂತೆ ಬಿಟ್ಟುಬಿಡಿ. ನೀರನ್ನು ನಾ ತಂದೆ ತರುವೆ' ಎಂದು ಇತ್ತೀಚೆಗೆ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಬೃಹತ್ ಸಮಾವೇಶದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮ್ಮುಖದಲ್ಲಿ ಘೋಷಿಸಿದ್ದರು.
ಬಿಜೆಪಿ ಕಚೇರಿ ಮುಂದೆ ಧರಣಿ ಏಕೆ?
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಮಹದಾಯಿ ಹೋರಾಟಗಾರರು ವಿರೊಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮನೆ ಮುಂದೆ ಧರಣಿ ನಡೆಸಿದ್ದರು. ಅಂದರೆ ಶೆಟ್ಟರ್ ಬೆಳಗಾವಿ ಚಳಿಗಾಲದ ಅಧಿವೇಶದಲ್ಲಿ ಪಾಲ್ಗೊಂಡಿದ್ದರು. ಇದರಿಂದ ಬಿಎಸ್ ವೈ ಶೆಟ್ಟರ್ ನಿವಾಸಕ್ಕೆ ತೆರಳಿ, ಪ್ರತಿಭಟನೆ ಹಿಂಪಡೆಯಿರಿ ಡಿ. 15ರೊಳಗೆ ಮಹದಾಯಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಯಡಿಯೂರಪ್ಪ ಕೇವಲ ಗೋವಾ ಸಿಎಂನಿಂದ ಪತ್ರ ಬರೆಸಿಕೊಡು ಮೂಗಿಗೆ ಬೆಣ್ಣೆ ಸವರು ಮುಂದಾದರು. ಇದರಿಂದ ಆಕ್ರೋಶಗೊಂಡ ಹೋರಾಟಗಾರರು ಬಿಜೆಪಿ ಕಚೇರಿ ಮುಂದೆ ಧರಣಿ ನಡೆಸಲು ಕಾರಣವಾಯಿತು.
ಗೋವಾ ಸಿಎಂ ಬರೆದ ಪತ್ರದಲ್ಲೇನಿತ್ತು?
ಕುಡಿಯುವ ನೀರು ಮೊದಲ ಆದ್ಯತೆ ಎಂಬುದನ್ನು ಗೋವಾ ಸರ್ಕಾರ ಅರ್ಥ ಮಾಡಿಕೊಳ್ಳುತ್ತದೆ. ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ನಿಮ್ಮ ಕಾಳಜಿಯನ್ನು ನಾನು ಸ್ವಾಗತಿಸುತ್ತೇನೆ. ಜನರ ಹಿತದೃಷ್ಟಿಯಿಂದ ವಿವಾದವನ್ನು ಬಗೆಹರಿಸಲು ನಾವು ಸಹಕಾರ ನೀಡುತ್ತೇವೆ. ನ್ಯಾಯಾಧೀಕರಣದ ಸಲಹೆಯಂತೆ ವಿವಾದವನ್ನು ಚರ್ಚೆ ಮೂಲಕ ಬಗೆಹರಿಸಿಕೊಳ್ಳಲು ಸರ್ಕಾರ ಸಿದ್ಧವಿದೆ. ಕುಡಿಯುವ ನೀರನ್ನು ಮಾನವೀಯತೆಯ ದೃಷ್ಟಿಯಿಂದ ನೀಡಲು ನಾವು ಅಗತ್ಯ ಸಹಕಾರವನ್ನು ನೀಡುತ್ತೇವೆ ಎಂದು ಮನೋಹರ್ ಪರಿಕ್ಕರ್ ಬಿಎಸ್ ವೈಗೆ ಪತ್ರ ಬರೆದಿದ್ದರು.