ಶೋಭಾಯಾತ್ರೆಯೊಂದಿಗೆ ಮಡಿಕೇರಿ ದಸರಾ ಸಂಪನ್ನ
ಮಡಿಕೇರಿ, ಅ.15: ಹತ್ತು ದಿನಗಳ ಕಾಲ ನಡೆಯುವ ಮಡಿಕೇರಿ ದಸರಾ ಜನೋತ್ಸವಕ್ಕೆ ತೆರೆ ಬಿದ್ದಿದೆ. ದಶಮಂಟಪಗಳ ಶೋಭಾಯಾತ್ರೆಯೊಂದಿಗೆ ಬನ್ನಿಕಡಿಯುವ ಮೂಲಕ ಸಂಭ್ರಮದ ದಸರಾ ಹಬ್ಬ ಸಮಾರೋಪ ಕಂಡಿದೆ.
ಪಂಪಿನಕೆರೆಯಲ್ಲಿ ಶ್ರೀ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ಹಾಗೂ ಶ್ರೀ ಕಂಚಿ ಕಾಮಾಕ್ಷಿಯಮ್ಮ ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು.
ಅಸಂಖ್ಯಾತ ವಿದ್ಯುದ್ದೀಪಗಳಿಂದ ಅಲಂಕೃತಗೊಂಡ ಹಾಗೂ ಪೌರಾಣಿಕ ಕಥಾ ಹಂದರಗಳ ಕಲಾಕೃತಿಗಳ ದಶಮಂಟಪಗಳು ರಾಜಬೀದಿಯಲ್ಲಿ ಸಾಗಿ ನೋಡುಗರನ್ನು ಸ್ವರ್ಗಲೋಕದತ್ತ ಕರೆದೊಯ್ದವು. ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಜನರು ಈ ಬಾರಿಯ ಐತಿಹಾಸಿಕ ಮಡಿಕೇರಿ ದಸರಾಕ್ಕೆ ಸಾಕ್ಷಿಯಾದರು.
ಅತ್ಯಾಕರ್ಷಕ ಕಲಾಕೃತಿಗಳನ್ನೊಳಗೊಂಡ ದಶಮಂಪಟಗಳ ಮುಂದೆ ಭಾಜಾಭಜಂತ್ರಿ, ತಾಳಮದ್ದಳೆಗಳ ಅಬ್ಬರ ಶೋಭಾಯಾತ್ರೆಗೆ ಮೆರಗು ನೀಡುವಂತಿತ್ತು. ತಾಳಕ್ಕೆ ತಕ್ಕಂತೆ ಆಯಾ ಮಂಟಪಗಳ ಕಾರ್ಯಕರ್ತರು ಮತ್ತು ನಾಗರೀಕರು ಹೆಜ್ಜೆ ಹಾಕಿ ಕಾರ್ಯಕ್ರಮಕ್ಕೆ ರಂಗೇರಿಸಿದರು.
ಮಡಿಕೇರಿ ದಸರಾ ಜನೋತ್ಸವ ಹಿರಿಯಣ್ಣನಂತಿರುವ ಪೇಟೆ ಶ್ರೀರಾಮಮಂದಿರ ಮಂಪಟವು ಮೊದಲು ಹೊರಟು ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಮೇಲೆ ದಶಮಂಟಪಗಳ ಶೋಭಾಯಾತ್ರೆ ಪ್ರಾರಂಭವಾಯಿತು. ಆ ನಂತರ ಶಕ್ತಿದೇವತೆಗಳ ಕರಗ ಹಾಗೂ ದಶಮಂಟಪಗಳು ರಾಜಬೀದಿಯಲ್ಲಿ ಸಾಗಿ ಗದ್ದುಗೆ ಬಳಿ ಸಾಂಪ್ರದಾಯಿಕವಾಗಿ 'ಬನ್ನಿ' ಕಡಿಯುವುದರೊಂದಿಗೆ ದಸರಾಗೆ ಮುಕ್ತಾಯ ಹಾಡಲಾಯಿತು.
ಪಂಪಿನಕೆರೆಯಲ್ಲಿ ಶ್ರೀ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ಹಾಗೂ ಶ್ರೀ ಕಂಚಿ ಕಾಮಾಕ್ಷಿಯಮ್ಮ ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು.
ನಾಲ್ಕು ಶಕ್ತಿ ದೇವತೆಗಳ ಕರಗ ಹೊರುವ ಪಿ.ಪಿ. ರಮೇಶ್, ಉಮೇಶ್, ಕೋಟೆ ಮಾರಿಯಮ್ಮ ದೇವಾಲಯದ ಅನೀಶ್, ಹಾಗೂ ಕಂಚಿ ಕಾಮಾಕ್ಷಿ ದೇವಾಲಯದ ನವೀನ್ ಮಧುರಯ್ಯ ದೇವತೆಗಳ ಮುಖವಾಡದೊಂದಿಗೆ ಪಂಪಿನಕೆರೆಗೆ ಬರುತ್ತಾರೆ.
ಕರಗಗಳ ಅಲಂಕಾರ ಮುಗಿದ ಬಳಿಕ ಸಂಜೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಗುತ್ತದೆ ನಂತರ ಈಡುಗಾಯಿ ಒಡೆಯುವ ಮೂಲಕ ಚಾಲನೆ ನೀಡುತ್ತಾರೆ.
ದಸರಾ ಹಬ್ಬಕ್ಕೆ ಚಾಲನೆ ನೀಡುವಾಗ ಆರಂಭದಲ್ಲಿ ನಡೆಯುವ ಕರಗ ಉತ್ಸವ ಮಾರ್ಗದಂತೆ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸ್ವೀಕರಿಸಿದ ಬಳಿಕ ಸಂಪ್ರದಾಯದಂತೆ ಪೇಟೆ ಶ್ರೀರಾಮಮಂದಿರ ತಲುತ್ತದೆ ನಂತರ ಎ.ವಿ ಶಾಲೆ ಬಳಿಯ ಬನ್ನಿಮಂಟಪದಲ್ಲಿ ಸಂಭ್ರಮಕ್ಕೆ ತೆರೆ ಬೀಳುತ್ತದೆ.

ಶಕ್ತಿ ದೇವತೆಗಳ ಉತ್ಸವ
ಶ್ರೀ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ಹಾಗೂ ಶ್ರೀ ಕಂಚಿ ಕಾಮಾಕ್ಷಿಯಮ್ಮ ಶಕ್ತಿ ದೇವತೆಗಳ ಕರಗ ಮಹೋತ್ಸವದ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ.
ದಸರಾ ಮುಕ್ತಾಯದ ದಿನ ಶಕ್ತಿ ದೇವತೆಗಳಿಗೆ ಸಂಬಂಧಿಸಿಂದ ಕಥೆಗಳ ದೃಶ್ಯಗಳನ್ನು ಸ್ತಬ್ದಚಿತ್ರಗಳ ಮೂಲಕ ಪ್ರದರ್ಶಿಸಿ ಮೆರವಣಿಗೆ ಮಾಡಲಾಗುತ್ತದೆ.

ಜನ ಜಂಗುಳಿ
ನಾಲ್ಕು ಶಕ್ತಿ ದೇವತೆಗಳ ಕರಗ ಸಾಗುವ ದಾರಿಯಲ್ಲಿ ಸಾರ್ವಜನಿಕರು ಭಕ್ತಿ ಪೂರ್ವಕವಾಗಿ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಈ ಹಿಂದಿನ ದಸರಾಕ್ಕೆ ಹೋಲಿಸಿದರೆ ಈ ಬಾರಿ ಮಡಿಕೇರಿ ದಸರಾ ಸಂಭ್ರಮದಲ್ಲಿ ಹೆಚ್ಚಿನ ಜನ ಪಾಲ್ಗೊಂಡಿದ್ದು ಕಂಡು ಬಂದಿತ್ತು.

ಇದು ಎಲ್ಲರ ಹಬ್ಬ
ಎಲ್ಲಾ ವರ್ಗದ ಜನರು ಸಂಭ್ರಮದಿಂದ ಮಡಿಕೇರಿ ದಸರಾದಲ್ಲಿ ಪಾಲ್ಗೊಳ್ಳುತ್ತಾರೆ. ಮೊಗೆರಾ ಸಮಾಜ, ದಲಿತ ಸಂಘ ಮತ್ತು ಆಟೋ ಚಾಲಕರ ಸಂಘದವರು ಬೃಹತ್ ದಸರಾ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.

ಅಭಿನಂದನೆಗಳು
ಹತ್ತು ದಿನಗಳ ಉತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದ ಮಡಿಕೇರಿ ಕಾರ್ಯಧ್ಯಕ್ಷರಾದ ಕೆ.ಎಂ.ಬಿ.ಗಣೇಶ್ ಹಾಗೂ ದಸರಾ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರಿಗೆ ಸಾರ್ವಜನಿಕರು ಕೃತಜ್ಞತೆ ಅರ್ಪಿಸಿದ್ದಾರೆ. ಜಿಲ್ಲಾ ಎಸ್ಪಿ ಎಂ.ಎನ್.ಅನುಚೇತ್, ಪೌರಾಯುಕ್ತ ಎನ್.ಎಂ.ಶಶಿಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಜಿ.ಮಂಜುನಾಥ್ ಅವರು ದಸರಾ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications