ಚಂದ್ರಗ್ರಹಣ 2022: ರಾಜ್ಯದ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ
ಮಂಗಳೂರು, ನವೆಂಬರ್ 7: ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ನವೆಂಬರ್ 8, 2022 ರಂದು ಕಾಣಿಸಿಕೊಳ್ಳಲಿದೆ. ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಪೂಜಾ, ದರ್ಶನ ಸಮಯ ಹಾಗೂ ಭೋಜನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳು ಈ ಬಗ್ಗೆ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದೆ.
Chandra Grahan 2022 : ಚಂದ್ರಗ್ರಹಣದ ಸಮಯದಲ್ಲಿ ಚಂದ್ರ ಏಕೆ ಕೆಂಪು ಬಣ್ಣಕ್ಕೆ ತಿರುಗುತ್ತದೆ?
ಚಂದ್ರಗ್ರಹಣ ಹಿನ್ನೆಲೆ ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಆಗಲಿದೆ. ಮಧ್ಯಾಹ್ನ 1:30ರಿಂದ ರಾತ್ರಿ 7ರತನಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮಧ್ಯಾಹ್ನ 1:30ರ ವರೆಗೆ ಮಾತ್ರ ಭೋಜನ ವ್ಯವಸ್ಥೆ ಇರಲಿದೆ. ಬಳಿಕ ರಾತ್ರಿ 7 ಗಂಟೆಯ ನಂತರ ಭೋಜನ ವ್ಯವಸ್ಥೆ ಮುಂದುವರಿಯಲಿದೆ ಎಂದು ದೇವಸ್ಥಾನ ಪ್ರಕಟಣೆ ತಿಳಿಸಿದೆ.
ಕುಕ್ಕೆಯಲ್ಲಿ ದೇವರ ಸೇವೆಗಿಲ್ಲ ಅವಕಾಶ
ಇನ್ನು ಚಂದ್ರಗ್ರಹಣ ಹಿನ್ನೆಲೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್ 8ರಂದು ಯಾವುದೇ ಪೂಜಾ ಕಾರ್ಯಕ್ರಮ ನೆರವೇರುವುದಿಲ್ಲ. ಅಲ್ಲದೇ ಭೋಜನ ಪ್ರಸಾದ ವಿತರಣೆ ಕೂಡ ಇರುವುದಿಲ್ಲ. ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ಭಕ್ತರಿಗೆ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 9 ರಿಂದ 11:30ರವರೆಗೆ ಭಕ್ತರಿಗೆ ದೇವರ ದರ್ಶನ ಅವಕಾಶವನ್ನು ಕಲ್ಪಿಸಲಾಗಿದೆ. ಮಧ್ನಾಹ್ನ 2:39ರಿಂದ ಸಂಜೆ 6:19 ರ ತನಕ ಮತ್ತು ರಾತ್ರಿ 7:30 ರಿಂದ 9 ರತನಕ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗ್ರಹಣ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ
ನವೆಂಬರ್ 8ರ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಮಧ್ಯಾಹ್ನ 1 ಗಂಟೆಯಿಂದ ಚಾಮುಂಡೇಶ್ವರಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಚಾಮುಂಡಿ ಬೆಟ್ಟದ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಂದ್ರಗ್ರಹಣದ ಸ್ಪರ್ಶ ಕಾಲ ಹಾಗೂ ಮೋಕ್ಷ ಕಾಲಗಳಲ್ಲಿ ವಿಶೇಷ ಪೂಜೆಗಳು ನಡೆಯಲಿದ್ದು, ಚಂದ್ರಗ್ರಹಣದ ನಂತರ ದೇವಾಲಯದ ಗರ್ಭ ಗುಡಿಯ ಸ್ವಚ್ಛತೆ ನಡೆಯಲಿದೆ. ಈ ಬಳಿಕ ಗ್ರಹಣದ ನಂತರ ಅಭಿಷೇಕ ಮತ್ತು ಮಹಾ ಮಂಗಳಾರತಿ ನಡೆಯಲಿದ್ದು, ಈ ಸಮಯದಲ್ಲಿ ಭಕ್ತರ ಭೇಟಿಯನ್ನು ನಿರ್ಬಂಧಿಸಲಾಗಿದೆ.
ಮಧ್ಯಕಾಲ ಸಂಜೆ 4:29ಕ್ಕೆ ಗ್ರಹಣದ ವಿಶೇಷ ಪೂಜೆ
ಇನ್ನು ಕಟೀಲು ದೇವಸ್ಥಾನದಲ್ಲೂ ಗ್ರಹಣದ ದಿನ ದೇವರ ಪೂಜೆಯ ಸಮಯ ಬದಲಾವಣೆ ಆಗಲಿದೆ. ನವೆಂಬರ್ 8ರಂದು ಬೆಳಗ್ಗೆ 9:30ಕ್ಕೆ ದೇವರಿಗೆ ಪೂಜೆ ನಡೆಯುತ್ತದೆ. ಮಧ್ಯಾಹ್ನ ಭೋಜನ ಇರುವುದಿಲ್ಲ. ಬೆಳಗ್ಗೆ 11:30ರ ತನಕ ಮಾತ್ರ ಫಲಾಹಾರ ಇರುತ್ತದೆ. ರಾತ್ರಿ 8 ಗಂಟೆಗೆ ಪೂಜೆಗಳು ನಡೆಯಲಿದ್ದು, ಭೋಜನವೂ ಇರುತ್ತದೆ. ಗ್ರಹಣ ಕಾಲದಲ್ಲಿ ದೇಗುಲ ತೆರೆದಿರುತ್ತದೆ. ಗ್ರಹಣ ಮಧ್ಯ ಕಾಲದವರೆಗೆ ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಮಧ್ಯಕಾಲ ಸಂಜೆ 4:29ಕ್ಕೆ ಗ್ರಹಣದ ವಿಶೇಷ ಪೂಜೆ ಇದೆ ಎಂದು ದೇವಸ್ಥಾನದ ಆಡಳಿತ ತಿಳಿಸಿದೆ.
ಚಂದ್ರಗ್ರಹಣದ ವೇಳೆ ಮಲೆಮಹದೇಶ್ಚರ ಬೆಟ್ಟದಲ್ಲಿ ದೇಗುಲ ಬಂದ್ ಮಾಡುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಭಕ್ತರಿಗೆ ಎಂದಿನಂತೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಎಂದಿನಂತೆ ಪ್ರಸಾದ ವ್ಯವಸ್ಥೆಯು ಇರಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಬೆಂಗಳೂರಿನಲ್ಲಿ ಗ್ರಹಣ ದರ್ಶನ ಯಾವಾಗ..?
ಭಾರತದ ವಿವಿಧ ನಗರಗಳಲ್ಲಿ ಚಂದ್ರಗ್ರಹಣದ ಸಮಯಗಳು ಇಲ್ಲಿದೆ. ಈ ಬಾರಿಯ ಚಂದ್ರಗ್ರಹಣವನ್ನು ವೀಕ್ಷಿಸಲು ಯಾವುದೇ ವಿಶೇಷ ಸಲಕರಣೆಗಳ ಅಗತ್ಯವಿಲ್ಲ. ದೂರದರ್ಶಕವು ನೋಟ ಮತ್ತು ಕೆಂಪು ಬಣ್ಣವನ್ನು ಹೆಚ್ಚಿಸುತ್ತದೆ. ಭಾರತದ ವಿವಿಧ ನಗರಗಳಲ್ಲಿ ಚಂದ್ರಗ್ರಹಣದ ಸಮಯಗಳು ಕೋಲ್ಕತ್ತಾದಲ್ಲಿ ಸಂಜೆ 4:54 ಕೊಹಿಮಾದಲ್ಲಿ ಸಂಜೆ 4:29 ದೆಹಲಿದಲ್ಲಿ ಸಂಜೆ 5:31 ಬೆಂಗಳೂರಿನಲ್ಲಿ ಸಂಜೆ 5:57 ಮುಂಬೈನಲ್ಲಿ ಸಂಜೆ 6:03 ನಾಗ್ಪುರದಲ್ಲಿ ಸಂಜೆ 5:32 ಶ್ರೀನಗರದಲ್ಲಿ ಸಂಜೆ 5:31ಕ್ಕೆ ಚಂದ್ರಗ್ರಹಣ ಗೋಚರಿಸಲಿದೆ.
ಭಾರತದ ವಿವಿಧ ನಗರಗಳಲ್ಲಿ ಪೂರ್ಣ ಚಂದ್ರ ಗ್ರಹಣದ ಸಮಯ ತಿಳಿಯಿರಿ