ಗೌಡ್ರ ಮತ್ತೊಬ್ಬ ಸೊಸೆಯಿಂದ ರಾಜಕೀಯಕ್ಕೆ ಎಂಟ್ರಿ?

ಈಗಾಗಲೇ ಈ ಬಾರಿ ಚುನಾವಣೆಯಲ್ಲಿ ತಮ್ಮ ಕುಟುಂಬದಿಂದ ತಾವೊಬ್ಬರೇ ಕಣಕ್ಕಿಯುತ್ತಿರುವುದಾಗಿ ಹೇಳಿ, ಅದಾದನಂತರ ಚಿಕ್ಕಬಳ್ಳಾಪುರ ಕ್ಷೇತ್ರದಿಂದ (ಮಾಜಿ ಜೆಡಿಎಸ್) ಬಚ್ಚೇಗೌಡ ಮತ್ತು ಹಳೆಯ ಕಾಂಗ್ರೆಸ್ಸಿಗರಾದ ವೀರಪ್ಪ ಮೊಯ್ಲಿ ವಿರುದ್ಧ ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಿರುವ ದೊಡ್ಡಗೌಡ್ರು ಜೆಡಿಎಸ್ ಭದ್ರಕೋಟೆ ಎನಿಸಿದ್ದ ಮಂಡ್ಯ ಕ್ಷೇತ್ರವನ್ನು ಮತ್ತೆ ತಮ್ಮ ಅಧಿಪತ್ಯಕ್ಕೆ ತೆಗೆದುಕೊಳ್ಳಲು ಈ ಬಾರಿ ಮತ್ತೊಬ್ಬ ಸೊಸೆಯನ್ನೂ ರಾಜಕೀಯಕ್ಕೆ ತರಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.
ಗೌಡರ 'ಸೊಸೆ ರಾಜಕೀಯ':
ಅದರಂತೆ ಶಾಸಕ ಡಿಸಿ ತಮ್ಮಣ್ಣ ಅವರು ಪುತ್ರಿ ಡಾ. ಸೌಮ್ಯ ರಮೇಶ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಸ್ಥಳೀಯ ಮುಖಂಡರು ಮತ್ತು ದೇವೇಗೌಡರು ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸೌಮ್ಯ ರಮೇಶ್ ಅವರು ಗೌಡರ ಕೊನೆಯ ಪುತ್ರ, ಡಾ. ಎಚ್ ಡಿ ರಮೇಶ್ ಅವರ ಪತ್ನಿ. ಇವರು ಪದ್ಮನಾಭನಗರದಲ್ಲಿ 'ಡಿಜಿ ಹಾಸ್ಪಿಟಲ್' ಸಾರಥ್ಯ ವಹಿಸಿದ್ದಾರೆ. ಅಂದಹಾಗೆ ಸೌಮ್ಯ ಅವರೂ ಸಹ ವೈದ್ಯೆ.
ಕಾಂಗ್ರೆಸ್ಸಿನ ರಮ್ಯಾ ವಿರುದ್ಧ ಮಹಿಳೆಯನ್ನೇ ನಿಲ್ಲಿಸಿ, ಗೆಲ್ಲಿಸಬೇಕು ಎಂದು ನಿರ್ಧರಿಸಿರುವ ಗೌಡರು ತಮ್ಮಣ್ಣ ಕುಟುಂಬದವರೊಂದಿಗೆ ಮಾತನಾಡಿ ತಮ್ಮ ಸೊಸೆಯನ್ನು ಅಖಾಡಕ್ಕೆ ಇಳಿಸಲು ಸಿದ್ಧವಾಗಿರುವಂತೆ ಸೂಚಿಸಿದ್ದಾರೆ.
ಗಮನಾರ್ಹವೆಂದರೆ ಗೌಡರು ಮತ್ತೊಬ್ಬ ಸೊಸೆಗೂ ಮಣೆ ಹಾಕಿರುವುದು ಸ್ಪಷ್ಟವಾಗುತ್ತಿದೆ. ವರನಟ ಡಾ. ರಾಜ್ ಕುಮಾರ್ ಅವರ ಸೊಸೆ ಗೀತಾ ಶಿವರಾಜ್ ಕುಮಾರ್ ಅವರನ್ನು ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಕಣಕ್ಕಿಳಿಸುವುದು ಬಹುತೇಕ ಖಚಿತಪಟ್ಟಿದೆ.
ಇನ್ನು ಇತ್ತ ಮಂಡ್ಯದಲ್ಲಿ ಬಿಜೆಪಿಯವರು ಪಕ್ಷಕ್ಕೆ ನೆಲೆಯಿಲ್ಲವಾದರೂ ಅಭ್ಯರ್ಥಿಯ ಸಾಮರ್ಥ್ಯದಿಂದ ಗೆದ್ದು ಬರುವಂತಾದರೆ ನಾವೇಕೆ ಬೇಡ ಅನ್ನಬೇಕು ಎಂದು ಗೆಲ್ಲುವ ಕುದುರೆಗಾಗಿ ಶೋಧ ನಡೆಸಿದ್ದಾರೆ. (ದೊಡ್ಡಗೌಡ್ರು ಮುದ್ದೆಯನ್ನಲ್ಲ ಜನರನ್ನೇ ನುಂಗಿದ್ದಾರೆ!)
ನಿವೃತ್ತ ಹಿರಿಯ ಅಧಿಕಾರಿ, ಮಾಲಿನ್ಯ ಮಂಡಳಿ ಅಧ್ಯಕ್ಷರಾಗಿದ್ದ ಶಿವಲಿಂಗಯ್ಯ ಪತ್ನಿ ಮೀರಾ ಅವರನ್ನು ಪಕ್ಷದ ವತಿಯಿಂದ ಕಣಕ್ಕಿಳಿಸಲು ಬಿಜೆಪಿ ಚಿಂತಿಸುತ್ತಿದೆ ಎನ್ನಲಾಗಿದೆ. ಮೂಲತಃ ಮಂಡ್ಯದವರೇ ಆದ ಮೀರಾ ಅವರು ಕ್ಷೇತ್ರದಲ್ಲಿ ಒಳ್ಳೆಯ ವರ್ಚಸ್ಸು ಹೊಂದಿದ್ದು, ಅದನ್ನು ಪಕ್ಷದ ಗೆಲುವಿಗೆ ದುಡಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications