ಇಂದಿನಂತೆಯೇ ಮುಂದಿನ ವಾರವೂ ತಂಪಾಗಿರಲಿ
ಬೆಂಗಳೂರು, ಏಪ್ರಿಲ್ 10: ಇಡೀ ದೇಶ ಕಾದ ಬಾಣಲೆಯಂತಾಗಿದೆ. ಕಳೆದ ಬಾರಿಯಷ್ಟು ಬೇಸಿಗೆಯ ಪ್ರತಾಪ ಇಲ್ಲವಾದರೂ ಈ ಬಾರಿ ಬಿರುಬಿಸಿಲಿನ ಮಧ್ಯೆ ಚುನಾವಣೆ ಕಾವು ಸೇರಿರುವುದರಿಂದ ಗರಂ ಗರಂ ಆಗಿದೆ.
ಆದರೆ ಮೂರ್ನಾಲ್ಕು ದಿನದಿಂದ ಅಲ್ಲಲ್ಲಿ ಒಳ್ಳೆಯ ಮಳೆಯಾಗುತ್ತಿದೆ. ಇದು ಕೃಷಿಕರಿಗೆ ಅದರಲ್ಲೂ ಕಲ್ಲಂಗಡಿ, ದಾಳಿಂಬೆ, ದ್ರಾಕ್ಷಿ, ಮಾವು ಬೆಳಗಾರರಿಗೆ ಅನ್ಯಾಯವೆಸಗುತ್ತಿದ್ದರೆ ಇತರರಿಗೆ ತಂಪೆರೆಯುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮೂಲಗಳು ಹೇಳಿವೆ.
ಮುಂದಿನ ವಾರ ಒಳ್ಳೆಯ ಮತ ಮಳೆಯಾಗಲಿ:

ಆದರೆ ಸರಿಯಾಗಿ ಇನ್ನೊಂದು ವಾರಕ್ಕೆ ಅಂದರೆ ಮುಂದಿನ ಗುರುವಾರದ ವೇಳೆಗೆ ಇದೇ ರೀತಿ ಮಳೆಯ ವಾತಾವರಣ ಸೃಷ್ಟಿಯಾಗಿ ಇಡೀ ಕನ್ನಡ ನಾಡು ತಂಪು ತಂಪಾಗಿರಲಿ, ಹೆಚ್ಚು ಹೆಚ್ಚು ಜನರು ಮತಗಟ್ಟೆವರೆಗೂ ನಡೆದು ಬರಲಿ ಎಂದು ಆಶಿಸುವವರೂ/ ಹಾರೈಸುವವರೂ ಇದ್ದಾರೆ.
ವಾಯುಭಾರ ಕುಸಿತದಿಂದ ಆರಂಭವಾಗಿರುವ ಮಳೆ ಮತ್ತು ಮೋಡ ಮುಸುಕಿದ ವಾತಾವರಣದಿಂದಾಗಿ ಇಂದು ಮತ್ತು ನಾಳೆ ಮಳೆ ಸಾಧ್ಯೆತೆಯಿದೆ. ರಾಜಧಾನಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಿದ್ದು, ತೀವ್ರವಾಗಿ ಏರಿಕೆಯಾಗಿದ್ದ ತಾಪಮಾನ ಇಳಿಮುಖವಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ತಂಪಾದ ಹವೆ ಮರುಕಳಿಸಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಭೂಮಿ ಮತ್ತು ಸಮುದ್ರ ಬಿಸಿಲಿನ ಝಳಕ್ಕೆ ಕಾದಾಗ ವಾತಾವರಣದಲ್ಲಿ ಉಂಟಾಗುವ ತಾಪಮಾನ ಏರಿಕೆಯಿಂದ ವಾಯುಭಾರ ಕುಸಿತ ಉಂಟಾಗುವುದು ಸಹಜ. ಅದೇ ರೀತಿ ಅರಬ್ಬಿ ಸಮುದ್ರದಿಂದ ಈಶಾನ್ಯಾಭಿಮುಖವಾಗಿ ಚಲಿಸಿದ ಗಾಳಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಮಾರ್ಪಟ್ಟಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ವಿಎಸ್ ಪ್ರಕಾಶ್ ಅವರು ವಿಶ್ಲೇಷಿಸಿದ್ದಾರೆ.
ಅರಬ್ಬಿ ಸಮುದ್ರದ 2,000 ಕಿಮೀ ದೂರದಿಂದ ದಕ್ಷಿಣ ಪ್ರಸ್ತಭೂಮಿ ಮೂಲಕ ಅಂದರೆ ಕೇರಳ, ದಕ್ಷಿಣ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶದ ಮೂಲಕ ಹಾದುಹೋಗಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವುಂಟಾಗಿದೆ. ಹಾಗಾಗಿ ಮುನ್ಸೂಚನೆ ಪ್ರಕಾರ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮಳೆಯಾಗುವ ಲಕ್ಷಣಗಳಿವೆ ಎಂದು ಪ್ರಕಾಶ್ ಹೇಳಿದ್ದಾರೆ.
ಕೋಲಾರದ ಒಂದೆರಡು ಕಡೆ ಅಧಿಕ ಮಳೆಯಾಗುವ ಮುನ್ಸೂಚನೆಗಳಿವೆ. ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದರೆ, ಕರಾವಳಿ ಭಾಗದಲ್ಲಿ ಸಾಧಾರಣ ಮಳೆ ಅಲ್ಲಲ್ಲಿ ಬೀಳುವ ಸಂಭವವಿದೆ. ಮಲೆನಾಡಿನಲ್ಲಿ ಭಾಗಶಃ ವ್ಯಾಪಕ ಪ್ರಮಾಣದ ಸಾಧಾರಣ ಮಳೆಯಾಗುವ ಲಕ್ಷಣಗಳಿವೆ.
ಬೆಂಗಳೂರಿನಲ್ಲಿ ನಿನ್ನೆ ಸಂಜೆ ಮತ್ತು ರಾತ್ರಿ ಉತ್ತಮ ಮಳೆಯಾಗಿದ್ದು ಆನೇಕಲ್, ಜ್ಞಾನಭಾರತಿಯಲ್ಲಿ 1.9 ಸೆಂಮೀ, ಜಕ್ಕೂರು 3.1 ಸೆಂಮೀ, ರಾಜಾಜಿನಗರ 1.3 ಸೆಂಮೀ, ನಂದಿನಿ ಲೇ ಔಟ್ 0.7 ಸೆಂಮೀ, ನಾಗಪುರ 0.8 ಸೆಂಮೀ, ಮನೋರಾಯನಪಾಳ್ಯ 0.5 ಸೆಂಮೀ, ಹೇರೋಹಳ್ಳಿ 0.8 ಸೆಂಮೀ, ದೊಮ್ಮಲೂರು 1.0 ಸೆಂಮೀ, ರಾಜಮಹಲ್ ಗುಟ್ಟಹಳ್ಳಿ 2.3 ಸೆಂಮೀ, ವಿವಿ ಪುರ, ಬೆಳ್ಳಂದೂರು, ಕಾಟನ್ ಪೇಟೆ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಉತ್ತಮ ಮಳೆಯಾದ ವರದಿಗಳು ಬಂದಿವೆ.












Click it and Unblock the Notifications