'ಭ್ರಷ್ಟರಿಗೆ ಶಿಕ್ಷೆ ನೀಡುವ ಅಧಿಕಾರ ಲೋಕಾಯುಕ್ತರಿಗೆ ಬೇಕು'
ಬೆಂಗಳೂರು, ಜ.9 : 'ಲೋಕಾಯುಕ್ತ ಸಂಸ್ಥೆಗೆ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಅಧಿಕಾರವನ್ನು ನೀಡಿದಲ್ಲಿ ಬಲಗೊಳಿಸಲು ಸಾಧ್ಯವಾಗುವತ್ತದೆ. ಲೋಕಾಯುಕ್ತವು ಕೇವಲ ಆಡಳಿತಾತ್ಮಕ ಕೆಲಸವನ್ನು ಮಾಡುವ ಮೂಲಕ ತಪ್ಪಿತಸ್ಥರ ಮೇಲಿನ ತನಿಖೆಯನ್ನು ನಡೆಸಿ ಅಂತಿಮವಾಗಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವುದಕ್ಕೆ ಸೀಮಿತವಾಗಬಾರದು' ಎಂದು ರಾಜ್ಯಪಾಲ ವಾಜುಬಾಯ್ ವಾಲಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಲೋಕಾಯುಕ್ತ ಕಚೇರಿಯಲ್ಲಿ ಗುರುವಾರ ನಡೆದ ಲೋಕಾಯುಕ್ತ ದಿನಾಚರಣೆಯನ್ನು ಉದ್ಘಾಟಿಸಿದ ಮಾತನಾಡಿದ ರಾಜ್ಯಪಾಲರು, 'ಲೋಕಾಯುಕ್ತವು ಕೇವಲ ಆಡಳಿತಾತ್ಮಕ ಕೆಲಸವನ್ನು ಮಾಡುವ ಮೂಲಕ ತಪ್ಪಿತಸ್ಥರ ಮೇಲಿನ ತನಿಖೆಯನ್ನು ನಡೆಸಿ ಅಂತಿಮವಾಗಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುತ್ತಿದೆ' ಎಂದು ಹೇಳಿದರು. [ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಹಿಂಪಡೆದ ಸರ್ಕಾರ]

'ಅನ್ಯಾಯಕ್ಕೆ ಒಳಗಾದವರು ನ್ಯಾಯ ಕೋರಿ ಮನವಿ ಸಲ್ಲಿಸಿದಾಗ ಅವರನ್ನು ವರ್ಷಗಟ್ಟಲೆ ಕಾಯುವಂತೆ ಮಾಡಬಾರದು. ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಮಾಡಲು ಲೋಕಾಯುಕ್ತಕ್ಕೆ ಎಲ್ಲಾ ಅಧಿಕಾರವನ್ನು ನೀಡಿದಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ' ಎಂದು ತಿಳಿಸಿದರು. [ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ತನಿಖೆ ಭೀತಿ]
ಒಂದೇ ಕಾನೂನು ಬೇಕು : 'ಕರ್ನಾಟಕದ ಲೋಕಾಯುಕ್ತವು ಹೆಚ್ಚು ಬಲಿಷ್ಟವಾಗಿದೆ. ಇಲ್ಲಿಯ ಅಧಿಕಾರಿಗಳು ತ್ವರಿತವಾಗಿ ಪ್ರಕರಣಗಳ ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಹೇಳಿದ ರಾಜ್ಯಪಾಲರು. ಒಂದೊಂದು ರಾಜ್ಯಗಳಲ್ಲಿ ಒಂದೊಂದು ಕಾನೂನಗಳಿರುವುದು ಸರಿಯಲ್ಲ. ಎಲ್ಲಾ ರಾಜ್ಯಗಳಲ್ಲೂ ಕೇಂದ್ರದಿಂದ ಅಂಗೀಕೃತವಾದ ಒಂದೇ ರೀತಿಯ ಕಾನೂನು ಇರಬೇಕು' ಎಂದರು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಎನ್. ವೆಂಕಟಾಚಲ ಮತ್ತು ಆರ್.ವಿ. ರವೀಂದ್ರನ್, ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಡಾ. ವೈ. ಭಾಸ್ಕರ್ ರಾವ್, ಉಪಲೋಕಾಯುಕ್ತ ನ್ಯಾಯಮೂರ್ತಿ ಎಸ್.ಬಿ. ಮಜ್ಜಿಗೆ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications