ಭಾಸ್ಕರರಾವ್ ರಾಜೀನಾಮೆ : ಯಾರು, ಏನು ಹೇಳಿದರು?
ಬೆಂಗಳೂರು, ಡಿಸೆಂಬರ್ 09 : ವಿವಿಧ ಸಂಘಟನೆಗಳು, ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಂಗಳವಾರದಿಂದಲೇ ಜಾರಿಗೆ ಬರುವಂತೆ ಅವರ ರಾಜೀನಾಮೆಯನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ಅಂಗೀಕರಿಸಿದ್ದಾರೆ.
ಲೋಕಾಯುಕ್ತದಲ್ಲಿ ಭ್ರಷ್ಟಾಚಾರದ ನಡೆದಿದೆ ಎಂದು ಲೋಕಾಯುಕ್ತ ಬೆಂಗಳೂರು ನಗರ ಎಸ್ಪಿ ಸೋನಿಯಾ ನಾರಂಗ್ ಅವರು ಮೇ 11ರಂದು ಲೋಕಾಯುಕ್ತ ರಿಜಿಸ್ಟ್ರಾರ್ಗೆ ಪತ್ರ ಬರೆದಿದ್ದರು. ಆನಂತರ ನಡೆದ ಹಲವು ಬೆಳವಣಿಗೆಗಳ ಬಳಿಕ ವೈ. ಭಾಸ್ಕರ ರಾವ್ ಅವರು ಡಿಸೆಂಬರ್ 7ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. [ಕರ್ನಾಟಕ ಲೋಕಾಯುಕ್ತ ಹಗರಣದ Timeline]
ಕರ್ನಾಟಕ ಸರ್ಕಾರ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಿದೆ. ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿದ್ದು, ಅವರನ್ನು ಬಂಧಿಸಲಾಗಿದೆ. [ಭಾಸ್ಕರರಾವ್ ರಾಜೀನಾಮೆ]
ಲೋಕಾಯುಕ್ತದಲ್ಲಿ ಆರೋಪಗಳು ಕೇಳಿಬಂದ ಬಳಿಕ ಲೋಕಾಯುಕ್ತರ ರಾಜೀನಾಮೆಗೆ ಆಗ್ರಹಿಸುತ್ತಿದ್ದ ವಿವಿಧ ನಾಯಕರು ಭಾಸ್ಕರರಾವ್ ರಾಜೀನಾಮೆ ನೀಡಿರುವುದನ್ನು ಸ್ವಾಗತಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣದ ಬಗ್ಗೆ ಸೂಕ್ತವಾದ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಭಾಸ್ಕರರಾವ್ ರಾಜೀನಾಮೆ ಬಗ್ಗೆ ಯಾರು, ಏನು ಹೇಳಿದರು ಚಿತ್ರಗಳಲ್ಲಿ ನೋಡಿ......[ಕರ್ನಾಟಕ ಲೋಕಾಯುಕ್ತದಲ್ಲಿ ಇದೇನಿದು ಹಗರಣ?]
'ಲೋಕಾಯುಕ್ತವನ್ನು ಅಸ್ಥಿರ ಮಾಡೋಲ್ಲ'
'ಲೋಕಾಯುಕ್ತ ಸಂಸ್ಥೆಯನ್ನು ಸರ್ಕಾರ ಅಸ್ಥಿರ ಮಾಡೋಲ್ಲ. ಉಪ ಲೋಕಾಯುಕ್ತರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಭಾಸ್ಕರರಾವ್ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾಗಿರುವ ಲೋಕಾಯುಕ್ತ ಹುದ್ದೆ ನೇಮಕಕ್ಕೂ ಸರ್ಕಾರ ಕ್ರಮ ಕೈಗೊಳ್ಳಲಿದೆ' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
'ತುಂಬಾ ಪಶ್ಚಾತ್ತಾಪವಾಗಿದೆ'
'ನ್ಯಾಯಮೂರ್ತಿ ಭಾಸ್ಕರರಾವ್ ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸದಲ್ಲಿ ಲೋಕಾಯುಕ್ತಕ್ಕೆ ನೇಮಕ ಮಾಡಲಾಗಿತ್ತು. ಆದರೆ, ಲೋಕಾಯುಕ್ತ ಸಂಸ್ಥೆ ಈ ರೀತಿ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವುದರಿಂದ ಪಶ್ಚಾತ್ತಾಪವಾಗಿದೆ. ಭಾಸ್ಕರರಾವ್ ಅವರು ಮೂರು ತಿಂಗಳ ಹಿಂದೆಯೇ ರಾಜೀನಾಮೆ ಕೊಡಬೇಕಿತ್ತು' ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
'ಮೊದಲೇ ರಾಜೀನಾಮೆ ನೀಡಬೇಕಿತ್ತು'
'ಅಶ್ವಿನ್ ರಾವ್ ಅವರನ್ನು ಎಸ್ಐಟಿ ಬಂಧಿಸಿದ ತಕ್ಷಣ ಭಾಸ್ಕರರಾವ್ ರಾಜೀನಾಮೆ ನೀಡಬಹುದು ಎಂಬ ನಿರೀಕ್ಷೆ ಇತ್ತು. ನಾಲ್ಕು ತಿಂಗಳ ಮೊದಲು ರಾಜೀನಾಮೆ ನೀಡಿದ್ದರೆ ಲೋಕಾಯುಕ್ತ ಸಂಸ್ಥೆ ಘನತೆ ಕಾಪಾಡಿದಂತಾಗುತ್ತಿತ್ತು. ತಡವಾಗಿಯಾದರೂ ರಾಜೀನಾಮೆ ನೀಡಿದ ಭಾಸ್ಕರರಾವ್ ನಿರ್ಧಾರವನ್ನು ಸ್ವಾಗತಿಸುತ್ತೇನೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
'ಮೂರು ತಿಂಗಳ ಹಿಂದೆ ಈ ಕೆಲಸ ಮಾಡಬಹುದಿತ್ತು'
'ಭಾಸ್ಕರರಾವ್ ಅವರು ರಾಜೀನಾಮೆ ಪ್ರಹಸನವನ್ನು ಭಂಡತನದಿಂದ ಇಷ್ಟು ದಿನ ಎಳೆಯಬಾರದಿತ್ತು. ಇದೇ ಕೆಲಸವನ್ನು ಮೂರು ತಿಂಗಳ ಮೊದಲೇ ಮಾಡಿದ್ದರೆ ಅವರ ಮತ್ತು ಲೋಕಾಯುಕ್ತ ಸಂಸ್ಥೆಯ ಗೌರವ ಉಳಿಯುತ್ತಿತ್ತು' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
'ಭ್ರಷ್ಟಾಚಾರದಲ್ಲಿ ಬೇರೆಯವರ ಪಾಲಿಲ್ಲವೇ?'
'ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾ.ಭಾಸ್ಕರರಾವ್ ಮಾತ್ರ ಆರೋಪಿತರೇ?, ಅಲ್ಲಿ ನಡೆದಿರುವ ಹಗರಣದಲ್ಲಿ ಬೇರೆಯವರ ಪಾತ್ರವಿಲ್ಲವೇ?' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ. 'ಈ ಭ್ರಷ್ಟಾಚಾರ ಪ್ರಕರಣದಲ್ಲಿ ಬೇರೆಯವರು ಭಾಗಿಯಾಗಿಲ್ಲವೇ?, ಅವರ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಎಂದು ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ.
'ಭಾಸ್ಕರರಾವ್ ಅವರನ್ನು ಬಂಧಿಸಬೇಕು'
'ಭಾಸ್ಕರರಾವ್ ಅವರು ಲೋಕಾಯುಕ್ತ ಹುದ್ದೆಯ ಘನತೆಗೆ ಚ್ಯುತಿ ತಂದಿದ್ದಾರೆ. ಅವರನ್ನು ತಕ್ಷಣ ಬಂಧಿಸಬೇಕು. ಅವರು ಲೋಕಾಯುಕ್ತರಾಗಿ ನೀಡಿರುವ ಆದೇಶಗಳ ಕುರಿತು ತನಿಖೆ ನಡೆಸಬೇಕು' ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
'ಭಾಸ್ಕರರಾವ್ ನೇಮಿಸಿದ್ದು ಎಚ್.ಆರ್.ಭಾರದ್ವಾಜ್'
'ಅಂದು ರಾಜ್ಯಪಾಲರಾಗಿದ್ದ ಎಚ್.ಆರ್.ಭಾರದ್ವಾಜ್ ಅವರು ವೈ.ಭಾಸ್ಕರರಾವ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಿದ್ದು, ಹಾಗಾಗಿ ನೇಮಕದ ಹಿಂದೆ ಅಂದಿನ ಬಿಜೆಪಿ ಸರ್ಕಾರದ ಪಾತ್ರವಿಲ್ಲ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಭಾಸ್ಕರರಾವ್ ಅವರು ಉತ್ತಮವಾಗಿ ಕೆಲಸ ಮಾಡಬಹುದು ಎಂಬ ನಂಬಿಕೆ ಇತ್ತು. ಅವರು ನಮ್ಮ ನಂಬಿಕೆಯನ್ನು ಸುಳ್ಳು ಮಾಡಿದ್ದಾರೆ. ತಡವಾಗಿಯಾದರೂ ಅವರು ರಾಜೀನಾಮೆ ನೀಡಿರುವುದು ಸಂತಸದ ಸಂಗತಿ' ಎಂದು ಹೇಳಿದ್ದಾರೆ.
'ರಾಜೀನಾಮೆ ಅಂಗೀಕಾರ ಮಾಡಬಾರದಿತ್ತು'
'ಲೋಕಾಯುಕ್ತ ಪದಚ್ಯುತಿ ಪ್ರಕ್ರಿಯೆ ನಡೆಯುತ್ತಿರುವ ಈ ಹಂತದಲ್ಲಿ ಭಾಸ್ಕರರಾವ್ ರಾಜೀನಾಮೆಯನ್ನು ಅಂಗೀಕರಿಸಬಾರದಿತ್ತು. ಭ್ರಷ್ಟಾಚಾರದಲ್ಲಿ ಪರೋಕ್ಷವಾಗಿ ಭಾಗಿಯಾಗಿರುವುದರಿಂದ ಭಾಸ್ಕರರಾವ್ ಅವರನ್ನು ಬಂಧಿಸಬೇಕು' ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.