'ಸುಪ್ರೀಂಕೋರ್ಟ್ ಸೂಚನೆ ಕೊಡುವವರೆಗೂ ಏಕೆ ರಾಜ್ಯಕ್ಕೆ 1 ಪೈಸೆಯನ್ನೂ ಕೊಡಲಿಲ್ಲ ಮೋದಿಯವರೇ'
ಬೆಂಗಳೂರು, ಏಪ್ರಿಲ್ 27: ರಾಜ್ಯಕ್ಕೆ ಭೀಕರ ಬಿಸಿಲು ಬರಗಾಲ ಬಂದಿದೆ. ರಾಜ್ಯದ ಪಾಲಿನ ಬರ ಪರಿಹಾರ ಕೊಡಿ ಕೊಡಿ ಅಂತ ಕೇಳಿ ಕೇಳಿ ಸಾಕಾಯ್ತು. ದೆಹಲಿಗೆ ಬಂದು ಪ್ರತಿಭಟನೆ ಮಾಡಿದ್ವಿ. ಆದ್ರೂ ರಾಜ್ಯದ ಪಾಲಿನ ಹಣ ಕೊಡಲಿಲ್ಲ. ನಾವು ಕಾನೂನು ಹೋರಾಟ ಶುರು ಮಾಡಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆವು. ಸುಪ್ರೀಂಕೋರ್ಟ್ ಸ್ಪಷ್ಟ ಸೂಚನೆ ಕೊಡುವವರೆಗೂ ಏಕೆ ರಾಜ್ಯಕ್ಕೆ ಒಂದು ಪೈಸೆಯನ್ನೂ ಕೊಡಲಿಲ್ಲ ಮೋದಿಯವರೇ. ಇಂಥಾ ದ್ರೋಹ ಏಕೆ ಮಾಡಿದ್ರಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಮೋದಿಯವರೇ ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದ್ರಿ. ಪ್ರತಿಭಟನೆ ಮಾಡಿ ನೂರಾರು ರೈತರು ಮೃತಪಟ್ಟರೂ ಈ ರೈತರ ಸಾವಿನ ಬಗ್ಗೆ ನಿಮಗೆ ಸಣ್ಣ ಕರುಣೆಯೂ ಬರಲಿಲ್ಲ. ಮೋದಿಯವರೇ, ಡಾಲರ್ ಎದುರು ರೂಪಾಯಿ ಮೌಲ್ಯ ಕಡಿಮೆ ಮಾಡ್ತೀವಿ ಅಂದ್ರಿ. ಆದರೆ ಈಗ ಡಾಲರ್ ಎದುರು ರೂಪಾಯಿ ಮೌಲ್ಯ ಯಾವ ಮಟ್ಟಕ್ಕೆ ಏರಿಕೆ ಆಗಿದೆ ನೋಡಿ ಎಂದು ಹೇಳಿದರು.

ಮೋದಿಯವರೇ ವರ್ಷಕ್ಜೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರಿ. ಕೆಲಸ ಕೇಳಿದ್ರೆ ಪಕೋಡ ಮಾರಾಟ ಮಾಡಿ ಅಂದ್ರಿ. ಮೋದಿಯವರೇ, ಬೆಲೆ ಏರಿಕೆಗೆ ಬ್ರೇಕ್ ಹಾಕ್ತೀವಿ ಅಂತ ಭಾರತೀಯರನ್ನು ನಂಬಿಸಿ ಬಕ್ರಾ ಮಾಡಿದ್ರಿ. ಡೀಸೆಲ್, ಪೆಟ್ರೋಲ್, ಗೊಬ್ಬರ, ಗ್ಯಾಸ್ ಬೆಲೆ ಗಗನಕ್ಕೆ ಏರಿಸಿದ್ರಲ್ಲಾ ಸ್ವಾಮಿ. ಇಂಥಾ ನಂಬಿಕೆ ದ್ರೋಹನಾ ಸ್ವಾಮಿ ಮಾಡೋದು? ಎಂದು ಪ್ರಶ್ನಿಸಿದರು.
ಮೋದಿಯವರೇ, ನಾವು ದುಡ್ಡು ಕೊಡ್ತೀವಿ ಅಂದ್ರೂ ರಾಜ್ಯದ ಜನರಿಗೆ ಅಕ್ಕಿ ಕೊಡಲಿಲ್ಲವಲ್ಲಾ? ಇದು ನನ್ನ ಜನರ ಹೊಟ್ಟೆ ಮೇಲೆ ಹೊಡೆದ ಹಾಗಲ್ವಾ ಮಿಸ್ಟರ್ ಮೋದಿ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಇಡೀ ದೇಶದ ರೈತರ ಸಾಲ ಮನ್ನಾ ಆಗ್ತದೆ, ಪ್ರತಿ ಕುಟುಂಬದ ಮಹಿಳೆಗೆ ವರ್ಷಕ್ಕೆ ಒಂದೂ ಕಾಲು ಲಕ್ಷ ರೂಪಾಯಿ ಅಕೌಂಟಿಗೆ ಬಂದು ಬೀಳತ್ತೆ, ನಿರುದ್ಯೋಗಿ ಯುವಕರಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಕೊಡ್ತೀವಿ

ಸ್ವಾಮಿನಾಥನ್ ವರದಿಯಂತೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಚಿತ. ಈ ರೀತಿಯ 25 ಗ್ಯಾರಂಟಿಗಳು ಜಾರಿಯಾಗಲಿದ್ದು ಈ ಗ್ಯಾರಂಟಿ ಪತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರು ಸಹಿ ಹಾಕಿದ್ದಾರೆ
ಎಲ್ಲಾ ಗ್ಯಾರಂಟಿಗಳ ಲಕ್ಷ ಹಣ ಬ್ರೋಕರ್ ಗಳ ಹಾವಳಿ ಇಲ್ಲದೆ ನಿಮ್ಮ ಖಾತೆಗೆ ನೇರವಾಗಿ ಬಂದು ಬೀಳುತ್ತದೆ. ನೇಕಾರರಿಗೆ ಸಾಲ ಮನ್ನಾ ಮಾಡಿದೆ, ಮಗ್ಗಗಳಿಗೆ ಉಚಿತ ವಿದ್ಯುತ್ ಕೊಟ್ಟೆ. ಇನ್ನೂ ಹಲವು ಅನುಕೂಲ ನೇಕಾರರಿಗೆ ಮಾಡಿದ್ದು ನಾವೇ. ಬಿಜೆಪಿಯವರು ಏನೇನೂ ಮಾಡಲಿಲ್ಲ ಎಂದರು.
ಬಾರಿ ನೀವು ಬಿಜೆಪಿಯ ಗದ್ದಿಗೌಡರನ್ನು ಸೋಲಿಸಲೇ ಬೇಕು. ಕಾಂಗ್ರೆಸ್ಸಿನ ಸಂಯುಕ್ತ ಪಾಟೀಲ್ ಪಾರ್ಲಿಮೆಂಟಿನಲ್ಲಿ ನಿಮ್ಮ ಧ್ವನಿ ಆಗಿರ್ತಾರೆ. ಆದ್ದರಿಂದ ಗೆಲ್ಲಿಸಿ ಕಳಯಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಗದ್ದಿಗೌಡರೇ ಇಷ್ಟು ವರ್ಷ ನೀವು ಪಾರ್ಲಿಮೆಂಟಿನಲ್ಲಿ ರಾಜ್ಯದ ಪರವಾಗಿ ಬಾಯಿಯನ್ನೇ ಬಿಟ್ಟಿಲ್ಲ. ರಾಜ್ಯಕ್ಕೆ ಬರ ಬಂದಾಗಲೂ ಬಾಯಿ ಬಿಡಲಿಲ್ಲ. ಪ್ರವಾಹ ಬಂದಾಗಲೂ ಬಾಯಿ ಬಿಡಲಿಲ್ಲ. ಬಾಗಲಕೋಟೆ ಜಿಲ್ಲೆಯ ಜನರ ಪರವಾಗಿ, ಜಿಲಗಲೆಯ ಅಭಿವೃದ್ಧಿ ಪರವಾಗಿಯೂ ಬಾಯಿ ಬಿಡಲಿಲ್ಲ. ಇದು ನಿಮಗೆ ಬಿದ್ದ ಓಟಿಗೆ ನೀವು ಮಾಡಿದ ಅವಮಾನ ಅಲ್ಲವೇ ಎಂದು ಸಂಸದ ಗದ್ದಿಗೌಡರನ್ನು ಸಿಎಂ ಪ್ರಶ್ನಿಸಿದರು.
20 ವರ್ಷ ನಿಮ್ಮ ಪರವಾಗಿ ಒಂದೂ ಮಾತಾಡದ ಗದ್ದಿಗೌಡರನ್ನು ಮನೆಗೆ ಕಳುಹಿಸಿ. ಅವರು ಸ್ವಲ್ಪ ವಿಶ್ರಾಂತಿ ಪಡೆಯಲಿ. ಈ ಬಾರಿ ಸಂಯುಕ್ತ ಪಾಟೀಲ್ ಅವರನ್ನು ಗೆಲ್ಲಿಸಿಕೊಂಡು ಬನ್ನಿ. ಸಂಯುಕ್ತ ಪಾರ್ಲಿಮೆಂಟಿನಲ್ಲಿ ಬಾಗಲಕೋಟೆ ಜನರ ಧ್ವನಿ ಆಗಿರ್ತಾರೆ, ರಾಜ್ಯದ ಜನರ ಧ್ವನಿ ಆಗಿರ್ತಾರೆ ಎಂದರು.












Click it and Unblock the Notifications