ಬಿಜೆಪಿಯ 14 ಎಂಪಿಗಳಿಗೆ ಟಿಕೆಟ್ ಮಿಸ್: ಟಿಕೆಟ್ ವಂಚಿತ BJP ಸಂಸದರಿಗೆ ಗೋವಿಂದ ಗೋವಿಂದ ಎಂದ ಡಿ ಕೆ ಶಿವಕುಮಾರ್
ಮೈಸೂರು, ಏಪ್ರಿಲ್ 14: ಬಿಜೆಪಿ ಪಕ್ಷ 14 ಸಂಸದರಿಗೆ ಟಿಕೆಟ್ ನಿರಾಕರಿಸಿದೆ. ಯಾಕೆಂದರೆ ಅವರೆಲ್ಲರೂ ಸೋಲುತ್ತಾರೆ ಎಂದ ಮೊದಲೇ ಗೊತ್ತಿತ್ತು. ಟಿಕೆಟ್ ವಂಚಿತ ಬಿಜೆಪಿ ಸಂಸದರಾದ 'ಪ್ರತಾತ್ ಸಿಂಹ, ಡಿ.ವಿ.ಸದಾನಂದಗೌಡ ಸೇರಿದಂತೆ ಅನೇಕರಿಗೆ ಗೋವಿಂದ ಗೋವಿಂದ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ.
ಹುಣಸೂರು ಹಾಗು ಪಿರಿಯಾಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರ ಪರ ಪ್ರಚಾರದ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತನಾಡಿ, ಬಿಜೆಪಿಯವರು ಯಾಕೆ ಪ್ರತಾಪ್ ಸಿಂಹಗೆ ಟಿಕೆಟ್ ಕೊಡಲಿಲ್ಲ, ಶೋಭಕ್ಕ ನೀನ್ ಹೋಗಕ್ಕ ಎಂದು ಹೊರಗಡೆ ಕಳುಹಿಸಿಬಿಟ್ಟಿದ್ದಾರೆ, ಸಂವಿಧಾನ ಬದಲಾಯಿಸುತ್ತೇವೆ ಅಂತಿದ್ದ ಅನಂತಕುಮಾರ ಹೆಗಡೆ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿಗೂ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. ಈಶ್ವರಪ್ಪನನ್ನ ದೇವರೇ ಕಾಪಾಡಬೇಕು ಎಂದು ಹೇಳಿದ್ದಾರೆ.

ಈ ಚುನಾವಣೆ ಸತ್ಯ ಹಾಗು ಸುಳ್ಳಿನ ನಡುವಣ ಸಮರ. ಕೆಲವರು ಈ ಚುನಾವಣೆಯನ್ನು ಧರ್ಮ ಯುದ್ಧ ಎಂದು ಹೇಳುತ್ತಿದ್ದಾರೆ. ಆದರೆ ಇದು ಧರ್ಮ ಯುದ್ಧವೇ ಅಲ್ಲ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವಾ ಇಲ್ಲವಾ ಎಂಬ ತೀರ್ಮಾನ ಮಾಡುವ ಚುನಾವಣೆ.
ಕಾಂಗ್ರೆಸ್ ಅಧ್ಯಕ್ಷನಾಗಿ ನೀವು ನಮ್ಮ ಮೇಲೆ ನಂಬಿಕೆ ಇಟ್ಟು ಇಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಸರ್ವಜ್ಞ ನಂಬಿಕೆಗಿಂತ ದೊಡ್ಡ ಗುಣವಿಲ್ಲ ಎಂದು ಹೇಳಿದ್ದಾರೆ. ನಾವು 25 ವರ್ಷಗಳ ನಂತರ ಈ ಕ್ಷೇತ್ರದಲ್ಲಿ ಸ್ವಾಭಿಮಾನಿ ಒಕ್ಕಲಿಗ ಅಭ್ಯರ್ಥಿಗೆ ಟಿಕೆಟ್ ನೀಡಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ 8 ಜನ ಒಕ್ಕಲಿಗರಿಗೆ ಟಿಕೆಟ್ ನೀಡಿದ್ದೇವೆ. ನಮ್ಮ ಪಕ್ಷ ಸದಾ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದೆ. ಎಲ್ಲಾ ವರ್ಗದವರಿಗೆ ಸರ್ವರಿಗೂ ಸಮಪಾಲು, ಸಮಬಾಳು ತತ್ವದ ಮೇಲೆ ಆಡಳಿತ ಮಾಡುತ್ತಿದ್ದೇವೆ.
ನಮ್ಮ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ನಮ್ಮ ಸಂಪುಟದಲ್ಲಿ ಮೊದಲ ಬಾರಿಗೆ ಮೂವರು ಪರಿಶಿಷ್ಟ ಜಾತಿಯವರಿಗೆ ಮಂತ್ರಿ ಸ್ಥಾನ ನೀಡಿದ್ದೇವೆ. ಆ ಮೂಲಕ ನೊಂದ ಜನರಿಗೆ ಅವಕಾಶ ನೀಡಿದ್ದೇವೆ.ಈ ಜಿಲ್ಲೆಯಲ್ಲಿ ನೀವು ನಮಗೆ ಶಕ್ತಿ ತುಂಬಿದ್ದೀರಿ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆಂದ. ನಾವು ಕಳೆದ ಚುನಾವಣೆ ವೇಳೆ ಕೊಟ್ಟ ಮಾತಿನಂತೆ ಅಧಿಕಾರ ತೆಗೆದುಕೊಂಡ ಮೊದಲ ದಿನವೇ ಮೊದಲ ತಾಸಿನಲ್ಲಿ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಅನುಮೋದನೆ ನೀಡಿದೆವು.
ಬಿಜೆಪಿ ಕಳೆದ ಚುನಾವಣೆಯಲ್ಲಿ 300 ಸೀಟು ಗೆದ್ದು ಏನು ಮಾಡಿದ್ದಾರೆ? ಅವರು ಏನು ಹೇಳಿದ್ದರು? ವಿದೇಶಿ ಕಪ್ಪುಹಣ ತಂದು ನಿಮ್ಮ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು. ಹಾಕಿದ್ದಾರಾ? ಇಲ್ಲ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ಈ ಭಾಗದ ರೈತರ ಆದಾಯ ಡಬಲ್ ಆಯಿತಾ? ಇಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು, ಉದ್ಯೋಗ ಕೊಟ್ಟರೆ? ಇಲ್ಲ. ಉದ್ಯೋಗ ಕೇಳಿದ ಯುವಕರಿಗೆ ಪಕೋಡಾ ಮಾರಿ ಎಂದರು.
ನಾವು ತಿಂಗಳಿಗೆ 200 ಯೂನಿಟ್ ವಿದ್ಯುತ್, ಬಡ ಕುಟುಂಬದ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ, ಅನ್ನಭಾಗ್ಯ ಯೋಜನೆ, ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುತ್ತಿದ್ದೇವೆ. ಇದು ಸತ್ಯವಲ್ಲವೇ? ಎಂದು ಪ್ರಶ್ನಿಸಿದರು.
ಹೀಗಾಗಿ ಇದು ಸತ್ಯ ಹಾಗೂ ಸುಳ್ಳಿನ ನಡುವಣ ಸಮರವಾಗಿದೆ. ನೀವು ಸತ್ಯಕ್ಕೆ ಮತ ನೀಡುತ್ತಿರೋ, ಸುಳ್ಳಿಗೆ ಮತ ನೀಡುತ್ತೀರೋ? ಜೆಡಿಎಸ್ ಕಾರ್ಯಕರ್ತರು ಈಗ ಅಂತಂತ್ರರಾಗಿದ್ದಾರೆ. ದೇವೇಗೌಡರ ಅಳಿಯನೇ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿರುವಾಗ ಪಕ್ಷದ ಕಾರ್ಯಕರ್ತರು ಯಾಕೆ ಆ ಪಕ್ಷದಲ್ಲಿ ಇರಬೇಕು. ನಿಮ್ಮ ರಕ್ಷಣೆಗೆ ನಾವು ಇದ್ದೇವೆ. ನೀವು ಅವಕಾಶವಾದಿಗಳ ವಿರುದ್ಧ ಹೋರಾಟ ಮಾಡಿ.
ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ, ರಾಮನಗರದಲ್ಲಿ ಅವರ ಮಗನನ್ನು ನಿಲ್ಲಿಸಿದ್ದರು. ರಾಮನಗರದಿಂದ ಅವರು ಸಂಸದರು ಆಗಿದ್ದರು, ಮುಖ್ಯಮಂತ್ರಿ ಕೂಡ ಆಗಿದ್ದರು. ಅವರ ತಂದೆ ಪ್ರಧಾನಿಯೂ ಆಗಿದ್ದರು. ಅಂತಹ ಕ್ಷೇತ್ರದಲ್ಲಿ ಅವರ ಕುಟುಂಬದ ಅಳಿಯನ್ನು ಬಿಜೆಪಿಯಿಂದ ನಿಲ್ಲಿಸಿದ್ದಾರೆ. ಹಾಸನ, ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ನಿಮ್ಮ ಕುಟುಂಬದವರಿಗೆ ಟಿಕೆಟ್ ನೀಡಿದ್ದೀರಿ. ನಿಮ್ಮ ಪಕ್ಷದಲ್ಲಿ ಬೇರೆ ಕಾರ್ಯಕರ್ತರು ಇರಲಿಲ್ಲವೇ? ನಿಮ್ಮ ಪಕ್ಷದಲ್ಲಿ ಒಬ್ಬ ಕಾರ್ಯಕರ್ತ ಇಲ್ಲವೇ?
400 ಸೀಟು ಗೆಲ್ಲುತ್ತೇವೆ ಎನ್ನುವ ಬಿಜೆಪಿ 120 ಕಡೆಗಳಲ್ಲಿ ಅಭ್ಯರ್ಥಿ ಬದಲಿಸಿದ್ದಾರೆ. ಯಾಕೆ? ಪ್ರತಾಪ್ ಸಿಂಹ ಮುಖ ನೋಡಿ ಜನ ಮತ ಹಾಕುವುದಿಲ್ಲವೇ? ಶ್ರೀನಿವಾಸ್ ಪ್ರಸಾದ್ ಅವರಿಗೆ ಅಪಮಾನ ಮಾಡಿದ್ದಾರೆ. ಹೀಗೆ ಕೇಂದ್ರ ಸಚಿವರು, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಟಿಕೆಟ್ ನೀಡಿಲ್ಲ. ಕಾರಣ ಅವರನ್ನು ನಿಲ್ಲಿಸಿದರೆ ಗೆಲ್ಲಲ್ಲ ಎಂದು ಟಿಕೆಟ್ ನೀಡಿಲ್ಲ. ವಿಧಾನ ಸಭೆ ಚುನಾವಣೆಯಲ್ಲಿ ಹೇಗೆ 136 ಸೀಟು ಕೊಟ್ಟಿದ್ದೀರಿ ಅದೇರೀತಿ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸೀಟು ಗೆಲ್ಲಿಸುವುದು ಖಚಿತ ಎಂದರು.












Click it and Unblock the Notifications