ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್: 5-10 ಹಾಲಿ ಸಂಸದರಿಗೆ ಟಿಕೆಟ್ ಮಿಸ್- ಇಲ್ಲಿದೆ ಲಿಸ್ಟ್?
ನವದೆಹಲಿ, ಮಾರ್ಚ್ 07: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ 400 ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಗುರಿಯನ್ನ ಹಾಕಿಕೊಂಡಿದೆ. ಈಗಾಗಲೇ 195 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಬುಧವಾರ ಸಂಜೆಯಿಂದ ತಡರಾತ್ರಿವರೆಗೂ ಎರಡನೇ ಪಟ್ಟಿಯನ್ನ ಅಂತಿಮಗೊಳಿಸುವ ನಿಟ್ಟಿನಲ್ಲಿ ಸುದೀರ್ಘ ಮೀಟಿಂಗ್ ನಡೆಸಿದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಕುರಿತು ಬಿಜೆಪಿ ಹೈಕಮಾಂಡ್ ರಾಜ್ಯದ ಪ್ರಮುಖ ನಾಯಕರನ್ನ ದೆಹಲಿಗೆ ಕರೆಸಿಕೊಂಡು ಮ್ಯಾರಾಥಾನ್ ಸಭೆ ನಡೆಸಿದೆ. ಸಭೆಯಲ್ಲಿ ರಾಜ್ಯ ನಾಯಕರಾದ ಯಡಿಯೂರಪ್ಪ, ಬಿ.ಎಲ್ ಸಂತೋಷ್, ಬಿ.ವೈ ವಿಜಯೇಂದ್ರ, ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಸೇರಿ ಅನೇಕ ನಾಯಕರು ಭಾಗಿಯಾಗಿದ್ದಾರೆ. ಈ ಸಭೆಯಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಕೋರ್ ಕಮಿಟಿ ಸಭೆಯ ನಂತರ, ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಮೂರರಿಂದ ನಾಲ್ಕು ಹೆಸರನ್ನು ಪಕ್ಷದ ಹೈಕಮಾಂಡ್ಗೆ ಕಳುಹಿಸಲಾಗಿದೆ. ಎಲ್ಲಾ 28 ಲೋಕಸಭಾ ಸ್ಥಾನಗಳಿಗೆ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಒಟ್ಟಿಗೆ ಘೋಷಿಸಲಾಗುವುದು. ಬಿಜೆಪಿಗೆ 25 ಮತ್ತು ಜೆಡಿಎಸ್ಗೆ ಮೂರು ಸ್ಥಾನಗಳು ಸಿಗಬಹುದು ಎಂದು ಮಾಹಿತಿ ಲಭ್ಯವಾಗಿದೆ. ಅಲ್ಲದೇ ಈ ಬರಿ 25 ಜನ ಹಾಲಿ ಸಂಸದರ ಪೈಕಿ 5 ರಿಂದ 10 ಜನ ಸಂಸದರಿಗೆ ಟಿಕೆಟ್ ಕೈ ತಪ್ಪಿಲಿದೆ ಎಂದು ಹೇಳಲಾಗಿದೆ.
ಇನ್ನೂ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕೆಲ ಕ್ಷೇತ್ರಗಳ ಅಭ್ಯರ್ಥಿಗಳನ್ನ ಬದಲಾಯಿಸುವ ಬಗ್ಗೆ ಚರ್ಚೆ ನಡೆದಿದ್ದು, ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ವಿಚಾರದಲ್ಲಿ ಅನುಸರಿಸಿದ ನಿಯಮವನ್ನ ಲೋಕಸಭಾ ಚುನಾವಣೆಗೆ ಅನುಸರಿಸಬೇಕು ಎನ್ನುವ ಚರ್ಚೆಯಾಗಿತ್ತು.ಈ ಚರ್ಚೆಯಿಂದಾಗಿ ಮೊದಲು 13 ಕ್ಷೇತ್ರದಲ್ಲಿ ಬದಲಾವಣೆ ಮಾಡ್ತಾರೆ ಎನ್ನಲಾಗಿತ್ತು.
ಆದರೆ, ಇದೀಗ 5 ರಿಂದ 10 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನ ಬದಲಿಸುವ ಬಗ್ಗೆ ಚರ್ಚೆ ನಡೆದಿದೆ. ಬೀದರ್ ಸಂಸದ ಭಗವಂತ ಖೂಬಾ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ಚಿತ್ರದುರ್ಗ ಸಂಸದ ಎ ನಾರಾಯಣಸ್ವಾಮಿ, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ, ಬೆಳಗಾವಿ ಸಂಸದೆ ಮಂಗಳಾ ಅಂಗಡಿ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿಎಸ್ಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರತಿಯೊಂದು ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಅಂಶದ ಬಗ್ಗೆ ಸಮೀಕ್ಷೆ ನಡೆಸಲಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತತರ ಸಂಪರ್ಕ ಕಳೆದುಕೊಂಡ ಸಂಸದರಿಗೆ ಟಿಕೆಟ್ ನೀಡುವುದನ್ನು ಪಕ್ಷ ವಿರೋಧಿಸುತ್ತಿದೆ. ಸಂಸದರಾಗಿ ಅವರ ಸಾಧನೆಯನ್ನೂ ಪಕ್ಷದ ನಾಯಕತ್ವ ಪರಿಗಣಿಸಿದೆ ಎಂದು ತಿಳಿದು ಬಂದಿದೆ.
ಇನ್ನೂ ಈ ಅಂಶಗಳ ಹೊರತಾಗಿ ಪಕ್ಷವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬಲ್ಲ ಹೊಸ ಮುಖಗಳನ್ನು ಪರಿಗಣಿಸಲಾಗುವುದು. ನಾವು ಮುಂದಿನ ಪೀಳಿಗೆಯ ನಾಯಕರನ್ನು ರೂಪಿಸುತ್ತಿದ್ದೇವೆ. ಕೆಲವು ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರು ತಮ್ಮ ಸಂಸದರ ಕಾರ್ಯವೈಖರಿಯಿಂದ ಅತೃಷ್ತಿಗೊಂಡಿದ್ದಾರೆ. ಇದನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಮುಖಂಡರು ತಿಳಿಸಿದರು.
ಬಿಜೆಪಿ ಅಭ್ಯರ್ಥಿಗಳ ಫೈನಲ್ ಲಿಸ್ಟ್?
ಬೆಳಗಾವಿ - ಜಗದೀಶ್ ಶೆಟ್ಟರ್
ಚಿಕ್ಕೋಡಿ - ಅಣ್ಣಾ ಸಾಹೇಬ್ ಜೊಲ್ಲೆ
ಬೀದರ್ - ಭಗವಂತ್ ಖೂಬಾ
ಕಲಬುರಗಿ - ಉಮೇಶ್ ಜಾಧವ್
ವಿಜಯಪುರ - ರಮೇಶ್ ಜಿಗಜಿಣಗಿ
ಬಾಗಲಕೋಟೆ - ಪಿಸಿ ಗದ್ದಿಗೌಡರ್
ರಾಯಚೂರು - ರಾಜಾ ಅಮರೇಶ್ವರ್ ನಾಯಕ / ಬಿವಿ ನಾಯಕ
ಕೊಪ್ಪಳ - ಸಂಗಣ್ಣ ಕರಡಿ / ಡಾ ಬಸವರಾಜ್ ಕ್ಯಾವಟರ್
ಧಾರವಾಡ - ಪ್ರಹ್ಲಾದ್ ಜೋಶಿ
ಹಾವೇರಿ - ಬಿಸಿ ಪಾಟೀಲ್ / ಕೆಇ ಕಾಂತೇಶ್
ಬಳ್ಳಾರಿ - ಬಿ ಶ್ರೀರಾಮುಲು
ದಕ್ಷಿಣ ಕನ್ನಡ - ನಳಿನ್ ಕುಮಾರ್ ಕಟೀಲ್
ಉತ್ತರ ಕನ್ನಡ - ಅನಂತ ಕುಮಾರ್ ಹೆಗ್ಡೆ, ವಿಶ್ವೇಶ್ವರ ಹೆಗಡೆ ಕಾಗೇರಿ
ಉಡುಪಿ - ಚಿಕ್ಕಮಗಳೂರು - ಶೋಭಾ ಕರಂದ್ಲಾಜೆ
ಶಿವಮೊಗ್ಗ - ಬಿವೈ ರಾಘವೇಂದ್ರ
ಚಿತ್ರದುರ್ಗ - ಎ ನಾರಾಯಣಸ್ವಾಮಿ
ದಾವಣಗೆರೆ - ಜಿಎಂ ಸಿದ್ದೇಶ್ವರ್
ತುಮಕೂರು - ವಿ ಸೋಮಣ್ಣ
ಬೆಂಗಳೂರು ಉತ್ತರ - ನಿರಂತರ ಗಣೇಶ್
ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ
ಬೆಂಗಳೂರು ಸೆಂಟ್ರಲ್ - ಜೈಶಂಕರ್ / ಪಿಸಿ ಮೋಹನ್
ಬೆಂಗಳೂರು ಗ್ರಾಮಾಂತರ - ಡಾ ಸಿಎನ್ ಮಂಜುನಾಥ್
ಚಿಕ್ಕಬಳ್ಳಾಪುರ - ಡಾ ಕೆ ಸುಧಾಕರ್ / ಅಲೋಕ್ ವಿಶ್ವನಾಥ್
ಮೈಸೂರು - ಪ್ರತಾಪ್ ಸಿಂಹ / ಸಾರಾ ಮಹೇಶ್
ಚಾಮರಾಜನಗರ - ಡಾ ಮೋಹನ್ ಕುಮಾರ್ / ಎಸ್ ಬಾಲರಾಜ್
ಮಂಡ್ಯ - ಹೆಚ್ ಡಿ ಕುಮಾರಸ್ವಾಮಿ/ ಸಿ ಎಸ್ ಪುಟ್ಟರಾಜು
ಹಾಸನ - ಪ್ರಜ್ವಲ್ ರೇವಣ್ಣ
ಕೋಲಾರ - ಜೆಡಿಎಸ್ ಕಾರ್ಯಕರ್ತನಿಗೆ ಟಿಕೆಟ್












Click it and Unblock the Notifications