Government Employee; ಸರ್ಕಾರಿ ನೌಕರರಿಗೆ ಚುನಾವಣಾ ಸಮಯದ ನಿಯಮಗಳು
ಬೆಂಗಳೂರು, ಮಾರ್ಚ್ 23: ಲೋಕಸಭೆ ಚುನಾವಣೆ 2024 ವೇಳಾಪಟ್ಟಿ ಘೋಷಣೆಯಾಗಿದೆ. ಕರ್ನಾಟಕದ 28 ಕ್ಷೇತ್ರಗಳಿಗೆ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯದಲ್ಲಿ ಈಗಾಗಲೇ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಈಗ ಸರ್ಕಾರಿ ಅಧಿಕಾರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿ, ಚುನಾವಣಾ ಆಯೋಗದ ನಿರ್ದೇಶನದಂತೆ ಕೆಲಸ ಮಾಡಬೇಕಿದೆ. ಹಲವು ಚುನಾವಣಾ ಅಧಿಕಾರಿ/ ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ.

ಚುನಾವಣಾ ಸಮಯದಲ್ಲಿ ಸರ್ಕಾರಿ ನೌಕರರಿಗೆ ಇರುವ ನಿಯಮಗಳೇನು?. ಈ ಕುರಿತು ಆಯುಕ್ತರು, ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಅಲ್ಲದೇ ಅವಶ್ಯವೆನಿಸಿದಲ್ಲಿ ರಾಜ್ಯ ಚುನಾವಣಾ ಆಯೋಗವು ಆದೇಶಗಳನ್ನು, ನಿರ್ದೇಶನಗಳನ್ನು ಮತ್ತು ಸೂಚನೆಗಳನ್ನು ಹೊರಡಿಸುತ್ತದೆ ಎಂದು ಹೇಳಿದೆ.
ಸರ್ಕಾರಿ ನೌಕರರ ನಿಯಮಗಳು
* ಚುನಾವಣೆಯ ಕಾರ್ಯಕ್ಕಾಗಿ ನಿಯೋಜಿಸಿದ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಚುನಾವಣೆಯ
ಕಾರ್ಯಕ್ಕಾಗಿ ಜಿಲ್ಲಾಧಿಕಾರಿಗಳು ಯಾವುದೇ ಸರ್ಕಾರಿ ಅಥವಾ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಯ ಸೇವೆಯನ್ನು ಅಂತಹವರ ಸೇವೆಯನ್ನು ತುರ್ತಾಗಿ ಅಪೇಕ್ಷಿಸಿದಾಗ ಒದಗಿಸತಕ್ಕದ್ದು.
* ಚುನಾವಣೆಯ ಕಾರ್ಯ ನಿರ್ವಹಣೆಗಾಗಿ ತೆಗೆದುಕೊಂಡ ಸರ್ಕಾರಿ ನೌಕರರು ಅಥವಾ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಅಥವಾ ಇತರೆ ಸಿಬ್ಬಂದಿಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಪರಿಸ್ಥಿತಿಯನ್ನು ಪರಿಗಣಿಸಿ ಒಂದು ಅಥವಾ ಎರಡು ದಿನಗಳ ಸಾಂದರ್ಭಿಕ ರಜೆಯನ್ನು ಹೊರತು ಪಡಿಸಿ ರಜೆಯನ್ನು ಮಂಜೂರು ಮಾಡಬಾರದು.
* ರಾಜ್ಯ ಚುನಾವಣಾ ಆಯೋಗದ ಲಿಖಿತ ಪೂರ್ವಾನುಮತಿ ಇಲ್ಲದೆ ಸರ್ಕಾರವು ಚುನಾವಣಾ ಪ್ರಕ್ರಿಯೆ ಬಗ್ಗೆ ಆಯೋಗವು ಘೋಷಿಸಿದ ದಿನಾಂಕದಿಂದ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಅಧಿಕಾರಿಗಳನ್ನು ಅಥವಾ. ಸಿಬ್ಬಂದಿಯನ್ನು ವರ್ಗಾವಣೆ ಮಾಡತಕ್ಕದ್ದಲ್ಲ. ಚುನಾವಣಾ ಕಾರ್ಯಕ್ಕೆ ನಿಯೋಜಿಸಿಕೊಂಡಂತಹ ಸರ್ಕಾರಿ ನೌಕರರನ್ನು ಅವರು ಕಾರ್ಯ ನಿರ್ವಹಿಸುತ್ತಿರುವ ಸ್ಥಳದಿಂದ ವರ್ಗಾವಣೆ ಮಾಡತಕ್ಕದ್ದಲ್ಲ. ಈ ನಿಬಂಧನೆ ಪೊಲೀಸ್ ಇಲಾಖೆಗೂ ಅನ್ವಯಿಸುತ್ತದೆ
* ಚುನಾವಣೆಗಳಲ್ಲಿ ಸರ್ಕಾರಿ ನೌಕರರು ಸಂಪೂರ್ಣವಾಗಿ ನಿಷ್ಪಕ್ಷಪಾತವಾಗಿ ಇರತಕ್ಕದ್ದು ಮತ್ತು ಸ್ಪರ್ಧೆಯಲ್ಲಿರುವ ಯಾವುದೇ ಅಭ್ಯರ್ಥಿ ಅಥವಾ ಪಕ್ಷದ ಪರವಾಗಿ ಅಥವಾ ವಿರೋಧವಾಗಿ ಪ್ರಚಾರ ಕಾರ್ಯದಲ್ಲಿ ತೊಡಗತಕ್ಕದ್ದಲ್ಲ.
* ಸಚಿವರು ಅವರ ಚುನಾವಣಾ ಪ್ರವಾಸಗಳ ಸಮಯದಲ್ಲಿ ಇತರೆ ವ್ಯಕ್ತಿಗಳ ಗೃಹಗಳಲ್ಲಿ ಏರ್ಪಡಿಸುವ ಕಾರ್ಯಕ್ರಮಗಳ ಆಹ್ವಾನವನ್ನು ಒಪ್ಪಿಕೊಂಡಿದ್ದಲ್ಲಿ, ಸರ್ಕಾರಿ ನೌಕರರು ಅಂತಹ ಕಾರ್ಯಕ್ರಮಗಳಿಗೆ ಸಚಿವರ ಜೊತೆಯಲ್ಲಿ ಹೋಗತಕ್ಕದ್ದಲ್ಲ. ಮತ್ತು ಅಂತಹ ಕಾರ್ಯಕ್ರಮದಲ್ಲಿ ಭಾಗವಹಿಸತಕ್ಕದ್ದಲ್ಲ.
* ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿಯನ್ನು ಹೊಂದಿರುವ ಸರ್ಕಾರಿ ನೌಕರರು ಮತ್ತು ಸುರಕ್ಷತೆಗಾಗಿ ನಿಯೋಜಿಸಲಾದ ರಕ್ಷಣಾ ಸಿಬ್ಬಂದಿಯನ್ನು ಹೊರತುಪಡಿಸಿ, ಇತರೆ ಸರ್ಕಾರಿ ನೌಕರರು ಸಚಿವರು ಏರ್ಪಡಿಸುವ ಚುನಾವಣಾ ಸಭೆಗಳಲ್ಲಿ ಭಾಗವಹಿಸತಕ್ಕದ್ದಲ್ಲ.
* ಸರ್ಕಾರಿ ಸಿಬ್ಬಂದಿ ಅಥವಾ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಯು ಯಾವುದೇ ಅಭ್ಯರ್ಥಿ ಅಥವಾ ಪಕ್ಷದ ಪರವಾಗಿ ಪ್ರಚಾರ ಮಾಡತಕ್ಕದ್ದಲ್ಲ ಮತ್ತು ಪ್ರಭಾವವನ್ನು ಬೀರತಕ್ಕದ್ದಲ್ಲ ಅಥವಾ ಪ್ರತ್ಯಕ್ಷವಾಗಿಯಾಗಲಿ, ಪರೋಕ್ಷವಾಗಿಯಾಗಲಿ ಹಸ್ತಕ್ಷೇಪ ಮಾಡತಕ್ಕದ್ದಲ್ಲ.
ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪಕ್ಷಗಳಿಗೆ, ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳಿಗೆ, ಸಚಿವರುಗಳಿಗೆ, ಸರ್ಕಾರಿ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ಸಾರ್ವಜನಿಕ ಸೇವೆಯಲ್ಲಿರುವ ಇತರೆ ನೌಕರರುಗಳಿಗೆ ಮಾರ್ಗಸೂಚಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ.
ಈ ನಿಯಮಗಳು ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವ ದಿನಾಂಕ ಅಥವಾ ರಾಜ್ಯ ಚುನಾವಣಾ ಆಯೋಗ ನಿಗಿದಿಪಡಿಸುವ ದಿನಾಂಕದಿಂದ ಚುನಾವಣೆಯ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅಥವಾ ರಾಜ್ಯ ಚುನಾವಣಾ ಆಯೋಗವು ಪ್ರಕಟಿಸಿದಂತೆ ಜಾರಿಯಲ್ಲಿರುತ್ತದೆ ಎಂದು ಹೇಳಿದೆ.
ಈ ನಿಯಮಗಳಲ್ಲಿ ಉಪಯೋಗಿಸುವ ಪದಗಳು ಮತ್ತು ಶಬ್ದ ಪ್ರಯೋಗಗಳು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993, ಕರ್ನಾಟಕ ಮುನಿಸಿಪಾಲಿಟೀಸ್ ಅಧಿನಿಯಮ 1964, ಮುನಿಸಿಪಲ್ ಕರ್ನಾಟಕ ಕಾರ್ಪೋರೇಷನ್ಸ್ ಅಧಿನಿಯಮ 1976 ಮತ್ತು ಅವುಗಳ ಅಡಿಯಲ್ಲಿ ರಚಿತವಾದ ನಿಯಮಗಳಲ್ಲಿ ಹೊಂದಿರುವ ಅರ್ಥವನ್ನೇ ಹೊಂದಿರುತ್ತದೆ ಎಂದು ತಿಳಿಸಿದೆ.












Click it and Unblock the Notifications