ಲೋಕಸಭಾ ಚುನಾವಣೆ: ಡಿ.ಕೆ ಸುರೇಶ್ಗೆ ಸೋಲಿಸಲು ಒಂದಾದ ಎಚ್ಡಿಕೆ-ಸಿಪಿವೈ, ಯೋಗೇಶ್ವರ್ ಮೈತ್ರಿ ಅಭ್ಯರ್ಥಿ
ರಾಮನಗರ, ನವೆಂಬರ್ 04: 'ನನ್ನ ಶತ್ರುವಿನ ಶತ್ರು ನನ್ನ ಮಿತ್ರ' ಈ ಮಾತನ್ನು ನೀವು ಅನೇಕ ಬಾರಿ ಅನೇಕ ಸಂದರ್ಭಗಳಲ್ಲಿ ಕೇಳಿರಬಹುದು. ಆದರೆ ರಾಜಕೀಯದಲ್ಲಿ ಈ ಮಾತು ಅನುದಿನವು ಪ್ರಸ್ತುತ. ಒಬ್ಬ ಪ್ರಬಲ ವ್ಯಕ್ತಿಗೆ ಸೋಲುಣಿಸಬೇಕಾದರೆ ಎರಡು ಪ್ರಬಲ ಪಕ್ಷ ಒಂದಾಗುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಹಗಲೂ ರಾತ್ರಿ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತ, ಬದ್ಧ ವೈರಿಗಳಿಂತಿದ್ದವರು ಇದೀಗ ಓರ್ವನ ಸೋಲಿಗಾಗಿ ಕೈ ಜೋಡಿಸಿದ್ದಾರೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. ಲೋಕಸಭಾ ಚುನಾವಣೆ ಇಡೀ ದೇಶಕ್ಕಾದರೂ ಈ ಹೊಸ ಬೆಳವಣಿಗೆ ನಡೆದಿರುವುದು ನಮ್ಮ ಕರ್ನಾಟಕದಲ್ಲಿ ಅದರಲ್ಲೂ ರಾಮನಗರದಲ್ಲಿ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ ಸುರೇಶ್ಗೆ ಸೋಲಿಸಲು ತಂತ್ರಗಳನ್ನು ಹೆಣೆಯಲಾಗುತ್ತಿದೆ.

ಈವರೆಗೂ ಬದ್ಧ ರಾಜಕೀಯ ವೈರಿಗಳಂತಿದ್ದ ಬಿಜೆಪಿಯ ಸಿ.ಪಿ ಯೋಗೇಶ್ವರ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಡಿ.ಕೆ ಸುರೇಶ್ಗೆ ಸೋಲಿಗಾಗಿ ಒಂದಾಗಿದ್ದಾರೆ. ಕೆಂಪೇಗೌಡ ಜಯಂತಿ ನೆಪದಲ್ಲಿ ಇತ್ತೀಚಿಗೆ ದುಬೈಗೆ ತೆರಳಿದ್ದ ಸಿ.ಪಿ ಯೋಗೇಶ್ವರ್ ಹಾಗೂ ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರದ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಒಟ್ಟಾಗಿ ತಂತ್ರ ರೂಪಿಸಿದ್ದಾರೆ ಎಂದು ವರದಿಯಾಗಿದೆ.
ರಾಮನಗರ, ಕನಕಪುರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಡಿ.ಕೆ ಸಹೋದರರ ಕೋಟೆ ಭದ್ರವಾಗಿದೆ. ಹೀಗಾಗಿ ಈ ಚಕ್ರವ್ಯೂಹ ಭೇದಿಸಿ ಗೆಲುವು ಸಾಧಿಸಲು ಪ್ರಬಲ ಅಭ್ಯರ್ಥಿಯೇ ಬೇಕು. ಹೀಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಿ.ಪಿ ಯೋಗೇಶ್ವರ್ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ.

ಕಾಂಗ್ರೆಸ್ ಭದ್ರಕೋಟೆಯಲ್ಲಿ ಮೈತ್ರಿ ಹೋರಾಟ
ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಸಂಸದ ಡಿ.ಕೆ ಸುರೇಶ್ ಹಾಗೂ ಡಿಸಿಎಂ ಡಿ.ಕೆ ಸುರೇಶ್ ಪಾರುಪತ್ಯ ಜೋರಾಗಿದೆ. ಇದೀಗ ರಾಮನಗರದಲ್ಲಿಯೂ ಕಾಂಗ್ರೆಸ್ ಬಲಿಷ್ಠವಾಗಿದೆ. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದ್ದರು. ಅದರಲ್ಲೂ ಕುಮಾರಸ್ವಾಮಿಯ ಜೆಡಿಎಸ್ ಭದ್ರಕೋಟೆ ರಾಮನಗರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದ್ದರು. ಇದು ಜೆಡಿಎಸ್ ನಿದ್ದೆ ಗೆಡಿಸಿತ್ತು.
ಇನ್ನು ಸತತ ಸೋಲಿನಿಂದ ಕೆಂಗೆಟ್ಟಿರುವ ಸಿ.ಪಿ ಯೋಗೇಶ್ವರ್ ಎದುರು ರಾಜಕೀಯ ಅಸ್ಥಿತ್ವದ ಪ್ರಶ್ನೆ ಇದೆ. ಹೀಗಾಗಿ ಮುಂದೆ ಸಿಗುವ ಒಂದೊಂದು ಅವಕಾಶವು ಯೋಗೇಶ್ವರ್ ಪಾಲಿಗೆ ಅತ್ಯಮೂಲ್ಯ. ಹೀಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಿ.ಪಿ ಯೋಗೇಶ್ವರ್ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದರೆ ಗೆಲುವು ಸಾಧಿಸಲೇ ಬೇಕಾದ ಅನಿವಾರ್ಯತೆ ಇದೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕಾಂಗ್ರೆಸ್ಗೆ ಸಮಬಲದಂತಿರುವ ಜೆಡಿಎಸ್ ಜೊತೆ ಸಿ.ಪಿ ಯೋಗೇಶ್ವರ್ ಕೈ ಜೋಡಿಸಿದ್ದಾರೆ.
ಇನ್ನು ಈಗಾಗಲೇ ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ನಮ್ಮ ಕುಟುಂಬದವರು ಕಣಕ್ಕಿಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಹೀಗಾಗಿ ನಮ್ಮಿಬ್ಬರ ಕಿತ್ತಾಟದಲ್ಲಿ ಮೂರನೇಯವರಾದ ಡಿ.ಕೆ. ಸಹೋದರರು ಲಾಭ ಪಡೆಯುತ್ತಿದ್ದರು. ನಾವಿಬ್ಬರೂ ಒಂದಾದರೆ, ಸಹೋದರರನ್ನು ಎದುರಿಸಿ ನಿಲ್ಲಬಹುದು. ಆ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕು ಎನ್ನುವ ಹಠಕ್ಕೆ ಜೆಡಿಎಸ್-ಬಿಜೆಪಿ ಬಿದ್ದಿದೆ.












Click it and Unblock the Notifications