ಕಾಂಗ್ರೆಸ್ ಭರವಸೆ ನಂಬಿ ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತ ಮಹಿಳೆಯರು: ವಿಜಯೇಂದ್ರ ಕಿಡಿ
ಬೆಂಗಳೂರು, ಮೇ 30: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಅಧಿಕಾರ ಬಂದರೆ ಮಹಿಳೆಯರ ಖಾತೆಗೆ ಟಕಾ ಟಕ್ ಹಣ ಜಮಾವಣೆ ಮಾಡಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ. ಇದರ ಪರಿಣಾಮ ಪೋಸ್ಟ್ ಆಫೀಸ್ಗಳಲ್ಲಿ ಖಾತೆ ತೆರೆಯಲು ಮಹಿಳೆಯರು ಮುಗಿಬೀಳುತ್ತಿದ್ದಾರೆ. ಮಹಿಳೆಯರು ಪೋಸ್ಟ್ ಆಫೀಸ್ಗಳಲ್ಲಿ ಖಾತೆ ಮಾಡಿಸಲು ಮುಗಿಬೀಳುವ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಭರವಸೆಯ ಬಗ್ಗೆ ಕಿಡಿಕಾರಿದ್ದಾರೆ. ಜನರ ಬಡತನವನ್ನು ಬಂಡವಾಳ ಮಾಡಿಕೊಂಡು ಬೊಗಳೆ ಬಿಡುವುದು, ಅಮಾಯಕರನ್ನು ದಿಕ್ಕು ತಪ್ಪಿಸುವುದು, ಸ್ವಾತಂತ್ರ್ಯಾ ನಂತರದಿಂದಲೂ ಕಾಂಗ್ರೆಸ್ ಅನುಸರಿಸಿಕೊಂಡು ಬಂದಿರುವ ಚಾಳಿ.

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಬಿಟ್ಟಿ ಭಾಗ್ಯಗಳನ್ನೇ ಮುಂದಿಟ್ಟುಕೊಂಡು ಇಡೀ ದೇಶದ ಮತದಾರರಿಗೆ, ಅದರಲ್ಲೂ ಮಹಿಳೆಯರಿಗೆ ಟೋಪಿ ಹಾಕಲು ಹೋಗಿ ರಾಹುಲ್ ಗಾಂಧಿ ಬಾಯಿಂದ ಹೊರಟ 'ವಾರ್ಷಿಕ 1 ಲಕ್ಷ ಹಾಗೂ ತಿಂಗಳಿಗೆ 8 ಸಾವಿರ ರೂಪಾಯಿ ಕೊಡುತ್ತೇವೆಂಬ' ಚುನಾವಣಾ ಪ್ರಚಾರದ 'ಟಕಾ ಟಕ್' ಡೋಂಗಿ ಡೈಲಾಗ್ ನಂಬಿ ಬೆಂಗಳೂರಿನಲ್ಲಿ ನಿದ್ರೆಗೆಟ್ಟು ಮಹಿಳೆಯರು ಬೆಳಗಿನ ಜಾವ 4 ಗಂಟೆಗೆ ಸರತಿ ಸಾಲಿನಲ್ಲಿ ನಿಂತು ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಮುಗಿಬಿದ್ದಿರುವ ಘಟನೆ ನಿಜಕ್ಕೂ ಬೇಸರ ತರಿಸುವಂತದ್ದು.
ತಪ್ಪು ಗ್ರಹಿಕೆಯಿಂದ ಹಸು-ಗೂಸುಗಳನ್ನು ಕೈಗೆತ್ತಿಕೊಂಡು ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಅನಗತ್ಯ ಸಂಕಷ್ಟ ಪಡುತ್ತಿರುವ ಮುಗ್ಧ ಮಹಿಳೆಯರನ್ನು ನೋಡಿಯಾದರೂ ಕಾಂಗ್ರೆಸ್ಸಿಗರ ಮನ ಕಲಕುತ್ತಿಲ್ಲವೆಂದರೆ, ಕಾಂಗ್ರೆಸ್ಸಿಗರ ಹೃದಯ ಹೀನತೆ ಹಾಗೂ ಭಂಡತನ ಎತ್ತಿ ತೋರಿಸುತ್ತದೆ.

ಬಡ ಜನರೊಂದಿಗೆ ಚೆಲ್ಲಾಟವಾಡುವುದನ್ನು ಬಿಟ್ಟು ಈಗಲಾದರೂ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಅಮಾಯಕ ಮಹಿಳೆಯರಿಗೆ ವಾಸ್ತವತೆ ತಿಳಿಸಿ ಅವರ ಕ್ಷಮೆಯಾಚಿಸಲಿ. ಇಲ್ಲದಿದ್ದರೆ ತಪ್ಪು ಗ್ರಹಿಕೆಯಿಂದ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಮಹಿಳೆಯರಿಗೆ ವಾಸ್ತವ ಸಂಗತಿ ಅರಿವಾದರೆ ಉಂಟಾಗುವ ಪರಿಸ್ಥಿತಿಯ ಪರಿಣಾಮ ಕಾಂಗ್ರೆಸ್ಸಿಗರೇ ಅನುಭವಿಸಬೇಕಾಗುತ್ತದೆ ಎಂದಿದ್ದಾರೆ.












Click it and Unblock the Notifications