ಲಾಕ್ಡೌನ್ ಗುಮ್ಮಕ್ಕೆ ಬಹುತೇಕ ತೆರೆ ಎಳೆದ ಪ್ರಧಾನಿ ಮೋದಿ
ನವದೆಹಲಿ, ಜ 14: ಕೋವಿಡ್ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆದಿದ್ದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ, ಲಾಕ್ಡೌನ್ ಸಂಬಂಧ ಕೇಂದ್ರ ಸರಕಾರದಿಂದ ಬಹುತೇಕ ಸ್ಪಷ್ಟನೆ ಸಿಕ್ಕಿದೆ. ಇನ್ನು, ಇದನ್ನು ಪಾಲಿಸಿಕೊಂಡು ಬರುವುದು ಆಯಾಯ ರಾಜ್ಯ ಸರಕಾರಕ್ಕೆ ಬಿಟ್ಟಂತಹ ವಿಚಾರ.
ಕೊರೊನಾ ಸಂಬಂಧ ಕರ್ನಾಟಕ ಸರಕಾರ ತೆಗೆದುಕೊಂಡಿರುವ ಐದು T (ಟೆಸ್ಟ್, ಟ್ರ್ಯಾಕ್, ಟ್ರೇಸ್, ಟ್ರಯಾಜಿಂಗ್ ಮತ್ತು ಟೆಕ್ನಾಲಜಿ) ಬಗ್ಗೆ ಪ್ರಧಾನಿಯಿಂದ ಶ್ಲಾಘನೆಯೂ ಸಭೆಯಲ್ಲಿ ವ್ಯಕ್ತವಾಗಿದೆ. ಫೆಬ್ರವರಿಯಲ್ಲಿ ಕೊರೊನಾ ಮೂರನೇ ಅಲೆ ಉತ್ತುಂಗಕ್ಕೆ ಹೋಗಲಿದೆ ಎನ್ನುವ ಸಲಹಾ ಸಮಿತಿಯ ಎಚ್ಚರಿಕೆಯನ್ನೂ ಸಭೆಯಲ್ಲಿ ಪ್ರಧಾನಿ ಪ್ರಸ್ತಾವಿಸಿದ್ದಾರೆ.
ಫೆಬ್ರವರಿ ಮೊದಲನೇ ವಾರದಲ್ಲಿ ಗರಿಷ್ಠ ಮಟ್ಟಕ್ಕೆ ಹೋಗಿ, ಎರಡು ವಾರದಲ್ಲಿ ಅದೇ ವೇಗದಲ್ಲಿ ಇಳಿಯಲಿದೆ ಎನ್ನುವ ಮಾತನ್ನೂ ಪ್ರಧಾನಿ ಸಭೆಯಲ್ಲಿ ಆಡಿದ್ದಾರೆ. ಈ ಮಾತನ್ನು ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್ ಕೂಡಾ ಪುನರುಚ್ಚಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರಕಾರ ಸಂಪೂರ್ಣ ಲಾಕ್ಡೌನ್ ವಿಚಾರದಲ್ಲಿ ಸ್ಪಷ್ಟ ನಿಲುವನ್ನು ಹೊಂದಿದ್ದರೂ, ಟಿವಿ ಮಾಧ್ಯಮಗಳು ಜನರಲ್ಲಿ ಭಯ ಹುಟ್ಟಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಗಳು ಹೆಚ್ಚಾಗುತ್ತಿವೆ. ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ಹೇಳಿದ್ದೇನು?

ಪ್ರಧಾನಿ ಮೋದಿಯವರ ಮುಖ್ಯಮಂತ್ರಿಗಳ ಜೊತೆಗಿನ ಸಭೆ
ವೈರಸ್ ನಿಯಂತ್ರಿಸಲು ಸಂಪೂರ್ಣ ಲಾಕ್ಡೌನ್ ಪರಿಹಾರವಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ. ಪ್ರಧಾನಿಯವರ ಆದೇಶವನ್ನು ಬಹುತೇಕ ಚಾಚೂತಪ್ಪದೇ ಕರ್ನಾಟಕ ರಾಜ್ಯ ಸರಕಾರ ಅನುಸರಿಸಿಕೊಂಡು ಬರುತ್ತಿರುವುದರಿಂದ ಲಾಕ್ಡೌನ್ ಗುಮ್ಮಕ್ಕೆ ಬಹುತೇಕ ಉತ್ತರ ಸಿಕ್ಕಿದಂತಾಗಿದೆ. "ಓಮಿಕ್ರಾನ್ ವೈರಸ್ ವೇಗವಾಗಿ ಹರಡುತ್ತಿರುವುದು ಹೌದಾದರೂ ಅದನ್ನು ಲಾಕ್ಡೌನ್ನಿಂದ ತಡೆಯಲು ಸಾಧ್ಯವಿಲ್ಲ"ಎಂದು ಪ್ರಧಾನಿ ಮೋದಿಯವರು ಮುಖ್ಯಮಂತ್ರಿಗಳ ಸಭೆಯಲ್ಲಿ ಹೇಳಿದ್ದಾರೆ.

ಲಾಕ್ಡೌನ್ ಪ್ರಯೋಗಕ್ಕೆ ಮುಂದಾದರೆ ಮಗುದೊಮ್ಮೆ ಅರ್ಥಿಕತೆಗೆ ಪೆಟ್ಟು
"ಲಾಕ್ಡೌನ್ ಪ್ರಯೋಗಕ್ಕೆ ಮುಂದಾದರೆ ಮಗುದೊಮ್ಮೆ ಅರ್ಥಿಕತೆಗೆ ಪೆಟ್ಟು ಬೀಳುತ್ತದೆ. ಈಗಾಗಲೇ ಒಮ್ಮೆ ಹೊಡೆತವನ್ನು ನಾವು ಎದುರಿಸಬೇಕಾದ ಅನಿವಾರ್ಯತೆ ಬಂದೊದಗಿತ್ತು. ಮತ್ತೆ ಅದನ್ನೇ ವೈರಸ್ ನಿಯಂತ್ರಿಸಲು ಮುಂದಾದರೆ ಚೇತರಿಸಿಕೊಳ್ಳಲು ಬಹಳ ಕಷ್ಟವಾಗುತ್ತದೆ. ಕೋವಿಡ್ ಜೊತೆಗೆ ಎಚ್ಚರಿಕೆಯಿಂದ ಜೀವನ ನಡೆಸಬೇಕಾಗುತ್ತದೆ"ಎಂದು ಪ್ರಧಾನಿ ಮೋದಿಯವರು ಸಭೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಸೋಂಕು ನಿಯಂತ್ರಣಕ್ಕೆ ಸ್ಥಳೀಯವಾಗಿ ನಿಯಮ
ಜನಸಾಮಾನ್ಯರ ಜೀವನವನ್ನು ಗಮನದಲ್ಲಿ ಇಟ್ಟುಕೊಂಡು ಕೋವಿಡ್ ನಿಯಂತ್ರಣವನ್ನು ತರಲು ಮಾರ್ಗಸೂಚಿಯನ್ನು ಜಾರಿಗೆ ತನ್ನಿ. ನೀವು ತರುವ ನಿಯಮಗಳು ಜನರಿಗೆ ಹೆಚ್ಚಿನ ತೊಂದರೆಯನ್ನು ತರಬಾರದು. ಆರ್ಥಿಕ ಚಟುವಟಿಕೆಯ ಮೆಲೆ ವ್ಯತಿರಿಕ್ತ ಪರಿಣಾಮ ಬೀರದ ಕಾನೂನಿನ ಬಗ್ಗೆ ಗಮನ ಕೊಡಿ. ಸೋಂಕು ನಿಯಂತ್ರಣಕ್ಕೆ ಸ್ಥಳೀಯವಾಗಿ ನಿಯಮಗಳನ್ನು ಜಾರಿಗೆ ತರುವ ಪದ್ದತಿಯನ್ನು ಬೆಳೆಸಿಕೊಳ್ಳಿ ಎನ್ನುವ ಟಿಪ್ಸ್ ಅನ್ನು ಪ್ರಧಾನಿಯವರು ನೀಡಿದ್ದಾರೆ.

ಅಮೆರಿಕಾ ಮತ್ತು ಯುರೋಪ್ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಮ್ಮಿ
"ಅಮೆರಿಕಾ ಮತ್ತು ಯುರೋಪ್ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ವರದಿಯಾಗುತ್ತಿರುವ ಕಮ್ಮಿ. ನಾವು ಓಮಿಕ್ರಾನ್ ಮೀರಿದ ಹೊಸ ತಳಿಗಳನ್ನು ಎದುರಿಸಲು ನಾವು ಸಜ್ಜಾಗಬೇಕಿದೆ. ನಮ್ಮೆಲ್ಲರ ಸಹಕಾರ ಸಿಗಲಿದೆ"ಎಂದು ಪ್ರಧಾನಿಯವರು ಹೇಳಿದ್ದಾರೆ. ಮುಖ್ಯಮಂತ್ರಿಗಳ ಜೊತೆಗಿನ ಸಭೆಯಲ್ಲಿ ಪ್ರಧಾನಿ, ಲಾಕ್ಡೌನ್ ಪರಿಹಾರವಲ್ಲ ಎನ್ನುವುದನ್ನು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ.












Click it and Unblock the Notifications