Breaking; ಬುಧವಾರ ಮಹತ್ವದ ಸಭೆ ಕರೆದ ಯಡಿಯೂರಪ್ಪ
ಬೆಂಗಳೂರು, ಜೂನ್ 01; ಕರ್ನಾಟಕದಲ್ಲಿ ಜೂನ್ 7ರ ಬಳಿಕ ಲಾಕ್ಡೌನ್ ವಿಸ್ತರಣೆಯಾಗಲಿದೆಯೇ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಹಲವಾರು ಸಚಿವರು ಲಾಕ್ಡೌನ್ ಒಂದು ವಾರ ವಿಸ್ತರಣೆ ಮಾಡುವ ಕುರಿತು ಸುಳಿವು ನೀಡಿದ್ದಾರೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜೂನ್ 2ರ ಬುಧವಾರ ಮಹತ್ವದ ಸಭೆಯನ್ನು ಕರೆದಿದ್ದಾರೆ. ಕರ್ನಾಟಕದಲ್ಲಿ ಲಾಕ್ಡೌನ್ ವಿಸ್ತರಣೆ ಮಾಡುವ ಅಥವ ಅನ್ಲಾಕ್ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಬುಧವಾರ ಸಂಜೆ 4.30ಕ್ಕೆ ಕೋವಿಡ್ ತಜ್ಞರು, ವೈದ್ಯರ ಜೊತೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದೆ. ತಜ್ಞರು, ವೈದ್ಯರಿಂದ ಅನ್ಲಾಕ್ ಮಾಡುವ ಬಗ್ಗೆ ಚರ್ಚೆಯನ್ನು ಮುಖ್ಯಮಂತ್ರಿಗಳು ನಡೆಸಲಿದ್ದಾರೆ.

ನಂತರ ಸಂಜೆ 6ಕ್ಕೆ ಸಚಿವರು, ಹಿರಿಯ ಅಧಿಕಾರಿಗಳ ಸಭೆಯನ್ನು ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ನಡೆಸಲಿದ್ದಾರೆ. ತಜ್ಞರ ಸಭೆಯ ಸಲಹೆಗಳ ಬಗ್ಗೆ ಸಚಿವರು, ಅಧಿಕಾರಿಗಳ ಜೊತೆ ಮರು ಚರ್ಚೆ ನಡೆಸಲಿದ್ದು ಎಲ್ಲರ ಅಭಿಪ್ರಾಯ ಆಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಲಾಕ್ಡೌನ್ ಮತ್ತೊಂದು ವಾರ ಮುಂದುವರಿಸಬೇಕಾ?, ಹಂತಹಂತವಾಗಿ ಅನ್ಲಾಕ್ ಮಾಡಬೇಕಾ? ಎಂಬ ಬಗ್ಗೆ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿಗಳು ತೆಗದುಕೊಳ್ಳಲಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈಗಾಗಲೇ ಲಾಕ್ಡೌನ್ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಆದ್ದರಿಂದ ಬುಧವಾರ ನಡೆಯಲಿರುವ ಸಭೆ ಕುತೂಹಲಕ್ಕೆ ಕಾರಣವಾಗಿದೆ.
ಲಾಕ್ಡೌನ್ ಜಾರಿಗೊಳಿಸಿದ ಮೇಲೆ ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಮಂಗಳವಾರದ ವರದಿಯಂತೆ 14,304 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 24 ಗಂಟೆಯಲ್ಲಿ 464 ಜನರು ಸಾವನ್ನಪ್ಪಿದ್ದಾರೆ. 29,271 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದ ಒಟ್ಟು ಪ್ರಕರಣದ ಸಂಖ್ಯೆ 2618735. ಸಕ್ರಿಯ ಪ್ರಕರಣದ ಸಂಖ್ಯೆ 2,98,299. ಒಟ್ಟು ಮೃತಪಟ್ಟವರು 29,554. ಒಟ್ಟು ಗುಣಮುಖಗೊಂಡವರು 2290861.












Click it and Unblock the Notifications