ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಪ್ರಕಟ? ಬೆಚ್ಚಿಬಿದ್ದ ಸಿದ್ದರಾಮಯ್ಯ ಬಣ
ಚುನಾವಣಾ ಟಿಕೆಟ್ ಹಾಗೂ ಪಕ್ಷದ ಸಂಘಟನೆ ವಿಚಾರಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರನ್ನು ದೆಹಲಿಗೆ ಕರೆದಿರುವ ಸಂದರ್ಭದಲ್ಲೇ ಇತ್ತ ಪತ್ರಿಕೆಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದ್ದು ಕೆಪಿಸಿಸಿಯಲ್ಲಿ ಭಾರೀ ಗೊಂದಲಕ್ಕೆ ಕಾರಣವಾಗಿದೆ.
ಆಶ್ಚರ್ಯಕರವಾಗಿ ಈ ಪಟ್ಟಿಯಲ್ಲಿ ಬಹುತೇಕ ಪಕ್ಷದ ಹಿರಿಯ ನಾಯಕರ ಹೆಸರೇ ಇಲ್ಲವಾಗಿದ್ದು ಅವರಲ್ಲಿ ಬಹಳಷ್ಟು ಜನರು ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವುದರಿಂದ ಪತ್ರಿಕೆಗಳಲ್ಲಿ ಪ್ರಕಟವಾದ ಅಂಶಗಳ ಕುರಿತು ಗುಮಾನಿ ಹುಟ್ಟಿದ್ದು ಪಕ್ಷದ ಒಳಗಿರುವ ಸಿದ್ದರಾಮಯ್ಯ ವಿರೋಧಿ ಬಣದ ಕೈವಾಡ ಇರಬಹುದು ಎನ್ನುವುದು ಕೆಲವು ಕಾಂಗ್ರೆಸ್ಸಿಗರ ಪ್ರಶ್ನೆಯಾಗಿದೆ.
ಮಿನಿಸ್ಟರ್ ಮಾತು: ಕರ್ನಾಟಕದಲ್ಲೂ ಹಿರಿಯರಿಗೆ ಕೈತಪ್ಪುತ್ತಾ ಬಿಜೆಪಿ ಟಿಕೆಟ್?
ಅಷ್ಟಕ್ಕೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರು ಹೈಕಮಾಂಡ್ ನೊಂದಿಗೆ ಚರ್ಚಿಸಿ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡುವ ಮುನ್ನವೇ ಪತ್ರಿಕೆಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಪಟ್ಟಿಯನ್ನು ಪ್ರಕಟಿಸಿದ್ದು ಹೇಗೆ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ಬಹುತೇಕ ಹೆಚ್ಚಿನ ಪತ್ರಿಕೆಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದ್ದು, ಆ ಪ್ರಕಾರ, ಎಲ್ಲಾ ಹಾಲೀ ಶಾಸಕರಿಗೆ ಮತ್ತೆ ಟಿಕೆಟ್ ಒಲಿಯಲಿದೆ.
ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ತಂತ್ರಗಾರಿಕೆ ಯಾವ ರೀತಿ ಇರಬೇಕು ಎನ್ನುವ ವಿಚಾರವನ್ನು ಚರ್ಚಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯದ ಮುಖಂಡರು ದೆಹಲಿಗೆ ಬರುವಂತೆ ಸೂಚಿಸಿದ್ದಾರೆ. ಸೋಮವಾರದ (ಡಿ 12) ಈ ಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಾ.ಜಿ ಪರಮೇಶ್ವರ್, ಎಂ.ಬಿ.ಪಾಟೀಲ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ.
ಡಾ.ಹೆಚ್.ಸಿ ಮಹದೇವಪ್ಪನವರಂತಹ ನಾಯಕರ ಹೆಸರೂ ಇಲ್ಲ
ರಾಜ್ಯದಲ್ಲೇ ಗಮನ ಸೆಳೆದಿರುವ ಕ್ಷೇತ್ರಗಳ ಪೈಕಿ ಅರಸೀಕರೆಯೂ ಒಂದು. ಇಲ್ಲಿ ಇನ್ನೂ ಪಕ್ಷಕ್ಕೆ ಸೇರ್ಪಡೆಯಾಗದಿದ್ದರೂ ಕೂಡಾ ಶಿವಲಿಂಗೇಗೌಡರ ಹೆಸರನ್ನು ಪ್ರಕಟಿಸಲಾಗಿದೆ. ಅವರು ಸದ್ಯ ಜೆಡಿಎಸ್ ನಿಂದ ಶಾಸಕರಾಗಿದ್ದರೆ ಮತ್ತು ಇವರು ಕಾಂಗ್ರೆಸ್ ಸೇರಬಹುದು ಎನ್ನುವ ಗುಮಾನಿ ಹಲವು ದಿನಗಳಿಂದ ಇದೆ. ಇನ್ನೂ ಅಚ್ಚರಿ ಎಂಬಂತೆ ಮತ್ತೊಂದು ಕ್ಷೇತ್ರವಾದ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅತ್ಯಾಪ್ತರು ಹಾಗೂ ಮಾಜಿ ಲೋಕೋಪಯೋಗಿ ಸಚಿವರೂ ಆದ ಡಾ.ಹೆಚ್.ಸಿ ಮಹದೇವಪ್ಪನವರಂತಹ ನಾಯಕರ ಹೆಸರೂ ಇಲ್ಲದಿರುವುದು ಹೆಚ್ಚಿನ ಗೊಂದಲಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಅವರ ವಿರುದ್ಧ ಡಿಕೆಶಿ ಬಣದಲ್ಲಿ ಗುರುತಿಸಿಕೊಂಡಿರುವ ಧೃವ ನಾರಾಯಣ್
ಮೂಲಗಳ ಪ್ರಕಾರ ಧೃವ ನಾರಾಯಣ್ ಅವರಿಗೆ ಚಾಮರಾಜನಗರ ಲೋಕಸಭೆಯಲ್ಲಿ ಸ್ಪರ್ಧಿಸು ಎಂದು ಸಿದ್ದರಾಮಯ್ಯನವರು ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಿದ್ದರೂ ಅವರ ಹೆಸರೇ ಸಂಭಾವ್ಯರ ಪಟ್ಟಿಯಲ್ಲಿ ಇರುವುದರಿಂದ, ಸಿದ್ದರಾಮಯ್ಯ ಅವರ ವಿರುದ್ಧ ಡಿಕೆಶಿ ಬಣದಲ್ಲಿ ಗುರುತಿಸಿಕೊಂಡಿರುವ ಧೃವ ನಾರಾಯಣ್ ಅವರ ಕೈ ಮೇಲಾಯಿತಾ ಎನ್ನುವ ಗುಸುಗುಸು ಆರಂಭಗೊಂಡಿದೆ. ಧೃವ ನಾರಾಯಣ ಅವರು ಹೆಸರು ನಂಜನಗೂಡು ಕ್ಷೇತ್ರದ ಪಟ್ಟಿಯಲ್ಲಿದೆ.
ವರುಣಾದಲ್ಲಿ ಸಿದ್ದರಾಮಯ್ಯ ಮತ್ತು ಅವರ ಮಗ ಡಾ.ಯತೀಂದ್ರ ಅವರ ಹೆಸರು
ಪಟ್ಟಿಯ ಪ್ರಕಾರ ವರುಣಾದಲ್ಲಿ ಸಿದ್ದರಾಮಯ್ಯ ಮತ್ತು ಅವರ ಮಗ ಡಾ.ಯತೀಂದ್ರ ಅವರ ಹೆಸರಿದೆ. ಕಾಂಗ್ರೆಸ್ ಸೇರಬಹುದು ಎನ್ನಲಾಗುತ್ತಿದ್ದ ಜಿ.ಟಿ.ದೇವೇಗೌಡ ಅವರ ಹೆಸರು ಚಾಮುಂಡೇಶ್ವರಿ ಕ್ಷೇತ್ರದಲ್ಲಿದೆ. ಟಿ.ನರಸೀಪುರದಿಂದ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರ ಹೆಸರು ಪಟ್ಟಿಯಲ್ಲಿದೆ. ಹುಣಸೂರು ಕ್ಷೇತ್ರ ಕೂಡಾ ಸಿದ್ದರಾಮಯ್ಯನವರ ಸಂಭಾವ್ಯ ಕ್ಷೇತ್ರ ಎನ್ನುವ ಮಾತು ಚಾಲ್ತಿಯಲ್ಲಿತ್ತು. ಅಲ್ಲಿಂದ, ಹಾಲೀ ಶಾಸಕ ಎಚ್.ಸಿ.ಮಂಜುನಾಥ್ ಅವರ ಹೆಸರು ಸಂಭಾವ್ಯರ ಪಟ್ಟಿಯಲ್ಲಿದೆ.
ಕೆಪಿಸಿಸಿ ಅಧ್ಯಕ್ಷರ ಪ್ರತಿಕ್ರಿಯೆ ಏನು ಎನ್ನುವ ಕುತೂಹಲ
ಪಕ್ಷವು ಅಭ್ಯರ್ಥಿಗಳನ್ನು ತೀರ್ಮಾನ ಮಾಡುವವರೆಗೂ ಯಾರೂ ಸಹ ಆ ಬಗ್ಗೆ ಗೊಂದಲ ಮೂಡಿಸುವಂತೆ ನಡೆದುಕೊಳ್ಳಬಾರದು ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷರ ಮಾತಿಗೆ ವಿರುದ್ಧವಾಗಿ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಈ ಕುರಿತಂತೆ ಕೆಪಿಸಿಸಿ ಅಧ್ಯಕ್ಷರ ಪ್ರತಿಕ್ರಿಯೆ ಏನು ಎಂದು ಪಕ್ಷದ ಕಾರ್ಯಕರ್ತರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ ಎಂಬ ಮಾಹಿತಿ ಇದೆ.