ಬಿಜೆಪಿ ಪರಿವರ್ತನಾ ಯಾತ್ರೆ, ಬಿಎಸ್ವೈ ಆಪ್ತರಾದ ನಾಯಕರು ಎಲ್ಲಿ?
Recommended Video
ಬೆಂಗಳೂರು, ನವೆಂಬರ್ 9 : ಕರ್ನಾಟಕ ಬಿಜೆಪಿಯ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ 6 ದಿನಗಳನ್ನು ಪೂರೈಸಿದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆಗೆ ಜನ ಬೆಂಬಲವೂ ಸಿಗುತ್ತಿದೆ. ಆದರೆ, ಯಾತ್ರೆಯಲ್ಲಿ ಯಡಿಯೂರಪ್ಪ ಆಪ್ತರು ಹೆಚ್ಚಾಗಿ ಕಾಣಿಸುತ್ತಿಲ್ಲ.
2018ರ ವಿಧಾನಸಭೆ ಚುನಾವಣೆಗೆ ಬಿಜೆಪಿ ನಾಯಕರು ಪ್ರಚಾರ ಆರಂಭಿಸಿದ್ದಾರೆ. ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ನೇತೃತ್ವದಲ್ಲಿ 75 ದಿನಗಳ ರಾಜ್ಯ ಪ್ರವಾಸ ನಡೆಸಲಾಗುತ್ತಿದೆ. ಬುಧವಾರ ಮಡಿಕೇರಿಯಲ್ಲಿ ಯಾತ್ರೆ ಅಂತ್ಯಗೊಂಡಿದ್ದು, ಇಂದು ನಾಯಕರು ವಿಶ್ರಾಂತಿ ಪಡೆಯಲಿದ್ದಾರೆ.
ದೇವೇಗೌಡರ ಬಗ್ಗೆ ಮಿಮಿಕ್ರಿ : ಸ್ಪಷ್ಟನೆ ಕೊಟ್ಟ ನಟ ಜಗ್ಗೇಶ್
ನವೆಂಬರ್ 2ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಿನಲ್ಲಿ ಯಾತ್ರೆಗೆ ಚಾಲನೆ ನೀಡಿದ್ದರು. ತುಮಕೂರು, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಪೂರ್ಣಗೊಂಡಿದೆ. ನ.10ರಿಂದ ಮಂಗಳೂರಿನಿಂದ ಯಾತ್ರೆ ಪುನಃ ಆರಂಭವಾಗಲಿದೆ.
ಕಾರ್ಯಕರ್ತ ಸಿಡಿದೆದ್ದರೆ ಹುಲ್ಲುಕಡ್ಡಿ ಅಲ್ಲಾಡಿಸಲೂ ಸಾಧ್ಯವಿಲ್ಲ!
ಬಿ.ಎಸ್.ಯಡಿಯೂರಪ್ಪ ಜೊತೆಗೆ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಶ್ರೀರಾಮುಲು ಸೇರಿದಂತೆ ಹಲವು ನಾಯಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಯಡಿಯೂರಪ್ಪ ಅವರ ಆಪ್ತರಾದ ನಾಯಕರು ಎಲ್ಲಿ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಯಡಿಯೂರಪ್ಪ ಜೊತೆ ಯಾವ ನಾಯಕರು ಕಾಣಿಸಿಕೊಳ್ಳುತ್ತಿಲ್ಲ ಚಿತ್ರಗಳಲ್ಲಿ ನೋಡಿ....
ಬಿಜೆಪಿ ಯಾತ್ರೆಯ ಆರಂಭದ ವೈಫಲ್ಯಕ್ಕೆ ಹೊಣೆ ಯಾರು?
ಪ್ರಹ್ಲಾದ್ ಜೋಶಿ ಕಾಣುತ್ತಿಲ್ಲ
ಕರ್ನಾಟಕ ಬಿಜೆಪಿಯ ಮಾಜಿ ಅಧ್ಯಕ್ಷರು ಮತ್ತು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಪರಿವರ್ತನಾ ಯಾತ್ರೆಯಲ್ಲಿ ಕಾಣಿಸುತ್ತಿಲ್ಲ. ನ.2ರಂದು ನಡೆದ ಯಾತ್ರೆಯ ಉದ್ಘಾಟನಾ ಸಮಾರಂಭಕ್ಕೆ ಅವರು ಬಂದಿದ್ದರು. ನಂತರ ಯಾವ ಜಿಲ್ಲೆಯಲ್ಲಿಯೂ ಅವರು ಯಾತ್ರೆಯಲ್ಲಿ ಪಾಲ್ಗೊಂಡಿಲ್ಲ. ನ.15ರ ನಂತರ ಯಾತ್ರೆ ಉತ್ತರ ಕರ್ನಾಟಕ ತಲುಪಲಿದ್ದು, ಅಲ್ಲಿ ಅವರು ಸೇರಿಕೊಳ್ಳುವ ಸಾಧ್ಯತೆ ಇದೆ.
ಸಿ.ಎಂ.ಉದಾಸಿ ಬಿಎಸ್ವೈ ಜೊತೆಗಿಲ್ಲ
ಹಾವೇರಿ ಜಿಲ್ಲೆಯ ಪ್ರಭಾವಿ ಮುಖಂಡ, ಮಾಜಿ ಸಚಿವ ಸಿ.ಎಂ.ಉದಾಸಿ ಯಡಿಯೂರಪ್ಪ ಅವರ ಪರಮಾಪ್ತರು. ಅವರು ಪರಿವರ್ತನಾ ಯಾತ್ರೆಯಲ್ಲಿ ಕಾಣಿಸಿಕೊಂಡಿಲ್ಲ. ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಸೇರಿದಾಗಲೂ ಉದಾಸಿ ಅವರು ಯಡಿಯೂರಪ್ಪ ಜೊತೆಗಿದ್ದರು. ನ.24ರಂದು ಹಾವೇರಿಯಲ್ಲಿ ಪರಿವರ್ತನಾ ಯಾತ್ರೆ ಸಂಚಾರ ನಡೆಸಲಿದೆ.
ಮುರುಗೇಶ ನಿರಾಣಿ ಜೊತೆಗಿಲ್ಲ
ಯಡಿಯೂರಪ್ಪ ಆಪ್ತರಾದ ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಯಾತ್ರೆಯಲ್ಲಿ ಕಾಣಿಸುತ್ತಿಲ್ಲ. ಯಡಿಯೂರಪ್ಪ ಅವರು ಬಾಗಲಕೋಟೆಯಿಂದ ಸ್ಪರ್ಧಿಸುವ ಕುರಿತು ಸುದ್ದಿಗಳು ಹಬ್ಬಿದ್ದಾಗ 'ಮುಧೋಳ ಮೀಸಲು ಕ್ಷೇತ್ರ ಹೊರತುಪಡಿಸಿ ಜಿಲ್ಲೆಯ ಉಳಿದ 6 ಕ್ಷೇತ್ರಗಳಲ್ಲಿ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಲಿ. ನನ್ನ ಮತ ಕ್ಷೇತ್ರ ಬೀಳಗಿ ಅಥವ ಹಿಂದಿನ ಕ್ಷೇತ್ರ ಜಮಖಂಡಿಯಲ್ಲಿ ಬೇಕಾದರೂ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಡುತ್ತೇನೆ' ಎಂದು ನಿರಾಣಿ ಹೇಳಿದ್ದರು.
ಬಸವರಾಜ ಬೊಮ್ಮಾಯಿ ಅವರು ಯಾತ್ರೆಯಲ್ಲಿ ಪಾಲ್ಗೊಂಡಿಲ್ಲ
ಮಾಜಿ ಸಚಿವ ಮತ್ತು ಶಿಗ್ಗಾಂವ್ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಜೊತೆ ಕಾಣಿಸುತ್ತಿಲ್ಲ. ಇವರು ಸಹ ಯಡಿಯೂರಪ್ಪ ಅವರ ಪರಮಾಪ್ತರು.
ಎಂ.ಪಿ.ರೇಣುಕಾಚಾರ್ಯ ಅವರು ಎಲ್ಲಿ?
ಹೊನ್ನಾಳಿಯ ಮಾಜಿ ಶಾಸಕರು, ಮಾಜಿ ಸಚಿವರು ಆದ ಎಂ.ಪಿ.ರೇಣುಕಾಚಾರ್ಯ ಅವರು ಯಡಿಯೂರಪ್ಪ ಜೊತೆ ಯಾತ್ರೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ನ.27ರಂದು ಪರಿವರ್ತನಾ ಯಾತ್ರೆ ಹೊನ್ನಾಳಿಯಲ್ಲಿ ಸಂಚಾರ ನಡೆಸಲಿದೆ.
ಯಡಿಯೂರಪ್ಪ ಆಪ್ತರಾದ ಉಮೇಶ್ ಕತ್ತಿ
ಉತ್ತರ ಕರ್ನಾಟಕ ಭಾಗದ ಪ್ರಭಾವಿ ಮುಖಂಡ ಮತ್ತು ಯಡಿಯೂರಪ್ಪ ಆಪ್ತರಾದ ಉಮೇಶ್ ಕತ್ತಿ ಅವರು ಯಾತ್ರೆಯಲ್ಲಿ ಕಾಣಿಸುತ್ತಿಲ್ಲ. ಉತ್ತರ ಕರ್ನಾಟಕ ಭಾಗಕ್ಕೆ ಯಾತ್ರೆ ಪ್ರವೇಶಿಸಿದ ನಂತರ ಅವರು ಅದರಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.