ಆಧಾರ್- ವೋಟರ್ ಐಡಿ ಲಿಂಕ್: ರಾಜಕಾರಣಿಗಳಿಗೆ ಅಸಲಿ ಪರೀಕ್ಷೆ ಇನ್ನು ಶುರು
ಚುನಾವಣೆಯ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರಿಗೆ ಹಿಂದಿನಿಂದಲೂ ಒಂದು ಕೆಟ್ಟ ಹೆಸರು ಅಂಟಿಕೊಂಡು ಬಂದಿದೆ. ಇದು ರಾಷ್ಟ್ರಮಟ್ಟದಲ್ಲೂ ದೊಡ್ಡ ಸುದ್ದಿಯಾದ ಉದಾಹರಣೆಗಳೂ ಇವೆ.
ಸಾರ್ವಜನಿಕರ ಕರ್ತವ್ಯದ ಬಗ್ಗೆ ಸಾಮಾಜಿಕ ತಾಣದಲ್ಲಿ ಉದ್ದುದ್ದ ಭಾಷಣ ಮಾಡುವ ಬೆಂಗಳೂರಿಗರು ಮತದಾನದ ದಿನ, ಒಂದೋ ಊರು ಬಿಟ್ಟು ಹೋಗಿರುತ್ತಾರೆ, ಇಲ್ಲವೇ ಗಲ್ಲಿಯಲ್ಲಿ ಕ್ರಿಕೆಟ್ ಆಡುತ್ತಿರುತ್ತಾರೆ ಎನ್ನುವುದು. ಕಾರಣ, ಬೆಂಗಳೂರಿನ ಮತದಾನದ ಪ್ರಮಾಣ.
ಇದಕ್ಕೆ, ಇತ್ತೀಚಿನ ಲೋಕಸಭಾ ಚುನಾವಣೆಯೇ ಸಾಕ್ಷಿ. ದಕ್ಷಿಣಕನ್ನಡ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಉಡುಪಿಯಲ್ಲಿ ಮತದಾನದ ಪ್ರಮಾಣ ಶೇ. 72 ರಿಂದ ಶೇ.75. ಆದರೆ, ಬೆಂಗಳೂರು ದಕ್ಷಿಣದಲ್ಲಿ ಅತಿಕಮ್ಮಿ ಶೇ. 50.85 ಮತದಾನವಾಗಿತ್ತು. ಇನ್ನು, ಬೆಂಗಳೂರು ಉತ್ತರ ಶೇ. 53.06, ಬೆಂಗಳೂರು ಸೆಂಟ್ರಲ್ ನಲ್ಲಿ ಶೇ. 51.49 ಮತದಾನವಾಗಿತ್ತು.
ಇದಕ್ಕೆ ಇರಬಹುದಾದ ಕಾರಣವಾದರೂ ಏನು, ನಿಜವಾಗಿಯೂ ಬೆಂಗಳೂರಿಗರು ಸೋಂಬೇರಿಗಳೇ ಎಂದು ಜಾಡು ಹಿಡಿದಾಗ ಕಂಡು ಬಂದದ್ದು, ರಾಜಧಾನಿಯಲ್ಲಿರುವ ವಲಸಿಗರು. ನಗರದಲ್ಲಿ ಶೇ. 60ರಷ್ಟು ಹೊರಭಾಗದವರು ನೆಲೆಸಿರುವುದರಿಂದ, ಅವರ ಮೂಲ ದಾಖಲೆಗಳು ಊರಿನ ವಿಳಾಸದಲ್ಲಿ ಇರುತ್ತದೆ. ಆದರೂ, ರಾಜಕಾರಣಿಗಳು, ಇವರಿಂದ ಇಲ್ಲೊಂದು, ಊರಲ್ಲೊಂದು ವೋಟ್ ಹಾಕಿಸಿರುವ ಉದಾಹರಣೆಗಳಿವೆ. ಈಗ ಶುರುವಾಗುವುದೇ ರಾಜಕಾರಣಿಗಳ ನಿಜವಾದ ಆಟ..

ಆಧಾರ್ ಕಾರ್ಡ್ - ಪ್ಯಾನ್ ಕಾರ್ಡ್ ಲಿಂಕ್
ಆಧಾರ್ ಕಾರ್ಡ್ - ಪ್ಯಾನ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಿ ಅದು ಒಂದು ಹಂತಕ್ಕೆ ಬಂದು ನಿಂತಿತ್ತು. ಈಗ, ಕೇಂದ್ರ ಚುನಾವಣಾ ಆಯೋಗ, ಆಧಾರ್ ಕಾರ್ಡ್ ಮತ್ತು ವೋಟರ್ ಐಡಿಯನ್ನು ಲಿಂಕ್ ಮಾಡುವ ನಿರ್ಧಾರಕ್ಕೆ ಬಂದಿರುವುದು. ಅಧಿಕೃತವಾಗಿ ಈ ಸಂಬಂಧ ಹೇಳಿಕೆ ಇನ್ನಷ್ಟು ಹೊರಬೀಳದಿದ್ದರೂ, ಈ ಪ್ರಕ್ರಿಯೆ ಆರಂಭವಾಗಿದೆ.

ನಮ್ಮ ಚುನಾವಣಾ ಪದ್ದತಿ
ನಮ್ಮಲ್ಲಿ ಬಹಳಷ್ಟು ಜನರ ಹೆಸರು ಊರಿನ ವೋಟರ್ ಲಿಸ್ಟ್ ನಲ್ಲೂ ಇರುತ್ತದೆ. ಇನ್ನು, ಉದ್ಯೋಗ ಅರಸಿ ಹೋದ ಊರಿನ ಕ್ಷೇತ್ರಗಳ ಲಿಸ್ಟ್ ನಲ್ಲೂ ಹೆಸರು ಇರುವಂತಹ ಉದಾಹರಣೆಗಳಿವೆ. ಎಲ್ಲಾದರೂ ಒಂದು ಕಡೆ, ಲಿಸ್ಟ್ ನಿಂದ ಹೆಸರು ತೆಗೆದುಹಾಕುವ ಕೆಲಸಕ್ಕೆ ಮತದಾರ ತಲೆಕೆಡಿಸಿಕೊಂಡ ಉದಾಹರಣೆಗಳು ಕಮ್ಮಿ. ಇದುವೇ, ರಾಜಕೀಯ ಪಕ್ಷಗಳಿಗಾಗುವ ಲಾಭ.

ಆಧಾರ್-ವೋಟರ್ ಐಡಿ ಲಿಂಕ್
ಆಧಾರ್-ವೋಟರ್ ಐಡಿ ಲಿಂಕ್ ಮಾಡುವ ಕೆಲಸ ಈಗಾಗಲೇ ಆರಂಭವಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು ನಗರ ಜಿಲ್ಲೆ ಸೇರಿದಂತೆ, ಈ ಸಂಬಂಧ ವರದಿಗಳು ಬರಲಾರಂಭಿಸಿದೆ. ವೋಟರ್ ಲಿಸ್ಟ್ ಮತ್ತು ಡಿವೈಸ್ ಜೊತೆ ಬರುವ ಚುನಾವಣಾ ಆಯೋಗದ ಅಧಿಕಾರಿಗಳು ಅಥವಾ ಆಯೋಗದಿಂದ ಅನುಮೋದನೆ ಪಡೆದ ಸಂಸ್ಥೆಯ ಪ್ರತಿನಿಧಿಗಳು, ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಅನ್ನು ಪರಿಶೀಲಿಸಿ ಲಿಂಕ್ ಮಾಡುತ್ತಿದ್ದಾರೆ.

ಇನ್ನೊಂದು ಜಾಗದಲ್ಲಿನ ವೋಟರ್ ಲಿಸ್ಟ್ ನಲ್ಲಿ ಹೆಸರು
ಇದರಿಂದ, ಇನ್ನೊಂದು ಜಾಗದಲ್ಲಿನ ವೋಟರ್ ಲಿಸ್ಟ್ ನಲ್ಲಿ ಹೆಸರು ಇದ್ದರೆ, ಅದು ಲಿಸ್ಟ್ ನಿಂದ ಡಿಲೀಟ್ ಆಗುತ್ತದೆ. ಉದಾಹರಣೆಗೆ ಕೆಜಿಎಫ್ ಕ್ಷೇತ್ರದ ಲಿಸ್ಟ್ ನಲ್ಲೂ ಹೆಸರಿದ್ದು, ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲೂ ಹೆಸರಿದ್ದರೆ, ಇದರಲ್ಲಿ ಒಂದು ಲಿಸ್ಟ್ ನಿಂದ ಡಿಲೀಟ್ ಆಗುತ್ತದೆ. ಹೀಗಾಗಿ, ರಾಜಕಾರಣಿಗಳ ನಿಜವಾದ ಪರೀಕ್ಷೆ ಆರಂಭವಾಗುವುದು ಇನ್ನೇ..

ಬಿಬಿಎಂಪಿ ಚುನಾವಣೆ
ಉದಾಹರಣೆಗೆ ಮುಂದಿನ ವರ್ಷ ಬಿಬಿಎಂಪಿ ಚುನಾವಣೆ ನಡೆಯಲಿದೆ. ಬೆಂಗಳೂರಿನಲ್ಲಿ ತಮಿಳುನಾಡು, ಆಂಧ್ರ ಸೇರಿದಂತೆ, ಹೆಚ್ಚಿನ ವಲಸಿಗರಿದ್ದಾರೆ. ಅವರದ್ದು ಎರಡೂ ಕಡೆ ವೋಟ್ ಇರುತ್ತಿತ್ತು. ಹಾಗಾಗಿ, ಅಲ್ಲಿ ಚುನಾವಣೆ ನಡೆದರೂ, ಇಲ್ಲಿ ಚುನಾವಣೆ ನಡೆದರೂ, ಮತದಾನ ಮಾಡುತ್ತಿದ್ದರು. ಆಧಾರ್ - ವೋಟರ್ ಐಡಿ ಲಿಂಕ್ ಆದರೆ, ಒಂದು ಕಡೆ ಮಾತ್ರ ಮತಚಲಾಯಿಸಲು ಸಾಧ್ಯವಾಗುತ್ತದೆ.

ಮೂಲ ಬೆಂಗಳೂರಿಗರು
ಇದರಿಂದ, ಮೂಲ ಬೆಂಗಳೂರಿಗರು ಅಥವಾ ಇಲ್ಲಿನ ವೋಟರ್ ಲಿಸ್ಟ್ ನಲ್ಲಿ ಹೆಸರು ಇರುವವರು ಮಾತ್ರ ಲಿಸ್ಟ್ ನಲ್ಲಿ ಉಳಿದುಕೊಳ್ಳುತ್ತಾರೆ. ಈ ಮೂಲಕ, ಡಬಲ್ ವೋಟಿಂಗ್ ತಡೆಯುವ ಉದ್ದೇಶ ಆಯೋಗದ್ದು. ಹೀಗಾಗಿ, ವಲಸೆ ಮತದಾರರ ಮೇಲೆ ಕಟ್ಟಿಟ್ಟಿದ್ದ ರಾಜಕೀಯ ಪಕ್ಷಗಳಿಗೆ ಮುಂದಿನ ದಿನಗಳಲ್ಲಿ ಇದು ಬಹುದೊಡ್ದ ಹೊಡೆತ ಬೀಳಲಿದೆ.












Click it and Unblock the Notifications