ಕರ್ನಾಟಕ ಕಾಂಗ್ರೆಸ್ನಲ್ಲಿ ಬಿರುಸಿನ ಚಟುವಟಿಕೆ!
ಬೆಂಗಳೂರು, ಏಪ್ರಿಲ್ 04 : ಕಾಂಗ್ರೆಸ್ ಪಾಳಯದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಸಂಪುಟ ಪುನಾರಚನೆ ಮಾಡುವಂತೆ ಸಮಾನ ಮನಸ್ಕ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬೇಡಿಕೆ ಇಟ್ಟಿದ್ದಾರೆ. ಏ.9ರಂದು ಸಿದ್ದರಾಮಯ್ಯ ಅವರು ಶಾಸಕರ ಸಭೆ ಕರೆದಿದ್ದಾರೆ.
ಸೋಮವಾರ ಸಂಜೆ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಸಮಾನ ಮನಸ್ಕ ಶಾಸಕರು ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದರು. ಸಂಪುಟ ಪುನಾರಚನೆ ವೇಳೆ ಹೊಸ ಶಾಸಕರಿಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು. [ಸಂಪುಟ ಪುನಾಚರನೆ, 10ಕ್ಕೂ ಹೆಚ್ಚು ಸಚಿವರ ಬದಲಾವಣೆ]

ಮುಖ್ಯಮಂತ್ರಿಗಳ ಭೇಟಿ ಬಳಿಕ ಮಾತನಾಡಿದ ಸೋಮಶೇಖರ್ ಅವರು, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಸಂಪುಟ ಪುನಾರಚನೆಗೆ ಬೇಡಿಕೆ ಇಟ್ಟಿದ್ದೇವೆ. ಯಾರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಹೇಳಿಲ್ಲ' ಎಂದರು. [ಅಸಮರ್ಥ ಸಚಿವರನ್ನು ಕೈಬಿಡಿ, ಹೊಸಬರಿಗೆ ಅವಕಾಶ ಕೊಡಿ]
'ಬರೀ ಮಂತ್ರಿಗಳಿಂದ ಪಕ್ಷವನ್ನು ಕಟ್ಟಲು ಸಾಧ್ಯವಿಲ್ಲ. ಹಲವು ಶಾಸಕರು 40 ವರ್ಷಗಳಿಂದ ಪಕ್ಷ ಕಟ್ಟಲು ಕೆಲಸ ಮಾಡಿದ್ದೇವೆ. ಆದ್ದರಿಂದ, ಸಂಪುಟ ಪುನಾರಚನೆ ಸಮಯದಲ್ಲಿ ನಮ್ಮನ್ನು ಪರಿಗಣಿಸುವಂತೆ ಮನವಿ ಮಾಡಿದ್ದೇವೆ' ಎಂದು ಸೋಮಶೇಖರ್ ಹೇಳಿದರು. [ಸಿದ್ದರಾಮಯ್ಯ ಸಂಪುಟಕ್ಕೆ ನಾಲ್ವರು ಹೊಸ ಸಚಿವರ ಸೇರ್ಪಡೆ]
ಏ.9ರಂದು ದೆಹಲಿ ಭೇಟಿ : ಸಮಾನ ಮನಸ್ಕ ಶಾಸಕರು ಏ.9ರಂದು ದೆಹಲಿಗೆ ತೆರಳಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಂಪುಟ ಪುನಾರಚನೆ ವೇಳೆ ಆದ್ಯತೆ ನೀಡುವಂತೆ ಮನವಿ ಮಾಡಲಿದ್ದಾರೆ.
ಶಾಸಕರ ಸಭೆ ಕರೆದ ಸಿಎಂ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ.9ರಂದು ಶಾಸಕರ ಸಭೆ ಕರೆದಿದ್ದಾರೆ. ಸಚಿವ ಸ್ಥಾನ ಆಕಾಂಕ್ಷಿಗಳಾಗಿರುವ ಶಾಸಕರ ಜೊತೆ ಮುಖ್ಯಮಂತ್ರಿಗಳು ಮಾತುಕತೆ ನಡೆಸಲಿದ್ದಾರೆ. ಏ.10ರಂದು ಸಿದ್ದರಾಮಯ್ಯ ಅವರು ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ.












Click it and Unblock the Notifications