13,000 ಶಾಲೆಗಳಿಂದ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪಿಎಂ ಮೋದಿಗೆ ಪತ್ರ
ಬೆಂಗಳೂರು, ಆಗಸ್ಟ್ 27: ಕರ್ನಾಟಕದ ಬರೋಬ್ಬರಿ 13,000 ಶಾಲೆಗಳನ್ನು ಪ್ರತಿನಿಧಿಸುವ ಎರಡು ಸಂಘಗಳು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಕರ್ನಾಟಕ ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪ ಮತ್ತೆ ಭುಗಿಲೆದ್ದಿದ್ದು, ಸರ್ಕಾರದ ಸಚಿವರುಗಳ ವಿರುದ್ಧ 40% ಕಮಿಷನ್ ಆರೋಪದ ಬೆನ್ನಲ್ಲೇ ಈಗ ಮತ್ತೆ 13,000 ಶಾಲೆಗಳನ್ನು ಪ್ರತಿನಿಧಿಸುವ ಎರಡು ಸಂಘಗಳಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿವೆ.
ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ಪ್ರಮಾಣ ಪತ್ರ ನೀಡಲು ರಾಜ್ಯ ಶಿಕ್ಷಣ ಇಲಾಖೆಯಿಂದ ಲಂಚಕ್ಕೆ ಬೇಡಿಕೆಯಿಟ್ಟಿರುವ ಆರೋಪದ ಮೇಲೆ ಗಮನಹರಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ಗಳು ಮತ್ತು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘವು ಪ್ರಧಾನಿ ಮೋದಿಯವರನ್ನು ಒತ್ತಾಯಿಸಿವೆ.
40% ಕಮಿಷನ್ : ಸಾಕ್ಷಿ ಬೇಕೋ, ನಿಮ್ಮನಿಮ್ಮ ಆತ್ಮಸಾಕ್ಷಿ ಸಾಕೋ?
ಅವೈಜ್ಞಾನಿಕ, ತರ್ಕರಹಿತ, ತಾರತಮ್ಯ ಹಾಗೂ ಅನುಸರಣೆಯ ಮಾನದಂಡಗಳನ್ನು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮಾತ್ರ ಅನ್ವಯಿಸಲಾಗುತ್ತಿದೆ. ಇಲ್ಲಿ ದೊಡ್ಡ ಭ್ರಷ್ಟಾಚಾರವು ಜಾರಿಯಲ್ಲಿದೆ ಎಂದು ಪತ್ರದಲ್ಲಿ ಉಲ್ಲೇಖೀಸಲಾಗಿದೆ. ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ನಾವು ಸಲ್ಲಿಸಿರುವ ಅನೇಕ ದೂರುಗಳು ಮತ್ತು ಮನವಿಗಳನ್ನು ಅವರು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಸಂಘಗಳು ಹೇಳಿಕೊಂಡಿವೆ. ಅಲ್ಲದೆ ಸಚಿವ ನಾಗೇಶ್ ಅವರ ರಾಜೀನಾಮೆಗೆ ಕೂಡ ಸಂಘಗಳು ಒತ್ತಾಯಿಸಿವೆ.
ಶಿಕ್ಷಣ ಇಲಾಖೆ ಅಸಹನೆಯನ್ನು ಹೊಂದಿದೆ
ಶಿಕ್ಷಣ ಇಲಾಖೆಯು ಇಡೀ ಭ್ರಷ್ಟ ವ್ಯವಸ್ಥೆಯ ನೈಜ ದಯನೀಯ ಪರಿಸ್ಥಿತಿಯನ್ನು ಆಲಿಸಲು, ಅರ್ಥಮಾಡಿಕೊಳ್ಳಲು ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಅಸಹನೆಯನ್ನು ಹೊಂದಿದೆ. ಹೆಚ್ಚು ಹೆಚ್ಚು ಹೂಡಿಕೆದಾರರಿಗೆ ಅವಕಾಶ ನೀಡುವ ಮೂಲಕ ಶಿಕ್ಷಣವನ್ನು ವ್ಯಾಪಾರೀಕರಿಸುವ ಶಾಲೆಗಳಿಗಿಂತ ಇಬ್ಬರು ಬಿಜೆಪಿ ಸಚಿವರು ಅಕ್ಷರಶಃ ಸಣ್ಣಪುಟ್ಟ ಶಾಲೆಗಳಿಗೆ ಸಾಕಷ್ಟು ಹಾನಿ ಮಾಡಿದ್ದಾರೆ. ಇದು ಪೋಷಕರಿಗೆ ಪ್ರತಿ ಮಗುವಿಗೆ ನೇರವಾಗಿ ಹೆಚ್ಚಿನ ಶುಲ್ಕವನ್ನು ವೆಚ್ಚ ಮಾಡಲು ಕಾರಣವಾಗುತ್ತದೆ ಎಂದು ಪತ್ರದಲ್ಲಿ ಸೇರಿಸಲಾಗಿದೆ
ಶಿಕ್ಷಣ ಸಚಿವರಿಗೆ ಯಾವುದೇ ಕಾಳಜಿ ಇಲ್ಲ
ಹೊಸ ಶೈಕ್ಷಣಿಕ ವರ್ಷ ಆರಂಭಗೊಂಡರೂ ಸರ್ಕಾರ ನಿಗದಿಪಡಿಸಿದ ಪಠ್ಯಪುಸ್ತಕಗಳು ಇನ್ನೂ ಶಾಲೆಗಳಿಗೆ ತಲುಪಿಲ್ಲ ಎಂದು ಸಂಘಗಳು ಆರೋಪಿಸಿವೆ. ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳು ಪ್ರಾಯೋಗಿಕವಾಗಿ ಮತ್ತು ಭೌತಿಕವಾಗಿ ಜಾರಿಗೊಳಿಸಬಹುದಾದ ಕಠಿಣ ನಿಯಮ, ಚೌಕಟ್ಟಿನ ನಿಯಮಗಳು ಹಾಗೂ ನಿಯಂತ್ರಣ ಕ್ರಮಗಳನ್ನು ಉದಾರೀಕರಣಗೊಳಿಸಲು ಶಿಕ್ಷಣ ಸಚಿವರಿಗೆ ಯಾವುದೇ ಕಾಳಜಿ ಇಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.
ಶಿಕ್ಷಣ ಇಲಾಖೆಯ ವ್ಯವಹಾರಗಳ ಬಗ್ಗೆ ತನಿಖೆ ಮಾಡಿ
ನಾವು ಪತ್ರದಲ್ಲಿ ಉಲ್ಲೇಖಿಸಿ ಮಾಡಿರುವ ಈ ಆರೋಪಗಳನ್ನು ಪರಿಶೀಲಿಸಬೇಕು. ಕರ್ನಾಟಕ ಶಿಕ್ಷಣ ಇಲಾಖೆಯ ವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಶಾಲಾ ಸಂಘಗಳು ಪ್ರಧಾನಿ ಮೋದಿಯವರನ್ನು ಒತ್ತಾಯಿಸಿವೆ. ಈ ಹಿಂದೆ ಕರ್ನಾಟಕ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಗುತ್ತಿಗೆದಾರರ ಸಂಘವು ಸಹ ಆಕ್ರೋಶ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆದಿದ್ದವು.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಒತ್ತಾಯ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಸಾರ್ವಜನಿಕ ಆಕ್ರೋಶ ದಿನೇ ದಿನೇ ಬೆಳೆಯುತ್ತಿದ್ದು, ಈಗ ಬರೋಬ್ಬರಿ 13,000 ಶಾಲೆಗಳನ್ನು ಪ್ರತಿನಿಧಿಸುವ ಎರಡು ಸಂಘಗಳು ಪ್ರಧಾನಿ ಮೋದಿವರಿಗೆ ಪತ್ರ ಬರೆದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿವೆ. ಈ ಬೆನ್ನಲ್ಲೆ ಕರ್ನಾಟಕದ ನೂತನ ಅಧ್ಯಕ್ಷರ ಆಯ್ಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ, ನೂತನ ಅಧ್ಯಕ್ಷರ ರೇಸ್ನಲ್ಲಿ ಅರವಿಂದ ಲಿಂಬಾವಳಿ, ಸಿ.ಟಿ. ರವಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಕೇಳಿಬಂದಿವೆ.