ಸಿದ್ದರಾಮಯ್ಯ ಸೋತ ಕ್ಷೇತ್ರದಿಂದಲೇ ಗೆದ್ದು ಜನನಾಯಕ ಅನಿಸಿಕೊಳ್ಳಲಿ: ಈಶ್ವರಪ್ಪ
ಶಿವಮೊಗ್ಗ, ನವೆಂಬರ್ 14: ಸಿದ್ದರಾಮಯ್ಯ ಎಲ್ಲಿ ಚುನಾವಣೆಗೆ ನಿಲ್ತಾರೋ ನನಗೆ ಬೇಕಿಲ್ಲ, ಆದರೆ ನಿಜವಾದ ನಾಯಕ ಸೋತ ಕ್ಷೇತ್ರದಲ್ಲೇ ಗೆದ್ದು ಬರಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಈ ಕುರಿತು ಶಿವಮೊಗ್ಗದಲ್ಲಿ ಸೋಮವಾರ ಮಾತನಾಡಿದ ಅವರು, ಗೆದ್ದ ಸ್ಥಳದಲ್ಲೇ ಮರು ಚುನಾವಣೆಗೆ ನಿಂತರೆ ಜನರ ಪ್ರೀತಿ-ವಿಶ್ವಾಸ ಗಳಿಸಿದ್ದಾರೋ ಇಲ್ವೋ ಗೊತ್ತಾಗತ್ತೆ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತರು, ಕೆಲ ಸಂದರ್ಭ ಅಲ್ಲಿನ ಕಾರ್ಯಕರ್ತರ ಮೇಲೆ ಹರಿಹಾಯ್ದರು. ಚಾಮುಂಡೇಶ್ವರಿ ಕ್ಷೇತ್ರದಿಂದಲೇ ನಿಂತು ಸಿದ್ದರಾಮಯ್ಯ ಗೆದ್ದು ಬರಲಿ. ಕೋಲಾರ, ಕೊಪ್ಪಳ ಎಲ್ಲಿಗೆ ಬೇಕಾದರೂ ಜನ ಸಿದ್ದರಾಮಯ್ಯನವರನ್ನ ಕರೆಯಬಹುದು. ಆದರೆ ನಿಜವಾದ ನಾಯಕ ಸೋತ ಕ್ಷೇತ್ರದಿಂದಲೇ ಗೆದ್ದು ಬರಬೇಕು. ಸಿದ್ದರಾಮಯ್ಯ ಕೋಲಾರಕ್ಕೆ ಹೋಗದೇ, ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಗೆದ್ದು ಜನನಾಯಕ ಎಂದು ಗುರುತಿಸಿಕೊಳ್ಳಬೇಕು ಎಂದು ಸಲಹೆ ನೀಡ್ತೀನಿ ಎಂದು ಈಶ್ವರಪ್ಪ ಹೇಳಿದರು.
ಶಿವಮೊಗ್ಗ ಡಿಸಿ ಕಚೇರಿ ಮುಂದೆ ಬೈಕಿಗೆ ಬೆಂಕಿ ಹಚ್ಚಿ ಯುವಕನ ಆಕ್ರೋಶ
ಪ್ರಮೋದ್ ಮುತಾಲಿಕ್ ಹಿಂದೂಪರವಾಗಿ ನಿಂತರೆ ಯಾವುದೇ ಅಭ್ಯಂತರ ಇಲ್ಲ.
ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು..! ಪ್ರಮೋದ್ ಮುತಾಲಿಕ್ ಹಿಂದೂಪರವಾಗಿ ನಿಂತರೆ ಯಾವುದೇ ಅಭ್ಯಂತರ ಇಲ್ಲ ಎಂದರು. ಹಿಂದುತ್ವದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲರನ್ನೂ ಸಂತೃಪ್ತಿಪಡಿಸಿದ್ದಾರೆ. ಮುಸ್ಲಿಂ-ಕ್ರಿಶ್ಚಿಯನ್ ಕೂಡ ಮೋದಿ ಆಡಳಿತದಲ್ಲಿ ಬೇಸರ ಪಟ್ಟಿಲ್ಲ. ಭಾರತೀಯ ಸಂಸ್ಕೃತಿ ಉಳಿಸುವಲ್ಲಿ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಒಂದೇ ಸಲ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ. ಸ್ವತಂತ್ರ ಬಂದು ಎಪ್ಪತ್ತೈದು ವರ್ಷವಾಗಿದೆ.
ಹಿಂದುತ್ವದ ಬಗ್ಗೆ ಏನೂ ಮಾಡಿಯೇ ಇಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡೋದು ಸರಿ ಅಲ್ಲ. ಏನೇನು ಕೆಲಸ ಮಾಡಬೇಕೋ ಅದನ್ನ ನಮ್ಮ ಗಮನಕ್ಕೆ ತನ್ನಿ. ಸಾಕಷ್ಟು ಕೆಲಸ ಮಾಡಿದ್ದೇವೆ. ಗೋಹತ್ಯೆ ನಿಷೇಧ, ಕಾಶಿ ಪುನರುತ್ಥಾನ, ಜಮ್ಮು ವಿಶೇಷಾಧಿಕಾರ ತೆರವು, ತ್ರಿವಳಿ ತಲಾಕ್ ನಿಷೇಧ ಮಾಡಿದ್ದೇವೆ. ಇವನ್ನೆಲ್ಲಾ ನೆನಪು ಮಾಡಿಕೊಳ್ಳಬೇಕು. ಪ್ರಮೋದ್ ಮುತಾಲಿಕ್ ಚುನಾವಣೆಗೆ ನಿಲ್ಲಲು ಸ್ವತಂತ್ರರು. ಆದರೆ ಮುತಾಲಿಕ್ ಚುನಾವಣೆಗೆ ನಿಲ್ಲೋದ್ರಿಂದ ಹಿಂದುತ್ವಕ್ಕೆ ಲಾಭವಾಗುತ್ತೋ-ನಷ್ಟವಾಗಯತ್ತೋ ಯೋಚನೆ ಮಾಡಿ ನಿಲ್ಲಿ ಎಂದರು.
ತನ್ವೀರ್ ಸೇಠ್ ಟಿಪ್ಪು ಪ್ರತಿಮೆ ನಿರ್ಮಾಣ ವಿಚಾರವಾಗಿ ಮಾತಾನಾಡಿ ಅವರು, ತನ್ವೀರ್ ಸೇಠ್ ಟಿಪ್ಪು ಪ್ರತಿಮೆ ನಿರ್ಮಾಣ ಮಾಡಲು ಹೊರಟಿದ್ದು ಮುಸ್ಲಿಂ ಧರ್ಮಕ್ಕೆ ವಿರೋಧ. ಅವರಲ್ಲಿ ಮೂರ್ತಿ ಪೂಜೆಯೇ ಇಲ್ಲ. ಕೆಂಪೇಗೌಡರಿಗೆ ವಿರುದ್ಧವಾಗಿ ಟಿಪ್ಪು ಪ್ರತಿಮೆ ಮಾಡ್ತೀನಿ ಅನ್ಮೋದು ನಿಜವಾದ ದೇಶದ್ರೋಹದ ಕೆಲಸ. ಟಿಪ್ಪು ನಿಜವಾದ ಕನಸುಗಳು ಪುಸ್ತಕ ಬಿಡುಗಡೆಯಾಗಿದೆ. ಅದನ್ನ ತನ್ವೀರ್ ಸೇಠ್ ಓದಬೇಕು. ಪ್ರತಿಮೆ ಮಾಡಲು ಹೊರಟ ತನ್ವೀರ್ ಜನರ ಕ್ಷಮೆ ಕೇಳಬೇಕು. ಕಾಂಗ್ರೆಸ್ ಮುಖಂಡರು ಅವರಿಗೆ ಬುದ್ಧಿ ಹೇಳಬೇಕು. ಟಿಪ್ಪು ಬದಲು ಅಬ್ದುಲ್ ಕಲಾಂ ಪ್ರತಿಮೆ ಮಾಡಲಿ, ಯಾವನೋ ದೇಶ ದ್ರೋಹಿ, ದೇವಸ್ಥಾನ ಚೂರು ಮಾಡಿದ ಟಿಪ್ಪು ಪ್ರತಿಮೆ ಮಾಡ್ತೀನಿ ಅನ್ನೋದು ಸರಿಯಲ್ಲ ಎಂದು ಈಶ್ವರಪ್ಪ ಹೇಳಿದರು.
ವಿವೇಕಾನಂದರ ಹೆಸರಲ್ಲಿ ಆಯ್ದ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯಲು ಮುಂದಾಗಿರುವ ಶಿಕ್ಷಣ ಇಲಾಖೆ ಕ್ರಮವನ್ನ ಈಶ್ವರಪ್ಪ ಸಮರ್ಥಿಸಿಕೊಂಡರು. ಕೇಸರಿ ಬಿಜೆಪಿ ಬಣ್ಣ ಅಲ್ಲ, ಟೀಕೆ ಮಾಡುವವರು, ಕೇಸರಿ ಬಣ್ಣ ಹಿಂದೂಗಳದ್ದು ಹಾಗೂ ಹಸಿರು ಮುಸ್ಲಿಂ ಸಮುದಾಯದ್ದು, ಹಸಿರೇ ಬೇಕು ಎಂದು ಹೇಳಲಿ. ಮಹಾತ್ಮಾ ಗಾಂಧೀಜೀ ಗೋಹತ್ಯೆ ನಿಷೇಧ ಮಾಡಿ ಎಂದರು, ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದರು ಅಂದರೆ ಕಾಂಗ್ರೆಸ್ ಮಾಡಲಿಲ್ಲ. ಹಿಂದೂ ಸಮಾಜದ ವಿರುದ್ಧ ಟೀಕೆಗಳನ್ನ ಅವರೇ ಒಪ್ಪಲ್ಲ. ಕಾಂಗ್ರೆಸ್ ಈ ತರಹದನ್ನ ಮಾಡಿ ಭಯೋತ್ಪಾದಕ ಚಟುವಟಿಕೆಗಳು ಜಾಸ್ತಿಯಾಗಿವೆ. ಈ ಕಾರಣದಿಂದ ಕಾಂಗ್ರೆಸ್ ನಾಶವಾಗಿ ಅಲ್ಲಿಲ್ಲೊಂದು ಪ್ರಾದೇಶಿಕ ಪಕ್ಷಗಳು ಉಳಿದುಕೊಂಡಿವೆ ಎಂದರು.