ಮತ್ತೆ ಕಾಂಗ್ರೆಸ್ ನಲ್ಲಿ ಶುರುವಾಯ್ತು ಸಿಎಂ ಚರ್ಚೆ: ದಲಿತ ನಾಯಕನ ಪರ ರಾಜಣ್ಣ ಬ್ಯಾಟಿಂಗ್!
ತುಮಕೂರು,ಆಗಸ್ಟ್ 21: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸಿ ಸರ್ಕಾರ ರಚಿಸಿರುವ ಕಾಂಗ್ರೆಸ್ ನಲ್ಲಿ ಪದೇ ಪದೇ ರಾಜ್ಯದಲ್ಲಿ ಎರಡೂವರೆ ವರ್ಷಗಳ ಬಳಿಕ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಗೆ ಹೈಕಮಾಂಡ್ ಬ್ರೇಕ್ ಹಾಕಿದ್ದು, ಇದೀಗ ಮತ್ತೆ ಮುಖ್ಯಮಂತ್ರಿ ವಿಚಾರ ಮುನ್ನಲೆಗೆ ಬಂದಿದ್ದು, ಸಿದ್ದರಾಮಯ್ಯ ಅವರ ಆಪ್ತ ರಾಜಣ್ಣ ಇದೀಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರ ಬ್ಯಾಟಿಂಗ್ ಬಿಸಿದ್ದಾರೆ.
ಹೌದು, ತುಮಕೂರಿನಲ್ಲಿ ಸನ್ಮಾನ ಸಮಾರಂಭದಲ್ಲಿ ಸಹಕಾರಿ ಸಚಿವ ಕೆ ಎಸ್ ರಾಜಣ್ಣ ಭಾಷಣದ ವೇಳೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಈ ಅವಧಿಯಲ್ಲೇ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಬಯಕೆ ಎಂದು ಹೇಳಿದ್ದು, ಈ ಹೇಳಿಕೆ ಅಚ್ಚರಿಕೆ ಕಾರಣವಾಗಿದೆ.

ಚುನಾವಣೆ ಬರುತ್ತೆ, ಹೋಗುತ್ತೆ, ಅದರ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳಬೇಕಿಲ್ಲ. ಇವತ್ತಿನ ದಿನದಲ್ಲಿ ಚುನಾವಣೆ ಸ್ಥಿತಿ ತೀರಾ ಹದಗೆಟ್ಟಿದೆ. ಕೆಲಸ ಮಾಡಿದವರು ಗೆಲ್ತಾರೆ ಅನ್ನೋ ಸ್ಥಿತಿ ಈಗ ಇಲ್ಲ.
ಇವತ್ತಿನ ಸ್ಥಿತಿ ಹೇಗಿದೆ ಅಂದ್ರೆ ಮಹಾತ್ಮಾ ಗಾಂಧಿಯೇ ಬಂದು ಚುನಾವಣೆಗೆ ನಿಂತರೂ ಸೋತು ಹೋಗ್ತಾರೆ. ಹೀಗಾಗಿ ಮೊದಲು ನೀವು ಪ್ರಾಮಾಣಿಕರಾಗಬೇಕು. ನೀವು ಪ್ರಾಮಾಣಿಕರಾದ್ರೆ, ನಾವು ಹೇಗೆ ಅಪ್ರಾಮಾಣಿಕರಾಗುತ್ತೇವೆ ಎಂದು ಹೇಳಿದರು.
ನಾನು ಮುಂದಿನ ಚುನಾವಣೆಗೆ ನಿಲ್ಲಬಾರದು ಅಂದುಕೊಂಡಿದ್ದೀನಿ. ನನಗೆ ಅನ್ನಿಸಿದಂತೆ ಬಸವರಾಜು ಕೂಡ ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ, ಜಯಣ್ಣ ಕೂಡ ನಿಲ್ಲಲ್ಲ ಅಂತಾ ಅಂದುಕೊಂಡಿದ್ದೀನಿ. ಆದರೆ, ಡಾಕ್ಟರ್ ಗೆ ಮುಖ್ಯಮಂತ್ರಿ ಆಗುವ ಆಸೆ ಇದೆ. ಹೀಗಾಗಿ ಅವರು ಮುಂದಿನ ಬಾರಿಯೂ ಸ್ಪರ್ಧೆ ಮಾಡಬಹುದು. ನನ್ನ, ಜಯಣ್ಣನ, ಷಡಕ್ಷರಿ, ಎಲ್ಲರ ಸಹಕಾರ ಇರುತ್ತೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಪರ ಬ್ಯಾಟಿಂಗ್ ಬಿಸಿದ್ದಾರೆ.
ಇನ್ನೂ ಮುಖ್ಯಮಂತ್ರಿ ಆಗೋ ಆಸೆ ಇದ್ಯಾ ಅಂತಾ ಪರಮೇಶ್ವರ್ ಗೆ ಭಾಷಣದ ವೇಳೆ ರಾಜಣ್ಣ ಅವರು ಕೇಳಿದ್ದು, ನಮ್ಮ ಜಿಲ್ಲೆಯಿಂದ ಯಾರಾದ್ರೂ ಮುಖ್ಯಮಂತ್ರಿಯಾದ್ರೆ, ನಾವೆಲ್ಲರೂ ಮುಖ್ಯಮಂತ್ರಿ ಆದಂಗೆ. ಸಹಕಾರಿಗಳು ಎಲ್ಲಾ ಪಕ್ಷದಲ್ಲಿಯೂ ಇದ್ದಾರೆ. ಅವರೆಲ್ಲರ ಉದ್ದೇಶ ಬಡವರ ಬದುಕನ್ನ ಹಸನುಗೊಳಿಸಬೇಕು ಅನ್ನೋದು ಎಂದು ಹೇಳಿದರು.
ನಮ್ಮ ರಾಜ್ಯದಲ್ಲಿ ಮಳೆಯನ್ನ ಆಧರಿಸಿ ಬೇಸಾಯ ಮಾಡ್ತೀವಿ. ಮಧುಗಿರಿ ಉಪವಿಭಾಗದಲ್ಲಿ ಏನೇ ಬೆಳೆ ಬೆಳೆದರೂ, ಹಾಕಿದ ಬಂಡವಾಳ ವಾಪಾಸ್ ಬಾರದ ಸ್ಥಿತಿಯಿದೆ. ಹೀಗಾಗಿ ಉಪಕಸುಬುಗಳನ್ನ ಪ್ರೋತ್ಸಾಹಿಸೋ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಕೆಲಸ ಮಾಡುತ್ತಿವೆ. ನಾನು ಸಚಿವನಾದ ಮೇಲೆ ಎಲ್ಲಾ ಕಂದಾಯ ವಿಭಾಗಳಲ್ಲಿ ಸಭೆಗಳನ್ನ ನಡೆಸಿ, ಅಲ್ಲಿನ ನ್ಯೂನತೆಗಳನ್ನ ತಿಳಿದುಕೊಂಡಿದ್ದೇವೆ.
ನಮ್ಮ ಜಿಲ್ಲಾ ಬ್ಯಾಂಕ್ ನಲ್ಲಿ ಇವತ್ತು 1500 ಕೋಟಿ ಸಾಲ ಸೌಲಭ್ಯವನ್ನ ಕೊಡುತ್ತೇವೆ. ರೈತರಿಗೆ 800 ಕೋಟಿ ಸಾಲ ಸೌಲಭ್ಯವನ್ನ ಕೊಟ್ಟಿದ್ದೀವಿ. ಶೂನ್ಯ ಬಡ್ಡಿಯ ಸಾಲ ಸೌಲಭ್ಯಗಳನ್ನ ಕೊಟ್ಟಿದ್ದೇವೆ ಎಂದರು.
ನಮ್ಮ ಆಡಳಿತ ಮಂಡಳಿಯಲ್ಲಿ ಎಲ್ಲಾ ಪಕ್ಷದವರಿದ್ದೇವೆ. ಆದ್ರೆ ನಾವು ಸಂಸ್ಥೆಯ ಒಳಗೆ ಹೋದ ಮೇಲೆ ಎಲ್ಲಾ ಪಕ್ಷಭೇದ ಮರೆತು ಸಂಸ್ಥೆಯ ಒಳಿತಿಗಾಗಿ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯನವ್ರು ಅನ್ನಭಾಗ್ಯ ತಂದಿರುವ ಹಿಂದೆ ಒಂದು ಉದ್ದೇಶವಿದೆ. ಈ ರಾಜ್ಯದಲ್ಲಿ ಯಾರು ಕೂಡ ಹಸಿವಿನಿಂದ ಮಲಗಬಾರದು ಅನ್ನೋ ಉದ್ದೇಶದಿಂದ ಈ ಯೋಜನೆ ತರಲಾಗಿದೆ. ಅವರು ಕಾಂಗ್ರೆಸ್ ಮುಖ್ಯಮಂತ್ರಿ ಅಂತಾ ಕೇವಲ ಕಾಂಗ್ರೆಸ್ ನವ್ರಿಗೆ ಮಾತ್ರ ಕೊಡಲಿಲ್ಲ. ಕುರುಬರು ಅಂತಾ ಕುರುಬರಿಗೆ ಮಾತ್ರ ಕೊಡಲಿಲ್ಲ, ಎಲ್ಲಾ ಬಡವರಿಗೂ ಕೊಟ್ಟಿದ್ದಾರೆ. ಯಾರಿಗೆ ಅರ್ಹತೆ ಇದೆ ಅವರಿಗೆ ದೊರಕಬೇಕು. ಯಾರಿಗೆ ಅರ್ಹತೆ ಇಲ್ಲ ಅವರು ತೆಗೆದುಕೊಳ್ಳಬಾರದು ಎಂದು ಹೇಳಿದರು.












Click it and Unblock the Notifications