ರಾಜಕಾರಣಿಗಳು ಈಡಿಯಟ್ಸ್: ಸಿಎನ್ನಾರ್ ಸಾತ್ವಿಕ ಕೋಪ
ಮುಂಬೈ, ನ.18: 55 ವರ್ಷಗಳಿಂದ ತಮ್ಮ ತನುಮನಧನವನ್ನು ಮೂಲ ವಿಜ್ಞಾನಕ್ಕಾಗಿ ಮೀಸಲಿಟ್ಟು, ಮಹತ್ತರ ಸಾಧನೆ ಮಾಡಿರುವ ಕರ್ನಾಟಕದ ವಿಜ್ಞಾನಿ 79 ವರ್ಷದ ಸಿಎನ್ಆರ್ ರಾವ್ ಅವರು ಇಷ್ಟೂ ವರ್ಷ ತಾವು ಅನುಭವಿಸಿದ ನೋವು/ಸಂಕಟ/ಹತಾಶೆಯನ್ನು ಹೊರಹಾಕಿದ್ದಾರೆ.
ಮೂರು ದಿನಗಳ ಹಿಂದೆ ತಮಗೆ ಭಾರತ ರತ್ನ ಘೋಷಣೆಯಾದ ಬೆನ್ನಿಗೇ 'ನಾಡಿನ ರಾಜಕಾರಣಿಗಳು ವಿಜ್ಞಾನ ಕ್ಷೇತ್ರಕ್ಕೆ ಕಂಟಕವಾಗಿದ್ದಾರೆ. ಅವರಿಂದ ವಿಜ್ಞಾನದ ಅಭಿವೃದ್ಧಿ/ಪ್ರಗತಿಗೆ ಏನೂ ಕೊಡುಗೆಯಿಲ್ಲ. ದೇಶದಲ್ಲಿ ವೈಜ್ಞಾನಿಕ ಮನೋಭಾವ/ ವಾತಾವರಣದ ಕೊರತೆ ಇದೆ' ಎಂದು ರಾವ್ ಇದೇ ವೇಳೆ ಬೇಸರ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ. ಮೂಲ ವಿಜ್ಞಾನಕ್ಕಾಗಿ (Fundamental science) ಈ ಇಳಿವಯಸ್ಸಿನಲ್ಲೂ ತಹತಹಿಸುವ ಸಿಎನ್ನಾರ್, ದೇಶದ ಒಳಿತು ಇರುವುದು ಮೂಲ ವಿಜ್ಞಾನದ ಅಭಿವೃದ್ಧಿಯಲ್ಲೇ ಎಂದಿರುವ ಅವರು ಬಾಹ್ಯಾಕಾಶ ವಿಜ್ಞಾನಕ್ಕೆ ದುಂದುವೆಚ್ಚ ಮಾಡುತ್ತಿರುವುದಕ್ಕೆ ಮಂಗಳಾರತಿ ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಸಾತ್ವಿಕ ಕೋಪವನ್ನು ಹೊರಹಾಕಿರುವ ಸಿಎನ್ನಾರ್ ಅವರು ಅವರೆಲ್ಲಾ 'ಈಡಿಯಟ್ಸ್ (ಮೂರ್ಖರು) ಕಣ್ರೀ. ಅವರಿಂದ ವಿಜ್ಞಾನಕ್ಕೆ ಏನೂ ಪ್ರಯೋಜವಿಲ್ಲ' ಎಂದಿದ್ದಾರೆ.
'ಈ ಈಡಿಯಟ್ ರಾಜಕಾರಣಿಗಳು ವೈಜ್ಞಾನಿಕ ಸಂಶೋಧನಾ ವಲಯಕ್ಕೆ ನೀಡಿದ ನೆರವು ಅಷ್ಟರಲ್ಲೇ ಇದೆ. ಸರ್ಕಾರ ನಮಗೆ ನೀಡಿದ ನೆರವಿನ ಪ್ರಮಾಣ ಏನಿದೆಯೋ ಅದಕ್ಕಿಂತ ಹೆಚ್ಚಿನದನ್ನು ನಾವು ದೇಶಕ್ಕೆ ನೀಡಿದ್ದೇವೆ. ಸರ್ಕಾರಗಳ ಅಸಹಕಾರದ ಹೊರತಾಗಿಯೂ ವಿಜ್ಞಾನಿಗಳು ನಮ್ಮಿಂದ ಸಾಧ್ಯವಿರುವ ಯತ್ನವನ್ನು ಮಾಡಿದ್ದೇವೆ' ಎಂದು ಹೇಳಿದರು.

IT ಕೆಲವೇ ಜನರ ಜೇಬು ತುಂಬಿಸುವ ಉದ್ಯಮ
ಇದೇ ವೇಳೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕೆಲವೇ ಜನರ ಜೇಬು ತುಂಬಿಸುವ ಒಂದು ಉದ್ಯಮ ಅಷ್ಟೇ. ಅದಕ್ಕೂ ವಿಜ್ಞಾನಕ್ಕೂ ಏನೇನೂ ಸಂಬಂಧವಿಲ್ಲ ಎಂದೂ 'ಭಾರತ ರತ್ನ' ಸಿಎನ್ನಾರ್ ಹೇಳಿದ್ದಾರೆ.

80ನೇ ವಯಸ್ಸಿನಲ್ಲೂ ಸಂತೋಷವಾಗಿದ್ದೇನೆ
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್ಆರ್ ರಾವ್, ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರ ಕೆಲವೇ ಕೆಲವು ಜನರಿಗೆ ದುಡ್ಡು ಮಾಡಿಕೊಡುವ ಒಂದು ಉದ್ಯಮ ಮತ್ತು ಅಸಂತೋಷಕ್ಕೆ ಒಳಗಾಗಿರುವ ಒಂದು ದೊಡ್ಡ ಉದ್ಯೋಗಿಗಳ ಗುಂಪು' ಎಂದು ಗೇಲಿ ಮಾಡಿದರು.
ಪ್ರತಿ ದಿನ ಮಾಧ್ಯಮಗಳನ್ನು ನೋಡಿ, ಒಬ್ಬರಲ್ಲಾ ಒಬ್ಬರು ಐಟಿ ಕ್ಷೇತ್ರದವರು ಆತ್ಮಹತ್ಯೆಗೆ ಶರಣಾಗಿರುತ್ತಾರೆ, ಮತ್ಯಾರೋ ಕೆಲಸ ಸಾಕಾಗಿ ಹೋಗಿದೆ ಎಂದ ಅತೃಪ್ತಿಯಿಂದ ಇರುತ್ತಾರೆ. ನನ್ನನ್ನು ನೋಡಿ, 80ನೇ ವಯಸ್ಸಿನಲ್ಲೂ ಎಷ್ಟು ಸಂತೋಷವಾಗಿದ್ದೇನೆ ಎಂದರು.

ಪತ್ನಿ ಜತೆ ಮಾತ್ರವೇ ಮೊಬೈಲ್ ಮಾತುಕತೆ
ದೇಶದ ಯುವಜನತೆ ಕಂಪ್ಯೂಟರ್ ಹಾಗೂ ಮೊಬೈಲ್ ಫೋನ್ ಹಿಂದೆ ಬಿದ್ದಿದ್ದಾರೆ. ವಿಶ್ವಪ್ರಸಿದ್ಧ ವಿಜ್ಞಾನಿ, Prime Minister's Scientific Advisory Council Chairman ಡಾ. ಸಿಎನ್ಆರ್ ರಾವ್ ಅವರು ಇವತ್ತಿಗೂ ಕಂಪ್ಯೂಟರ್ ಬಳಸುವುದಿಲ್ಲ. ಹೆಚ್ಚಾಗಿ ಮೊಬೈಲ್ ಕೂಡ ಉಪಯೋಗಿಸುವುದಿಲ್ಲ! ಪತ್ನಿ ಜತೆ ಮಾತನಾಡುವ ಸಂದರ್ಭ ಹೊರತುಪಡಿಸಿದರೆ ಬೇರೆ ಸಮಯಗಳಲ್ಲಿ ಮೊಬೈಲ್ ಬಳಕೆ ಮಾಡುವುದಿಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ.

ಇ-ಮೇಲ್ ನೋಡುವುದು ಸಮಯ ವ್ಯರ್ಥ
ವಯಸ್ಸು 79 ಆಗಿದ್ದರೂ ನಿತ್ಯ ಹಲವಾರು ಗಂಟೆಗಳನ್ನು ಪ್ರಯೋಗಾಲಯಗಳಲ್ಲೇ ಕಳೆಯುವ ರಾವ್ ಅವರು, 'ಇ-ಮೇಲ್ ಗಳನ್ನು ನೋಡುವುದು ಸಮಯ ವ್ಯರ್ಥ ಮಾಡುವ ಕೆಲಸ' ಎಂದು ಅವರು ಪ್ರತಿಪಾದಿಸಿದ್ದಾರೆ. ರಾವ್ ಅವರಿಗೆ ಬೇರೆಯವರು ಕಳುಹಿಸುವ ಇ-ಮೇಲ್ಗಳನ್ನು ಅವರ ಸಿಬ್ಬಂದಿ ನೋಡಿ ತಿಳಿಸುತ್ತಾರಂತೆ!












Click it and Unblock the Notifications