ಕುಂದನಹಳ್ಳಿಯಲ್ಲಿ ಕುರಿ ಕೋಳಿ ತಿಂದು ತೇಗಿದ ಚಿರತೆ
ಮಂಡ್ಯ, ಜೂನ್ 02 : ಕೆ.ಆರ್.ಪೇಟೆ ತಾಲೂಕಿನ ಕುಂದನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆಯ ಅಟ್ಟಹಾಸ ಮುಂದುವರೆದಿದ್ದು ಗ್ರಾಮಸ್ಥರು ಭಯದಲ್ಲೇ ದಿನ ಕಳೆಯುವಂತಾಗಿದೆ.
ಊರೊಳಗೆ ನುಗ್ಗುವ ಚಿರತೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕುರಿ, ಕೋಳಿ, ಮೇಕೆಗಳನ್ನು ತಿಂದು ಉಪಟಳ ನೀಡುತ್ತಿದೆ. ಆದಾಯದ ಮೂಲವಾಗಿರುವ ಕುರಿ, ಮೇಕೆಗಳನ್ನು ಕಳೆದುಕೊಂಡ ರೈತರು ದಿಕ್ಕೆಟ್ಟಂತಾಗಿದ್ದಾರೆ.
ಕುಂದನಹಳ್ಳಿ ಗ್ರಾಮದ ಸುಂದ್ರಯ್ಯ ಎಂಬುವರು ಸಾಕಿದ್ದ ಮೇಕೆ, ರುದ್ರಯ್ಯ ಅವರ ಕುರಿ ಮತ್ತು ಎರಡು ಕೋಳಿಗಳನ್ನು ತಿಂದಿರುವ ಚಿರತೆ ಸುಮಾರು ಮೂವತ್ತು ಸಾವಿರ ರು.ಗಳಷ್ಟು ನಷ್ಟ ಮಾಡಿದೆ. [ಬೋನಿಟ್ಟರೂ ಬೀಳದ ಚಾಲಾಕಿ ಚಿರತೆ, ಗ್ರಾಮಸ್ಥರ ಚಿಂತೆ]

ಇವರ ಮನೆ ಗ್ರಾಮದ ಕಬ್ಬಿನ ಜಮೀನಿಗೆ ಹೊಂದಿಕೊಂಡಂತೆ ಇದ್ದು, ಮನೆ ಪಕ್ಕದ ಕೊಟ್ಟಿಗೆಯಲ್ಲಿ ಮೇಕೆ ಕುರಿಗಳನ್ನು ಕಟ್ಟಿದ್ದರು. ಆದರೆ ಮಧ್ಯ ಮಧ್ಯರಾತ್ರಿ ಸಮಯದಲ್ಲಿ ಕಬ್ಬಿನ ಗದ್ದೆಯ ಮೂಲಕ ಕೊಟ್ಟಿಗೆಗೆ ನುಗ್ಗಿದ ಚಿರತೆ ಸುಮಾರು 15 ಸಾವಿರ ಬೆಲೆ ಬಾಳುವ 1 ಮೇಕೆಯನ್ನು ಸಂಪೂರ್ಣ ತಿಂದು ಹಾಕಿ ಮತ್ತೊಂದು 15 ಸಾವಿರ ಬೆಲೆ ಬಾಳುವ ಗರ್ಭ ಧರಿಸಿದ್ದ ಕುರಿಯ ಗಂಟಲು ಬಳಿ ಕಚ್ಚಿ ಸಾಯಿಸಿದೆ. ಇದಲ್ಲದೆ ಎರಡು ಕೋಳಿಗಳನ್ನು ಕೂಡ ತಿಂದು ತೇಗಿದೆ.
ಗ್ರಾಮದ ಸುತ್ತ ಮುತ್ತ ಅರಣ್ಯ ಪ್ರದೇಶವಿರುವ ಕಾರಣ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಬೋನಿಟ್ಟು ಕಾರ್ಯಾಚರಣೆ ನಡೆಸಿ ಚಿರತೆಗಳನ್ನು ಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. [ಬಂಡೀಪುರದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದ ಕರಿ ಚಿರತೆ!]












Click it and Unblock the Notifications