ಜೂನ್ ನಲ್ಲಿ ರಾಜ್ಯಸಭೆ, ಪರಿಷತ್ ಚುನಾವಣೆ
ಬೆಂಗಳೂರು, ಏ. 22 : ಲೋಕಸಭೆ ಚುನಾವಣೆ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ರಾಜಕೀಯ ಪಕ್ಷಗಳ ನಾಯಕರಿಗೆ ರಾಜ್ಯ ಸಭೆ ಮತ್ತು ವಿಧಾನಪರಿಷತ್ ಚುನಾವಣೆ ಎದುರಾಗಲಿದೆ. ಜೂನ್ ನಲ್ಲಿ ರಾಜ್ಯಸಭೆಯ 4 ಹಾಗೂ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದೆ.
ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಬಿ.ಕೆ ಹರಿಪ್ರಸಾದ್ ಹಾಗೂ ಬಿಜೆಪಿ ಮುಖಂಡರಾದ ಪ್ರಭಾಕರ್ ಕೋರೆ ಮತ್ತು ವಿ.ರಾಮಾಜೋಯಿಸ್ ಅವರ ರಾಜ್ಯಸಭೆ ಸದಸ್ಯತ್ವದ ಅವಧಿ ಜೂನ್ 25ಕ್ಕೆ ಮುಕ್ತಾಯಗೊಳ್ಳಲಿದೆ. ಅದಕ್ಕೂ ಮೊದಲೇ ಈ ಸ್ಥಾನಗಳಿಗೆ ಚುನಾವಣೆ ನಡೆಯಬೇಕು.

ಕರ್ನಾಟಕದ ವಿಧಾನಸಭೆಯಲ್ಲಿ 122 ಶಾಸಕ ಬಲ ಹೊಂದಿರುವ ಕಾಂಗ್ರೆಸ್ 2 ಸ್ಥಾನಗಳನ್ನು ಮತ್ತು 46 ಶಾಸಕರ ಬಲ ಹೊಂದಿರುವ ಪ್ರತಿಪಕ್ಷ ಬಿಜೆಪಿ ಒಂದು ಸ್ಥಾನವನ್ನು ಸುಲಭವಾಗಿ ಪಡೆದುಕೊಳ್ಳಲಿವೆ. ಉಳಿದ ಒಂದು ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ನಡೆಯಲಿದೆ.
ಪರಿಷತ್ ಚುನಾವಣೆ : ಜೂನ್ ನಲ್ಲಿ ರಾಜ್ಯಸಭೆ ಚುನಾವಣೆ ಜೊತೆಗೆ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸೇರಿದಂತೆ ಏಳು ಸದಸ್ಯರ ಅವಧಿ ಜೂನ್ 30ರಂದು ಕೊನೆಗೊಳ್ಳಲಿದೆ. ಬಿಜೆಪಿಯ ನಾಲ್ವರು, ಜೆಡಿಎಸ್ನ ಇಬ್ಬರು ಹಾಗೂ ಕಾಂಗ್ರೆಸ್ನ ಒಬ್ಬ ಸದಸ್ಯರ ಅವಧಿ ಮುಕ್ತಾಯಗೊಳ್ಳಲಿದೆ.
ಬಲಾಬಲದ ಆಧಾರದ ಮೇಲೆ ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಮತ್ತು ಬಿಜೆಪಿ, ಜೆಡಿಎಸ್ ತಲಾ ಒಂದು ಸ್ಥಾನ ಗಳಿಸಲಿವೆ. ಉಳಿಯುವ ಒಂದು ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ. ಆದ್ದರಿಂದ ರಾಜಕೀಯ ಪಕ್ಷಗಳು ಮೇ 16ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ತಕ್ಷಣ, ರಾಜ್ಯಸಭೆ ಮತ್ತು ಪರಿಷತ್ ಚುನಾವಣೆಯತ್ತ ಗಮನ ಹರಿಸಲಿವೆ.
ಪರಿಷತ್ ಅವಧಿ ಮುಗಿಯುವ ಸದಸ್ಯರು : ಬಿಜೆಪಿಯ ಡಿವಿ ಸದಾನಂದ ಗೌಡ, ಭಾರತಿ ಶೆಟ್ಟಿ, ಕೆ.ಮೋನಪ್ಪ ಭಂಡಾರಿ, ಡಾ.ಎ.ಎಚ್.ಶಿವಯೋಗಿಸ್ವಾಮಿ, ಎಸ್.ಆರ್.ಲೀಲಾ, ದೊಡ್ಡರಂಗೇಗೌಡ, ಎಂ.ಆರ್.ದೊರೆಸ್ವಾಮಿ, ಬಿ.ಬಿ. ಶಿವಪ್ಪ. ಕಾಂಗ್ರೆಸ್ ಪಕ್ಷದ ಎಂ.ವಿ.ರಾಜಶೇಖರನ್. ಜೆಡಿಎಸ್ ಪಕ್ಷದ ಎಂ.ಸಿ.ನಾಣಯ್ಯ, ಕೆ.ವಿ.ನಾರಾಯಣಸ್ವಾಮಿ, ಪುಟ್ಟಣ್ಣ












Click it and Unblock the Notifications