ಮಂಡ್ಯ ಜೆಡಿಎಸ್ ಬಂಡಾಯ ಬೆಂಗಳೂರಲ್ಲೂ ತಣ್ಣಗಾಗಲಿಲ್ಲ
ಬೆಂಗಳೂರು, ಡಿಸೆಂಬರ್ 11 : ಮಂಡ್ಯದಲ್ಲಿನ ಜೆಡಿಎಸ್ ಭಿನ್ನಮತ ಶಮನಗೊಳಿಸುವ ಎಚ್.ಡಿ.ಕುಮಾರಸ್ವಾಮಿ ಅವರ ಪ್ರಯತ್ನ ವಿಫಲವಾಗಿದೆ. ವಿಧಾನಪರಿಷತ್ ಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿ.ರಾಮಕೃಷ್ಣ ಅವರು ತಮ್ಮ ನಾಮಪತ್ರವನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿರುವ ಎಚ್.ಡಿ.ಕುಮಾರಸ್ವಾಮಿ ಅವರ ನಿವಾಸದಲ್ಲಿ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರ ಮಹತ್ವದ ಸಭೆ ನಡೆಯಿತು. ಮಂಡ್ಯ ಸಂಸದ ಸಿ.ಎಸ್.ಪುಟ್ಟರಾಜು ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. [ಪರಿಷತ್ ಚುನಾವಣೆ : ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ]

ಸಭೆಯಲ್ಲಿ ಮಂಡ್ಯದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿ.ರಾಮಕೃಷ್ಣ ಅವರ ಮನವೊಲಿಸಲು ಸಾಧ್ಯವಾಗಲಿಲ್ಲ. ಅಪ್ಪಾಜಿ ಗೌಡರ ಬದಲು ತನ್ನನ್ನು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡುವಂತೆ ರಾಮಕೃಷ್ಣ ಅವರು ಬೇಡಿಕೆ ಇಟ್ಟರು. ['ಪರಿಷತ್ ಚುನಾವಣೆ ಸೋಲಿನ ಹೊಣೆ ಹೊರುವುದಿಲ್ಲ']
ಶಾಸಕರ ಗೈರು : ಮಂಡ್ಯದಲ್ಲಿನ ಜೆಡಿಎಸ್ ಬಂಡಾಯದ ಕೇಂದ್ರಬಿಂದು ನಾಗಮಂಗಲ ಕ್ಷೇತ್ರದ ಶಾಸಕ ಚೆಲುವರಾಯಸ್ವಾಮಿ ಇಂದಿನ ಸಂಧಾನ ಸಭೆಗೆ ಗೈರು ಹಾಜರಾಗಿದ್ದರು. ಆದ್ದರಿಂದ, ಯಾವುದೇ ನಿರ್ಧಾರವನ್ನು ಕೈಗೊಳ್ಳಲು ಸಭೆ ವಿಫಲವಾಯಿತು. [ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ತಿರಸ್ಕೃತ!]
ಶನಿವಾರ ಮತ್ತೆ ಸಭೆ : ಕುಮಾರಸ್ವಾಮಿ ಅವರ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಮಂಡ್ಯ ಸಂಸದ ಸಿ.ಎಸ್.ಪುಟ್ಟರಾಜು ಅವರು, 'ಚೆಲುವರಾಯಸ್ವಾಮಿ ಅವರು ಹೈದರಾಬಾದ್ಗೆ ತೆರಳಿದ್ದಾರೆ. ಆದ್ದರಿಂದ ಇಂದಿನ ಸಭೆಗೆ ಹಾಜರಾಗಿರಲಿಲ್ಲ. ಅವರು ಬಂದ ನಂತರ ಮತ್ತೊಂದು ಸುತ್ತಿನ ಸಭೆ ನಡೆಸಿ ಬಂಡಾಯ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯುವ ಬಗ್ಗೆ ತೀರ್ಮಾನಿಸಲಾಗುತ್ತದೆ' ಎಂದು ಹೇಳಿದರು.
ಶಾಸಕ ಚೆಲುವರಾಯಸ್ವಾಮಿ ಅವರು ಸೂಚಿಸಿದ ಬಿ.ರಾಮಕೃಷ್ಣ ಅವರಿಗೆ ಟಿಕೆಟ್ ನೀಡಿಲ್ಲ ಎಂದು ಮಂಡ್ಯದಲ್ಲಿ ಅಸಮಾಧಾನವೆದ್ದಿದೆ. ಚೆಲುವರಾಯಸ್ವಾಮಿ ಬೆಂಬಲ ಪಡೆದ ರಾಮಕೃಷ್ಣ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಶನಿವಾರ ಕೊನೆಯ ದಿನವಾಗಿದ್ದು, ಡಿಸೆಂಬರ್ 27ರಂದು ಚುನಾವಣೆ ನಡೆಯಲಿದೆ.












Click it and Unblock the Notifications