ಕೊಡಗು : ಕೊನೆಗಳಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬದಲಾವಣೆ
ಕೊಡಗು, ಡಿಸೆಂಬರ್ 09 : ಕೊಡಗಿನಲ್ಲಿ ಜೆಡಿಎಸ್ ಒಡೆದ ಮನೆಯಾಗಿದೆ. ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಎರಡು ಬಾರಿ ಬದಲಾವಣೆ ಮಾಡಲಾಗಿದೆ. ಅಂತಿಮವಾಗಿ ಬೆಂಗಳೂರಿನ ಉದ್ಯಮಿ ಎ.ವಿ.ವಿನೋದ್ ಕುಮಾರ್ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಘೋಷಿಸಲಾಗಿದೆ.
ವಿಧಾನಪರಿಷತ್ ಚುನಾವಣೆ ಘೋಷಣೆಯಾದ ದಿನದಿಂದ ಜಿಲ್ಲೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರದಲ್ಲಿ ಭಾರೀ ಗೊಂದಲ ಉಂಟಾಗಿತ್ತು. ಉದ್ಯಮಿ ಎಸ್.ವಿ.ನರೇಶ್ ಕುಮಾರ್ ಅವರು ಅಭ್ಯರ್ಥಿ ಎಂದು ಘೋಷಣೆಯಾಗಿತ್ತು. ಆದರೆ, ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿ ಇರುವಾಗ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದೆ.[ಪರಿಷತ್ ಚುನಾವಣೆ : ಜೆಡಿಎಸ್ 12 ಅಭ್ಯರ್ಥಿಗಳ ಪಟ್ಟಿ]

ಮೂರು ಅಭ್ಯರ್ಥಿಗಳು : ಮೊದಲು ಕೋಲಾರದ ನಂಜುಂಡೇಗೌಡ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಆದರೆ, ಅವರು ಕಣಕ್ಕಿಳಿಯಲು ಹಿಂದೇಟು ಹಾಕಿದ್ದರಿಂದ, ಬೆಂಗಳೂರಿನ ಉದ್ಯಮಿ ಎಸ್.ವಿ.ನರೇಶ್ ಕುಮಾರ್ ಅವರ ಹೆಸರು ಕೇಳಿಬಂದಿತು. [ಡಿ.27 ಪರಿಷತ್ ಚುನಾವಣೆ ಬಗ್ಗೆ ಓದಿ]
ಡಿಸೆಂಬರ್ 8ರ ಮಂಗಳವಾರ ಪುನಃ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿನ ಎ.ವಿ.ವಿನೋದ್ ಕುಮಾರ್ ಅವರನ್ನು ಅಭ್ಯರ್ಥಿ ಎಂದು ತೀರ್ಮಾನಿಸಲಾಗಿದೆ. ['ರಮ್ಯಾ ಸೋಲಿಸಿದ ಶಿವರಾಮೇಗೌಡರಿಗೆ ಟಿಕೆಟ್ ಯಾಕೆ?']
ಬೆಂಗಳೂರಲ್ಲಿ ತುರ್ತು ಸಭೆ : ಕೊಡಗು ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಸಂಕೇತ್ ಪೂವಯ್ಯ ಸೇರಿದಂತೆ ರಾಜ್ಯಸಮಿತಿ ಸದಸ್ಯರು, ಕೊಡಗು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ತುರ್ತು ಸಭೆ ನಡೆಸಿ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದಾರೆ.
ನರೇಶ್ ಕುಮಾರ್ ಅವರ ಪುತ್ರಿ ತೀವ್ರ ಅನಾರೋಗ್ಯಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ಸ್ಪರ್ಧಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ, ವಿನೋದ್ ಕುಮಾರ್ ಹೆಸರು ಘೋಷಿಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಆದರೆ, ಒಳಮರ್ಮ ಮಾತ್ರ ನಿಗೂಢವಾಗಿಯೇ ಉಳಿದಿದೆ.












Click it and Unblock the Notifications