ಲೋಕಾಯುಕ್ತ ಪದಚ್ಯುತಿ ವಿಧೇಯಕದ ಪ್ರಮುಖ ಅಂಶಗಳು
ಬೆಂಗಳೂರು, ಜುಲೈ 31 : ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ವಿಧೇಯಕ -2015ಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ವಿಧೇಯಕದ ಅನ್ವಯ ವಿಧಾನಮಂಡಲದ ಉಭಯ ಸದನಗಳ ಮೂರನೇ ಎರಡರಷ್ಟು ಸದಸ್ಯರ ಅನುಮೋದನೆಯೊಂದಿಗೆ ಲೋಕಾಯುಕ್ತರನ್ನು ಪದಚ್ಯುತಿಗೊಳಿಸಬಹುದಾಗಿದೆ.
ಗುರುವಾರದ ಕಲಾಪದಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಲೋಕಾಯುಕ್ತ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ವಿಧಾನಸಭೆ ಸರ್ವಾನುಮತದಿಂದ ಇದಕ್ಕೆ ಒಪ್ಪಿಗೆ ನೀಡಿತು. ವಿಧಾನಪರಿಷತ್ತಿನಲ್ಲಿ ಶುಕ್ರವಾರ ಈ ವಿಧೇಯಕವನ್ನು ಮಂಡನೆ ಮಾಡಲಾಗುತ್ತದೆ. [ಕರ್ನಾಟಕ ಲೋಕಾಯುಕ್ತದಲ್ಲಿ ಇದೇನಿದು ಹಗರಣ?]

ಲೋಕಾಯುಕ್ತರನ್ನು ತಕ್ಷಣ ಕೆಳಗಿಳಿಸಲು ಅನುಕೂಲವಾಗುವಂತೆ ಕಾಯ್ದೆಯನ್ನು ಮಾರ್ಪಾಡು ಮಾಡಬೇಕು ಎಂದು ಪ್ರತಿಪಕ್ಷಗಳು ಸರ್ಕಾರಕ್ಕೆ ಸಲಹೆ ನೀಡಿದವು. ಆದರೆ, ಸರ್ಕಾರ ವಿಧೇಯಕಕ್ಕೆ ಇದರಲ್ಲಿ ಅವಕಾಶವಿಲ್ಲ ಎಂದು ಹೇಳಿತು. ತಕ್ಷಣಕ್ಕೆ ಪದಚ್ಯುತಿಗೊಳಿಸುವ ಕಾಯ್ದೆಯನ್ನು ಸೇರಿಸಲು ಸ್ಪೀಕರ್ ಕೊಠಡಿಯಲ್ಲಿ ಸಿಎಂ, ಕಾನೂನು ಸಚಿವರು, ಪ್ರತಿಪಕ್ಷ ನಾಯಕರ ಸಭೆ ನಡೆಯಿತು. ಆದರೆ, ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ.
ವಿಧೇಯಕದ ಪ್ರಮುಖ ಅಂಶಗಳು
* ಲೋಕಾಯುಕ್ತ ಪದಚ್ಯುತಿ ನಿರ್ಣಯ ಮಂಡನೆಗೆ ಅವಕಾಶ ಕೋರಲು ವಿಧಾನಸಭೆಯ ಮೂರನೆಯ ಒಂದರಷ್ಟು ಅಂದರೆ 75 ಸದಸ್ಯರ ಸಹಿ ಅಗತ್ಯವಿದೆ. ಲೋಕಾಯುಕ್ತರ ಮೇಲೆ ಕೇಳಿಬಂದಿರುವ ಆರೋಪದ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಅಥವ ಅವರು ನೇಮಿಸಿದ ಬೇರೆ ನ್ಯಾಯಮೂರ್ತಿಗಳು ಆರೋಪ ಪಟ್ಟಿ ಸಿದ್ಧಪಡಿಸುತ್ತಾರೆ.
* ಈ ಆರೋಪಪಟ್ಟಿಯನ್ನು ಲೋಕಾಯುಕ್ತರಿಗೆ ಸಲ್ಲಿಕೆ ಮಾಡಲಾಗುತ್ತದೆ ಮತ್ತು 90 ದಿನದಲ್ಲಿ ಇದಕ್ಕೆ ಉತ್ತರಿಸಲು ಕಾಲಾವಕಾಶ ನೀಡಲಾಗುತ್ತದೆ. ಉತ್ತರ ಬಂದ ಬಳಿಕ ಆರೋಪದ ಬಗ್ಗೆ ನ್ಯಾಯಮೂರ್ತಿಗಳು ಸಭಾಧ್ಯಕ್ಷರಿಗೆ ವರದಿ ನೀಡುತ್ತಾರೆ.
* ಆರೋಪ ನಿಜ ಎಂಬ ವರದಿ ಬಂದರೆ ಸದನದಲ್ಲಿ ಅದನ್ನು ಮತಕ್ಕೆ ಹಾಕಲಾಗುತ್ತದೆ. ಮೂರನೆಯ ಎರಡರಷ್ಟು ಮತ ದೊರೆತರೆ ಸದನದ ತೀರ್ಮಾನವನ್ನು ರಾಜ್ಯಪಾಲರಿಗೆ ರವಾನಿಸಲಾಗುತ್ತದೆ. ರಾಜ್ಯಪಾಲರ ಅಂಕಿತ ದೊರೆತರೆ, ಲೋಕಾಯುಕ್ತರ ಪದಚ್ಯುತಿ ಆಗಲಿದೆ.












Click it and Unblock the Notifications