ಪ್ರಮುಖ ಆಭರಣ ಮಳಿಗೆಗಳಲ್ಲಿ ತಪಾಸಣೆ: 172 ಪ್ರಕರಣ ದಾಖಲು
ಬೆಂಗಳೂರು, ನವೆಂಬರ್ 7: ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕ್ಷೇತ್ರಾಧಿಕಾರಿಗಳು ರಾಜ್ಯದ ಅನೇಕ ಕಡೆ ಚಿನ್ನ ಬೆಳ್ಳಿ ಅಂಗಡಿಗಳಲ್ಲಿ ತಪಾಸಣೆ ನಡೆಸಿದರು.
ಆಭರಣ ಖರೀದಿ ಸಂದರ್ಭದಲ್ಲಿ ವಂಚನೆ ನಡೆದಿದೆ ಎಂದು ಗ್ರಾಹರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸೋಮವಾರ ಮತ್ತು ಮಂಗಳವಾರ ಆಭರಣ ಮಳಿಗೆಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿದರು. ವಂಚನೆ ಕಂಡುಬಂದ ಅಂಗಡಿಗಳ ಮೇಲೆ ಮೊಕದ್ದಮೆ ಹೂಡಲಾಗಿದ್ದು, ದಂಡ ವಿಧಿಸಲಾಗಿದೆ.
ಬೆಂಗಳೂರಿನಲ್ಲಿ ಮಣಪ್ಪುರಂ ಜ್ಯುವೆಲರ್ಸ್, ರಾಜ್ ಡೈಮಂಡ್ಸ್, ಸುಲ್ತಾನ್ ಗೋಲ್ಡ್ ಮತ್ತು ಡೈಮಂಡ್ಸ್, ನವರತನ್ ಜ್ಯುವೆಲರ್ಸ್, ಗಣೇಶ್ ಜುವೆಲರ್ಸ್ ಮೇಲೆ 37 ಮೊಕದ್ದಮೆಗಳನ್ನು ದಾಖಲಿಸಿ, 44 ಸಾವಿರ ರೂ ದಂಡ ವಿಧಿಸಲಾಗಿದೆ.

ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರುಗಳಲ್ಲಿ 54 ಮೊಕದ್ದಮೆಗಳು ದಾಖಲಾಗಿದ್ದು, 37 ಸಾವಿರ ರೂ. ದಂಡ ವಿಧಿಸಲಾಗಿದೆ.
ಮೈಸೂರು, ಮಂಡ್ಯ, ಮಡಿಕೇರಿ, ಹಾಸನ, ಮಂಗಳೂರು, ಉಡುಪಿ, ಚಿಕ್ಕಮಗಳೂರುಗಳಲ್ಲಿ 26 ಪ್ರಕರಣಗಳು ದಾಖಲಾಗಿದ್ದು, 21,500 ರೂ ದಂಡ ವಿಧಿಸಲಾಗಿದೆ.
ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಹುಬ್ಬಳ್ಳಿ, ಕಾರವಾರ ಜಿಲ್ಲೆಗಳಲ್ಲಿ 26 ಪ್ರಕರಣಗಳು ದಾಖಲಾಗಿವೆ. 7,000 ರೂ ದಂಡ ವಿಧಿಸಲಾಗಿದೆ.

ಕಲಬುರ್ಗಿ, ರಾಯಚೂರು, ಬಳ್ಳಾರಿ, ಬೀದರ್, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಿಂದ 20,500 ರೂ. ದಂಡ ಹಾಗೂ 13 ಮೊಕದ್ದಮೆಗಳು ದಾಖಲಾಗಿವೆ.
ರಾಜ್ಯದಾದ್ಯಂತ ಒಟ್ಟು 695 ಕಡೆ ತಪಾಸಣೆಗಳನ್ನು ಮಾಡಲಾಗಿದ್ದು, 172 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications