ಮೌಲ್ಯಮಾಪನ ಬಹಿಷ್ಕರಿಸುವ ಉಪನ್ಯಾಸಕರಿಗೆ ಜೈಲು ಶಿಕ್ಷೆ!
ಪರೀಕ್ಷೆಗಳ ಮೌಲ್ಯಮಾನಗಳನ್ನು ಬಹಿಸ್ಕರಿಸುವ ಉಪನ್ಯಾಸಕರು ಮತ್ತು ಶಿಕ್ಷಕರಿಗೆ ಐದು ವರ್ಷ ಜೈಲು ಶಿಕ್ಷೆ ಮತ್ತು ಐದು ಲಕ್ಷ ರು.ವರೆಗೆ ದಂಡ ವಿಧಿಸುವ ಕರ್ನಾಟಕ ಶಿಕ್ಷಣ ತಿದ್ದುಪಡಿ ಮಸೂದೆಯನ್ನು ರಾಜ್ಯ ಸರ್ಕಾರ ಅಂಗೀಕಾರ ಮಾಡಿದೆ.
ಬೆಂಗಳೂರು, ಫೆಬ್ರವರಿ. 16 : ಪರೀಕ್ಷೆಗಳ ಮೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟನೆಗಳನ್ನು ಕೈಗೊಳ್ಳುವ ಉಪನ್ಯಾಸಕರು ಮತ್ತು ಶಿಕ್ಷಕರಿಗೆ ಜೈಲು ಶಿಕ್ಷೆ ಹಾಗೂ ಮೌಲ್ಯಮಾಪನ ಬಹಿಷ್ಕಾರ ಬೆಂಬಲಿಸುವ ಸಂಘಟನೆಗಳ ಮೇಲೂ ಕ್ರಮ ಕೂಗೊಳ್ಳುವ ಮಸೂದೆ ಅಂಗೀಕಾರವಾಗಿದೆ.
ಕರ್ನಾಟಕ ಶಿಕ್ಷಣ ತಿದ್ದುಪಡಿ ಮಸೂದೆ ಅಂಗೀಕಾರವಾಗಿದ್ದು, ಬಜೆಟ್ ಅಧಿವೇಶನದ ವೇಳೆ ವಿಧಾನಪರಿಷತ್ ನಲ್ಲಿ ಇದಕ್ಕೆ ಅಂಗೀಕಾರ ಪಡೆದುಕೊಳ್ಳಲು ಸರ್ಕಾರದ ನಿರ್ಧಾರಿಸಿದೆ. ರಾಜ್ಯ ಸರ್ಕಾರದ ಈ ನಡೆಗೆ ಉಪನ್ಯಾಸಕರ ಸಂಘದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.[ಪಶ್ನೆ ಪತ್ರಿಕೆ ಸೋರಿಕೆ ತಡೆಗೆ ಖಜಾನೆಯೇ ಬದಲಾವಣೆ !]
ಹೋರಾಟ ಮಾಡಿದರೆ ಜೈಲಿಗೆ ಹಾಕೋದು ಎಷ್ಟು ಸರಿ? ಸರ್ಕಾರ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ನಮ್ಮ ಬೇಡಿಕೆ ಈಡೇರಿಸದೆ ಕಾನೂನು ಪ್ರಯೋಗಿಸಿ ನಮ್ಮನ್ನ ನಿಯಂತ್ರಣ ಮಾಡಲು ಮುಂದಾಗಿದೆ. ಈ ವಿಧೇಯಕ ಒಪ್ಪಲು ಸಾಧ್ಯವಿಲ್ಲ. ಇದು ಶಿಕ್ಷಕರಿಗೆ ಮಾಡುತ್ತಿರುವ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲು ನಮ್ಮ ಬೇಡಿಕೆ ಈಡೇರಿಸಿ ಅಮೇಲೆ ಕಾನೂನು ತನ್ನಿ. ನಿರಂತರ ಹೋರಾಟ ಮಾಡಿದರೂ ಭರವಸೆ ಈಡೇರಿಸುತ್ತಿದ್ದೀರಾ? ಕೊಟ್ಟ ಮಾತು ಉಳಿಸಿಕೊಳ್ಳಿ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹಾಗೂ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಶ್ರೀಕಂಠೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ವಿಧೇಯಕ ವಾಪಸ್ ಪಡೆಯದಿದರೆ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಉಪನ್ಯಾಸಕರು ಎಚ್ಚರಿಕೆ ನೀಡಿದ್ದಾರೆ.
ವಿಧೇಯಕದ ಅಂಶಗಳು:
* ವಿಧೇಯಕದ 23 ಡಿ ತಿದ್ದುಪಡಿ.
* ಮೌಲ್ಯಮಾಪಕ ಮೌಲ್ಯಮಾಪನದ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತವರು ಮೌಲ್ಯಮಾಪನ ಸ್ಕೀಂ ಉಲ್ಲಂಘನೆ ಮಾಡುವಂತಿಲ್ಲ.
* ಮೌಲ್ಯಮಾಪನ ಬಹಿಷ್ಕಾರ ಮಾಡುವಂತಿಲ್ಲ ಹಾಗೂ ಮೌಲ್ಯಮಾಪಕರು, ಮೇಲ್ವೀಚಾರಕರಿಗೆ ಕೆಲಸ ಮಾಡದಂತೆ ಯಾರೂ ಪ್ರಚೋದನೆ ಮಾಡುವಂತಿಲ್ಲ. ಅಂದರೆ ಪ್ರತಿಭಟನೆ ಮಾಡುವಂತೆ ಪ್ರಚೋದಿಸುವಂತಿಲ್ಲ.
* ಹೀಗೆ ಮಾಡಿದರೆ ಮೌಲ್ಯಮಾಪನ ಬಹಿಷ್ಕಾರ ಮಾಡಿದವರಿಗೂ, ಪ್ರಚೋದನೆ ನೀಡುವವರಿಗೂ ಐದು ವರ್ಷ ಜೈಲು ಶಿಕ್ಷೆ ಮತ್ತು ಐದು ಲಕ್ಷ ರೂ.ವರೆಗೆ ಜುಲ್ಮಾನೆ ವಿಧಿಸಲಾಗುತ್ತದೆ.
* ಅಥವಾ ಜುಲ್ಮಾನೆ ಶಿಕ್ಷೆ ಎರಡೂ ವಿಧಿಸುವ ಕಾನೂನು.












Click it and Unblock the Notifications