ರಾಜಭವನದಿಂದ ಆ ಪತ್ರ ಬಂದರೆ ತನಿಖೆ ಮಾಡ್ತೀವಿ ಎಂದ ಜಿ. ಪರಮೇಶ್ವರ್
ರಾಜಭವನದಿಂದ ಮಾಹಿತಿ ಸೋರಿಕೆ ಹಾಗೂ ಸರ್ಕಾರದ ಅನುಮತಿ ಇಲ್ಲದೆ ಸಿಬಿಐ ತನಿಖೆಗೆ ಅವಕಾಶ ಇಲ್ಲ ಎನ್ನುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಮಾತನಾಡಿದ್ದಾರೆ. ರಾಜಭವನವನ್ನು ಹೈ ಸೆಕ್ಯೂರಿಟಿ ಪ್ರದೇಶ ಎಂದು ಗುರುತಿಸಲಾಗಿದೆ. ಅಲ್ಲಿಂದ ಮಾಹಿತಿ ಸೋರಿಕೆಯಾಗುತ್ತಿದೆ ಎಂದರೆ, ಅದಕ್ಕೆ ಅವರೇ ಕಾರಣ (ರಾಜಭವನದ ಒಳಗೆ ಇರುವವರೇ) ಎಂದು ಜಿ. ಪರಮೇಶ್ವರ್ ಅವರು ಹೇಳಿದ್ದಾರೆ. ಅಲ್ಲದೇ ಅವಶ್ಯವಿದ್ದರೆ ಅಥವಾ ತನಿಖೆ ನಡೆಸುವಂತೆ ಹೇಳಿದರೆ ಅದನ್ನೂ ತನಿಖೆ ಮಾಡಬಹುದು ಎಂದೂ ಪರಮೇಶ್ವರ್ ಹೇಳಿದ್ದಾರೆ.
ದೆಹಲಿ ಪೊಲೀಸ್ ಆಯಕ್ಟ್ನಲ್ಲಿ ಸಿಬಿಐಗೆ ಇನ್ವಸ್ಟಿಗೇಷನ್ ಮಾಡುವುದಕ್ಕೆ ಅವಕಾಶ ಇಲ್ಲ. ಅನೇಕ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು ಸಿಬಿಐ ಅಧಿಕಾರಿಗಳಿಗೆ ನೇರವಾಗಿ ಬಂದು ತನಿಖೆ ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶ ಕಲ್ಪಿಸಿದ್ದಾರೆ. ಆದರೆ, ಕೆಲವು ಸಂದರ್ಭಗಳಲ್ಲಿ ನಮ್ಮ ಅನುಮತಿಯನ್ನು ತೆಗೆದುಕೊಂಡು ನೀವು ಬರಬೇಕು ಎಂದು ಸರ್ಕಾರಗಳು ಹೇಳಿವೆ. ನಮ್ಮ ರಾಜ್ಯದಲ್ಲೂ ಈ ರೀತಿ (ಸಿಬಿಐ ಪೂರ್ವಾನುಮತಿ ಕಡ್ಡಾಯ) ಎನ್ನುವುದನ್ನು ಈ ಹಿಂದೆಯೂ ಮಾಡಲಾಗಿತ್ತು. ಈ ಹಿಂದೆಯೂ ನಾಲ್ಕೈದು ನಾರಿ ನೇರವಾಗಿ ನೀವು ತನಿಖೆ ಮಾಡಬಾರದು ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯಬೇಕು ಎಂದು ಹೇಳಿರುವುದು ಸಹ ಇದೆ.

ಕೆಲವು ನಿರ್ದಿಷ್ಟ ಸಂದರ್ಭದಲ್ಲಿ ಸಿಬಿಐಗೆ ನೇರವಾಗಿ ಬರಬಹುದು ಎಂದು ಅನುಮತಿಯನ್ನೂ ನೀಡಲಾಗಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಈ ರೀತಿ ಮಾಡಿಕೊಳ್ಳಲಾಗಿದೆ. ಹಲವು ಕೇಸ್ಗಳಲ್ಲಿ ಸಿಬಿಐ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಯಾವುದೇ ಅನುಮತಿಯನ್ನು ನೀಡಿದೆ. ಸಿಬಿಐನವರು ರಾಜ್ಯ ಸರ್ಕಾರಕ್ಕೆ ತಿಳಿಸದೆ ತನಿಖೆ ನಡೆಸಿರುವುದು ಇದೆ. ಈ ರೀತಿ ಆಗಬಾರದು ಎನ್ನುವ ಉದ್ದೇಶದಿಂದ ಈ ಕ್ರಮ ಅನುಸರಿಸಲಾಗಿದೆ. ಸಂದರ್ಭ ಸರಿ ಇರದೆ ಇರಬಹುದು, ನಿರ್ಧಾರ ಸರಿ ಇದೆ. ಕೇವಲ ಸಿದ್ದರಾಮಯ್ಯ ಅವರನ್ನು ಮುಂದೆ ಇಟ್ಟುಕೊಂಡು ಇದನ್ನು ಮಾಡಿಲ್ಲ ಎಂದು ಹೇಳಿದ್ದಾರೆ.
ರಾಜಭವನದಿಂದ ಮಾಹಿತಿ ಸೋರಿಕೆ: ರಾಜಭವನದಿಂದ ಮಾಹಿತಿ ಸೋರಿಕೆಯ ಬಗ್ಗೆ ಮಾತನಾಡಿರುವ ಜಿ ಪರಮೇಶ್ವರ್ ಅವರು, ರಾಜಭವನದಿಂದ ಯಾವುದಾದರು ಮಾಹಿತಿ ಸೋರಿಕೆಯಾಗುತ್ತಿದೆ ಎಂದರೆ ಅದಕ್ಕೆ ರಾಜಭವನದವರೇ ಕಾರಣ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ರಾಜಭವನದ ಕಾಂಪೌಂಡ್ ಒಳಗೆ ಯಾರು ಹೋಗಲು ಸಹ ಸಾಧ್ಯವಿಲ್ಲ. ಹೈ ಸೆಕ್ಯೂರಿಟಿ ಜೋನ್ ಎಂದು ಮಾಡಲಾಗಿದೆ. ಮಾಹಿತಿ ಸೋರಿಕೆ ಅವರ ಜವಾಬ್ದಾರಿ, ಅದನ್ನು ಇನ್ವಸ್ಟಿಗೇಷನ್ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದರೆ ಅದನ್ನೂ ನಾವು ಮಾಡಲು ಸಿದ್ಧರಿದ್ದೇವೆ. ರಾಜಭವನದಿಂದ ಅನೇಕ ಪತ್ರ ಬರುತ್ತಿದೆ. ಈ ಬಗ್ಗೆ ಪತ್ರ ಬಂದರೂ ನಾವು ತನಿಖೆ ಮಾಡಲು ಸಿದ್ಧರಿದ್ದೇವೆ ಎಂದು ನಕ್ಕಿದ್ದಾರೆ.
ಸಿ.ಎಂ ರಾಜೀನಾಮೆ ವಿಚಾರ: ಕೆಲವು ಕಾಂಗ್ರೆಸ್ ಹಿರಿಯ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಜಿ. ಪರಮೇಶ್ವರ್ ಅವರು, ಅವರು ಹಿರಿಯ ನಾಯಕರು (ಕೆ.ಬಿ ಕೋಳಿವಾಡ) ಅವರ ಅಭಿಪ್ರಾಯವನ್ನು ಹೇಳಿದ್ದಾರೆ. ಅದು ಅವರ ವೈಯಕ್ತಿಕ ಹೇಳಿಕೆ ಎಂದಿದ್ದಾರೆ. ರಾಜ್ಯಪಾಲರ ಎಲ್ಲ ಪತ್ರಗಳಿಗೂ ಉತ್ತರಿಸುತ್ತೇವೆ. ಆದರೆ, ಸಂಪುಟದ ಗಮನಕ್ಕೆ ಬಂದು ಉತ್ತರ ಕೊಡಿ ಎಂದು ಹೇಳಿದ್ದೇವೆ. ಸರ್ಕಾರದ ಗಮನಕ್ಕೆ ತಂದು ಉತ್ತರ ನೀಡಲಿ ಎಂದು ಹೇಳಿದ್ದೇವೆ. ರಾಜ್ಯಪಾಲರಿಗೆ ನೀಡುವ ಮಾಹಿತಿ ಸರ್ಕಾರದ ಗಮನಕ್ಕೂ (ಸಚಿವ ಸಂಪುಟ ಸಭೆಗೂ) ಇರಲಿ. ನಿರ್ದಿಷ್ಟ ಮಾಹಿತಿ ಅವಶ್ಯಕತೆ ಇಲ್ಲ ಎಂದಾದರೆ, ನೀಡುವುದಿಲ್ಲ. ಅವಶ್ಯಕತೆ ಇದೆ ಎಂದಾದರೆ, ರಾಜ್ಯಪಾಲರಿಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.
ವಿರೋಧ ಪಕ್ಷದ ಬೇಡಿಕೆ ಹೊಸದಲ್ಲ: ವಿರೋಧ ಪಕ್ಷದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಇದನ್ನು ಅವರು ಮೊದಲಿನಿಂದಲೂ ಮಾಡುತ್ತಿದ್ದಾರೆ. ಈಗ ಸ್ವಲ್ಪ ಎಕ್ಸಲೇಟರ್ (ಸ್ಪೀಡ್) ಹೆಚ್ಚಿಗೆ ಮಾಡಿದ್ದಾರೆ ಎಂದರು. ವಿರೋಧ ಪಕ್ಷವಾಗಿ ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಯಡಿಯೂರಪ್ಪ ವಿಷಯದಲ್ಲಿ ರಾಜೀನಾಮೆ ಕೇಳಿದ್ದರು ಎನ್ನುವ ಪ್ರಶ್ನೆಗೆ, ಹೋಲಿಕೆ ಮಾಡುವುದಿಲ್ಲ ನಾವು ಇಂಡಿಪೆಂಡೆಂಟ್ ಆಗಿ ಹೋರಾಟ ಮಾಡುತ್ತೇವೆ ಎಂದಷ್ಟೇ ಹೇಳಿದರು.












Click it and Unblock the Notifications