ತಣ್ಣಗಾದ ಸಿಎಂ ಬದಲಾವಣೆ ವಿಚಾರ: ಆದರೂ, ಬಿಎಸ್ವೈ ತಲೆದಂಡ ನಿಶ್ಚಿತ, ಬಟ್ ಯಾವಾಗ?
ಯಾವುದೋ ವಿಚಾರಕ್ಕೆ ದೆಹಲಿಗೆ ಹೋಗಿದ್ದ ಸಚಿವರೊಬ್ಬರು, ಬಿಜೆಪಿ ಮುಖಂಡರಿಬ್ಬರು ವಾಪಸ್ ಬೆಂಗಳೂರಿಗೆ ಬಂದ ಮೇಲೆ ಆದ ಸುದ್ದಿಯೇ ಬೇರೆ. ಬಲವಾದ ಯಾವುದೇ ಆಧಾರವಿಲ್ಲದ ಸುದ್ದಿಗಳು ಹರಿದಾಡಿದ್ದೇ ಹರಿದಾಡಿದ್ದು.
Recommended Video
ಕರ್ನಾಟಕ ಬಿಜೆಪಿಗೆ ಫೇಸ್ ಅಂತಿರುವ ಯಡಿಯೂರಪ್ಪನವರು ಸಿಎಂ ಹುದ್ದೆಗೆ ಇನ್ನೇನು ರಾಜೀನಾಮೆ ಒಗಾಯಿಸಲಿದ್ದಾರೆ ಎನ್ನುವರಷ್ಟು ಮಟ್ಟಿಗೆ ಸುದ್ದಿ ಹರಿದಾಡಲಾರಂಭಿಸಿತು. ಸಿಎಂ ರೇಸಿನಲ್ಲಿರುವವರೊಬ್ಬರು ಪ್ರಮಾಣವಚನ ಸ್ವೀಕರಿಸುವ ಮುನ್ನ ಮಠ ಮಂದಿರಗಳಿಗೆಲ್ಲಾ ಸುತ್ತಾಡುತ್ತಿದ್ದಾರೆ ಎನ್ನುವ ವರ್ಣರಂಜಿತ ನ್ಯೂಸ್ ಗಳ ಅಬ್ಬರ ಶುರುವಾಯಿತು.
ಹಾಗಾದರೆ, ಯಡಿಯೂರಪ್ಪನವರನ್ನು ಸಿಎಂ ಹುದ್ದೆಯಿಂದ ಕೆಳಗಳಿಸಬೇಕು ಎನ್ನುವ ಬಿಜೆಪಿಯಲ್ಲಿರುವ ವಿರೋಧ ಪಕ್ಷಗಳ ಬಣಗಳು ಪ್ರಯತ್ನ ನಡೆಸುತ್ತಿರುವುದು ಸುಳ್ಳೇ ಎಂದರೆ ಅದು ತಪ್ಪಾದೀತು. ಯಾಕೆಂದರೆ, ಈ ಪ್ರಯತ್ನಗಳು ನಡೆಯುತ್ತಲೇ ಇದೆ.
ಕಳೆದ ಕೆಲವು ತಿಂಗಳಿನಿಂದ ಕೊರೊನಾ ಏನೇ ಹಾವಳಿ ಮಾಡಲಿ, ರಾಜಕೀಯವೇ ನಮ್ಮ ಉಸಿರು ಎಂದು ಯಡಿಯೂರಪ್ಪನವರ ವಿರುದ್ದ ಹೋರಾಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದಂತೂ ಹೌದು. ಅದಕ್ಕೆ ಸಾಕಷ್ಟು ಉದಾಹರಣೆಗಳನ್ನು ರಾಜ್ಯ ರಾಜಕೀಯದಲ್ಲಿ ನೋಡಬಹುದು. ಆದರೆ, ಎರಡು ದಿನದ ಹಿಂದೆ ಆರಂಭವಾದ ಸಿಎಂ ಬದಲಾವಣೆಯ ಮಸಲತ್ತು ಸದ್ಯಕ್ಕಂತೂ ಬೂದಿ ಮುಚ್ಚಿದ ಕೆಂಡ..

ಗೃಹಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ
ವಾರದ ಹಿಂದೆ ರಾಜ್ಯ ಗೃಹಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಮತ್ತು ಇನ್ನೋರ್ವ ಪಕ್ಷದ ಮುಖಂಡರು ದೆಹಲಿಗೆ ದೌಡಾಯಿಸಿದ್ದರು. ಹೈಕಮಾಂಡ್ ಸೂಚನೆಯ ಮೇರೆಗೇ ಅವರು ದೆಹಲಿಗೆ ಹೋಗಿದ್ದರು ಎನ್ನುವುದು ನಿರ್ವಿವಾದ. ಆದರೆ, ದೆಹಲಿ ಭೇಟಿಗೆ ಕೋರ್ಟ್ ಹಾಜರಾತಿಯ ಕಥೆ ಕಟ್ಟಲಾಗಿತ್ತು. ಅಸಲಿ ವಿಚಾರ ಅಲ್ಲಿ ಬೇರೇನೇ ಇತ್ತು..

ಸಿಎಂ ಹುದ್ದೆಯಿಂದ ಕೆಳಗಿಳಿಸುವುದು ಅವರ ಬೇಸಿಕ್ ಟಾರ್ಗೆಟ್
ಬಿಎಸ್ವೈ ವಿರುದ್ದ ಇರುವ ಬಿಜೆಪಿಯ ನಾಯಕರ ವಿರೋಧ ಮೇಲ್ನೋಟಕ್ಕೆ ಮಾತ್ರ ಬಳ್ಳಾರಿಯಲ್ಲಿ ಜಿಂದಾಲ್ ಸಂಸ್ಥೆಗೆ ಜಮೀನು ನೀಡಿರುವುದು. ಯಾವುದಾದರೂ ವಿಚಾರವನ್ನು ಇಟ್ಟುಕೊಂಡು ಬಿಎಸ್ವೈ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವುದು ಅವರ ಬೇಸಿಕ್ ಟಾರ್ಗೆಟ್. ಹಾಗಾಗಿ, ಆ ಜಿಂದಾಲ್ ವಿಚಾರವನ್ನು ಇಟ್ಟುಕೊಂಡು ಹೈಕಮಾಂಡ್ ಗೆ ಸಹಿ ಸಂಗ್ರಹಿಸಿ ಕೊಟ್ಟಿದ್ದರು.

ಜಿಂದಾಲ್ ವಿಚಾರ ಸರಕಾರಕ್ಕೆ ಕೆಟ್ಟ ಹೆಸರು ತರುವ ಸಾಧ್ಯತೆ
ಆದರೆ, ಕೊರೊನಾ ನಿಯಂತ್ರಣದ ವಿಚಾರದಲ್ಲಿ ಹೆಸರು ಕೆಡಿಸಿಕೊಂಡಿರುವ ಬಿಜೆಪಿಯ ಕೇಂದ್ರ ನಾಯಕರು ಇದಕ್ಕೆ ಸೊಪ್ಪು ಹಾಕಲಿಲ್ಲ. ನಿಮ್ಮನಿಮ್ಮ ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣ ಮಾಡಲು ಸಹಕರಿಸುವುದು ಬಿಟ್ಟು, ದೆಹಲಿಗೆ ಬಂದಿದ್ದೀರಾ, ಅದೇನಿದ್ದರೂ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಎಂದು ಬುದ್ದಿವಾದ ಹೇಳಿ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ, ಜಿಂದಾಲ್ ವಿಚಾರ ಸರಕಾರಕ್ಕೆ ಕೆಟ್ಟ ಹೆಸರು ತರುವ ಸಾಧ್ಯತೆಯನ್ನ ಅರಿತ ಸಿಎಂ, ಸರಕಾರದ ಹಿಂದಿನ ಆದೇಶವನ್ನು ಹಿಂದಕ್ಕೆ ಪಡೆದಿದ್ದಾರೆ. ಆದರೆ..

ಸಿಎಂ ಬದಲಾವಣೆ ವಿಚಾರ: ಆದರೂ, ಬಿಎಸ್ವೈ ತಲೆದಂಡ ನಿಶ್ಚಿತ, ಯಾವಾಗ?
ದೆಹಲಿಯ ಖಚಿತ ಮೂಲಗಳ ಪ್ರಕಾರ ಯಡಿಯೂರಪ್ಪನವರು ಬದಲಾವಣೆಯಾಗುವುದಂತೂ ಹೌದು. ಆದರೆ, ಯಾವಾಗ ಎನ್ನುವ ಪ್ರಶ್ನೆ ಬಂದಾಗ ಕೊರೊನಾ ಹಾವಳಿಯೆಲ್ಲಾ ಮುಗಿದ ನಂತರ. ಅದು ಮೂರು ತಿಂಗಳಾಗಬಹುದು, ಆರು ತಿಂಗಳಾಗಬಹುದು. ಯಡಿಯೂರಪ್ಪನವರನ್ನು ಗೌರವಯುತವಾಗಿ ಕೆಳಗಿಳಿಸಿ, ಮುಂದಿನ ಅಸೆಂಬ್ಲಿ ಚುನಾವಣೆಗೆ ಸಾಕಷ್ಟು ಪೂರ್ವಭಾವಿಯಾಗಿಯೇ ಹೊಸ ಸಿಎಂ ಮುಖವನ್ನು ಪರಿಚಯಿಸುವ ಇರಾದೆ ಬಿಜೆಪಿ ಹೈಕಮಾಂಡಿಗೆ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications