ಡಿಕೆ ಶಿವಕುಮಾರ್ಗೆ ಜಾಮೀನು: ನಾಯಕರು ಹೇಳಿದ್ದೇನು?
ನವದೆಹಲಿ, ಅಕ್ಟೋಬರ್ 23: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಒಂದೂವರೆ ತಿಂಗಳಿನಿಂದ ಜೈಲಿನಲ್ಲಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಡಿಕೆ ಶಿವಕುಮಾರ್ ತಿಹಾರ್ ಜೈಲಿನಿಂದ ಹೊರ ಬರುತ್ತಾರೆ ಎಂಬ ಸುದ್ದಿ ತಿಳಿದ ಕೂಡಲೇ ಅವರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಅವರಿಗೆ ಜಾಮೀನು ದೊರೆತಿದ್ದನ್ನು ಸ್ವಾಗತಿಸಿವೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬುಧವಾರ ತಿಹಾರ್ ಜೈಲಿಗೆ ತೆರಳಿ ಡಿಕೆ ಶಿವಕುಮಾರ್ ಅವರ ಯೋಗ ಕ್ಷೇಮ ವಿಚಾರಿಸಿದ್ದರು. ಮಂಗಳವಾರ ಎಚ್ ಡಿ ಕುಮಾರಸ್ವಾಮಿ ಕೂಡ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಅದರ ಬೆನ್ನಲ್ಲೇ ಅವರಿಗೆ ಜಾಮೀನು ಸಿಕ್ಕಿದೆ. ಅನಾರೋಗ್ಯದ ಕಾರಣವನ್ನು ಪರಿಗಣಿಸಿದ ನ್ಯಾಯಾಲಯ ಅವರನ್ನು ಜೈಲಿನಿಂದ ಹೊರಗೆ ಕಳುಹಿಸಲು ನಿರ್ಧರಿಸಿದೆ.
ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯದ ವಿಚಾರಣೆಗಾಗಿ ದೆಹಲಿಗೆ ತೆರಳಿದ್ದ ಡಿಕೆ ಶಿವಕುಮಾರ್, ಕೊನೆಗೂ ದೀಪಾವಳಿ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತಂತಾಗಿದೆ. ಜಾಮೀನು ದೊರೆತ ಸುದ್ದಿ ಕೇಳಿದ ಪ್ರಮುಖರು ಪ್ರತಿಕ್ರಿಯೆ ನೀಡಿದ್ದಾರೆ.

ಸಂತೋಷ ವಿಷಯ
ಡಿ.ಕೆ ಶಿವಕುಮಾರ್ ಅವರಿಗೆ ದೆಹಲಿ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿರುವುದು ಸಂತೋಷದ ವಿಚಾರ. ಸೋಮವಾರ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಅವರಿಗೆ ಧೈರ್ಯ ತುಂಬಿ ಜಾಮೀನು ಸಿಗುವ ಆಶಯವನ್ನು ವ್ಯಕ್ತಪಡಿಸಿದ್ದೆ- ಎಚ್ ಡಿ ಕುಮಾರಸ್ವಾಮಿ

50 ದಿನ ಸಂಕಷ್ಟ ಅನುಭವಿಸಿದ್ದೇವೆ
ದೆಹಲಿ ಹೈಕೋರ್ಟ್ನಲ್ಲಿ ನ್ಯಾಯ ಸಿಕ್ಕಿದೆ. ಜಾಮೀನು ಸಿಕ್ಕಿದ್ದು ಸಂಸತದ ಸುದ್ದಿ. 50 ದಿನಗಳಿಂದ ತೀವ್ರ ಮಾನಸಿಕ ಸಂಕಷ್ಟ ಅನುಭವಿಸಿದ್ದೇವೆ. ವಕೀಲರ ಜತೆ ಚರ್ಚಿಸಿ ಮುಂದಿನ ನಡೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸುಪ್ರೀಂ ಕೋರ್ಟ್ಗೆ ಹೋದರೆ ಅಲ್ಲಿಯೂ ಹೋರಾಟ ಮುಂದುವರಿಸುತ್ತೇವೆ- ಡಿಕೆ ಸುರೇಶ್

ಮೊದಲೇ ಜಾಮೀನು ಸಿಗಬೇಕಿತ್ತು
ಡಿ.ಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದು ನನಗೆ ಸಂತೋಷ ಉಂಟುಮಾಡಿದೆ. ದ್ವೇಷ ರಾಜಕಾರಣದ ಉದ್ದೇಶದಿಂದ ಪ್ರಕರಣವು ತನಿಖಾ ಹಂತದಲ್ಲಿರುವಾಗಲೇ ಅವರನ್ನು ಬಂಧಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡಲಾಗಿತ್ತು. ಅವರಿಗೆ ಜಾಮೀನು ದೊರೆತಿರುವುದು ನ್ಯಾಯಕ್ಕೆ ದೊರೆತ ಜಯ.- ಸಿದ್ದರಾಮಯ್ಯ

ಜನರ ನಂಬಿಕೆ ಹೆಚ್ಚಿಸಿದೆ
ದೆಹಲಿಯ ಹೈಕೋರ್ಟ್ ಡಿಕೆ ಶಿವಕುಮಾರ್ ಅವರಿಗೆ ನೀಡಿರುವ ಜಾಮೀನು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನಸಾಮಾನ್ಯರ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಿದ್ದು, ನ್ಯಾಯಾಲಯದ ತೀರ್ಮಾನವನ್ನು ಸ್ವಾಗತಿಸುತ್ತೇನೆ- ಎಚ್ ಡಿ ದೇವೇಗೌಡ

ಸ್ವಾಗತಾರ್ಹ ತೀರ್ಪು
ಇಂದಿನ ತೀರ್ಪು ನ್ಯಾಯಾಲಯದ ಮೇಲಿನ ಜನರ ನಂಬಿಕೆಯನ್ನು ಹೆಚ್ಚಿಸಿದೆ. ನ್ಯಾಯಾಲಯದ ನಿರ್ಧಾರ ಸ್ವಾಗತಾರ್ಹ- ಮಾಜಿ ಸಂಸದ ಮುನಿಯಪ್ಪ.

ಒಟ್ಟಾಗಿ ಹೋರಾಡಬೇಕಿದೆ
ಹೈಕೋರ್ಟ್ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ನಾಯಕರನ್ನು ಗುರಿಯನ್ನಾಗಿರಿಸಲು ಬಿಜೆಪಿ ಐಟಿ/ಇಡಿಗಳನ್ನು ಹೇಗೆ ಬಳಸಿಕೊಳ್ಳುತ್ತಿದೆ ಎನ್ನುವುದು ಬಹಿರಂಗವಾಗಬೇಕಿದೆ. ಡಿಕೆ ಶಿವಕುಮಾರ್ ಅವರಿಗೆ ನ್ಯಾಯ ದೊರಕಲಿದೆ ಮತ್ತು ಕಳಂಕರಹಿತರಾಗಿ ಹೊರಬರಲಿದ್ದಾರೆ ಎಂದು ಖಾತರಿಯಿದೆ. ನಾವು ಪ್ರಜಾಪ್ರಭುತ್ವವನ್ನು ಉಳಿಸಲು ಮತ್ತು ಭಾರತವನ್ನು ಉಳಿಸಲು ನಾವು ಒಟ್ಟಿಗೆ ಹೋರಾಟ ಮಾಡಬೇಕಿದೆ- ದಿನೇಶ್ ಗುಂಡೂರಾವ್.

ರೋಮಾಂಚನಕಾರಿ ಸುದ್ದಿ
ಡಿಕೆ ಶಿವಕುಮಾರ್ ಅವರಿಗೆ ಜಾಮೀನು ದೊರೆತಿದೆ ಎನ್ನುವುದು ರೋಮಾಂಚನಕಾರಿ ಮತ್ತು ನಿರಾಳತೆಯ ಸುದ್ದಿ- ಶಾಸಕಿ ಸೌಮ್ಯಾ ರೆಡ್ಡಿ.

ಶಕ್ತಿಯಾಗಿ ಬೆಳೆಯಲಿ
ಕೊನೆಗೂ ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ದೊರೆತಿದ್ದು ಅವರಿಗೆ ನನ್ನ ಶುಭ ಹಾರೈಕೆಗಳು. ಕಾಂಗ್ರೆಸ್ ನ ಶಕ್ತಿಯಾಗಿ ಗೆಳೆಯ ಶಿವಕುಮಾರ್ ಬೆಳೆಯಲಿ ಮತ್ತು ರಾಜ್ಯದ ಸಮಗ್ರ ಏಳಿಗೆಗಾಗಿ ಶ್ರಮಿಸಲಿ- ಎಚ್ ಸಿ ಮಹದೇವಪ್ಪ












Click it and Unblock the Notifications