ಆಪರೇಷನ್ ಹಸ್ತ ಪಾಲಿಟಿಕ್ಸ್ಗೆ ಅಸಮಾಧಾನ!? ಕಾಂಗ್ರೆಸ್’ ಪ್ರಚಾರ ತಂತ್ರ ಸಭೆಯಲ್ಲಿ ನಡೆದಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 04: ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನವನ್ನ ಗೆದ್ದಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ವಿರುದ್ದ ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಗುರಿ ಹಾಕಿಕೊಂಡಿರುವ ಕೈ ಪಡೆ ಆಪರೇಷನ್ ಹಸ್ತಕ್ಕೆ ಮುಂದಾಗಿರುವುದು ಕಾಂಗ್ರೆಸ್ ಪಡೆಯಲ್ಲಿಯೇ ಅಸಮಾಧಾನಕ್ಕೆ ಕಾರಣವಾಗಿದೆ.
ಹೌದು, 2024 ಲೋಕಸಭಾ ಚುನಾವಣೆಯ ಮೇಲೆ ಕಣ್ಣೀಟ್ಟಿರುವ ಕಾಂಗ್ರೆಸ್ ಭಾನುವಾರ ರಾಜ್ಯ ಮತ್ತು ಜಿಲ್ಲಾ ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆ ನಡೆಸಿ. ಪದಾಧಿಕಾರಿಗಳನ್ನ ಅಭಿನಂದಿಸಿ, ಹುರಿದುಂಬಿಸಲಾಯ್ತು. ಈ ಸಭೆಯಲ್ಲಿ ಲೋಕಸಭೆಗೆ ಪ್ರಚಾರ ಕಾರ್ಯದ ರೂಪರೇಷೆ ಚರ್ಚೆ ನಡೆಸಲಾಯ್ತು. ಆದರೆ, ಈ ಸಭೆಯಲ್ಲಿ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನಲೆ ವೋಟ್ ಶೇರಿಂಗ್ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಹಾಕಿಕೊಂಡಿರುವ ಆಪರೇಷನ್ ಹಸ್ತದ ಮಾಸ್ಟರ್ ಪ್ಲಾನ್ ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ರಾಜ್ಯ ಮತ್ತು ಜಿಲ್ಲಾ ಪ್ರಚಾರ ಸಮಿತಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಭೆಯಲ್ಲಿ ಮಾಜಿ ಸಭಾಪತಿ ಬಿ.ಎಲ್.ಶಂಕರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಯತೀಂದ್ರ ಸಿದ್ದರಾಮಯ್ಯ ಸೇರಿ ಹಲವರು ಭಾಗಿಯಾಗಿದ್ದರು. ಸಭೆಯಲ್ಲಿ ಹಿರಿಯ ನಾಯಕ ಮುಂದೆಯೇ ಕೆಲ ನಾಯಕರ ಅಸಮಾಧಾನ ಸ್ಟೋಟಗೊಂಡಿದೆ.
ಇನ್ನೂ ಸಭೆಯಲ್ಲಿ ಲೋಕಸಭಾ ಚುನಾವಣೆ ಕುರಿತು ಚರ್ಚೆ ನಡೆದಿದ್ದು, ಸಭೆಯಲ್ಲಿ ಆಪರೇಷನ್ ಹಸ್ತದ ವಿಚಾರವನ್ನ ಪ್ರಸ್ತಾಪಿಸಿದ ಕೆಲ ನಾಯಕರು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ ಪಕ್ಷದ ಕಾರ್ಯಕರ್ತರು ಸಹ ಬೇಸರ ವ್ಯಕ್ತಪಡಿಸಿದ್ದು, ಪಕ್ಷಕ್ಕೆ ನಾವು ಮೊದಲಿನಿಂದಲೂ ಕೆಲಸ ಮಾಡಿದ್ದೇವೆ. ಆದರೆ ಈಗ ಆಪರೇಷನ್ ಹಸ್ತದ ಮೂಲಕ ಪಕ್ಷಕ್ಕೆ ಬರುವ ಬೇರೆ ನಾಯಕರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಟಿಕೆಟ್ ಕೊಟ್ಟು ಸ್ಪರ್ಧೆ ಮಾಡುತ್ತಾರೆ. ಹೀಗೆ ಮಾಡುವುದಾದರೇ ನಾವು ಏನು ಮಾಡಬೇಕು? ಎಂದು ಆಪರೇಷನ್ ಹಸ್ತದ ಕುರಿತು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ 135 ಸ್ಥಾನಗಳನ್ನ ಗೆದ್ದಿರುವ ಕಾಂಗ್ರೆಸ್ ನಲ್ಲಿ ಕೆಲ ನಾಯಕರಿಗೆ ಸಚಿವ ಸ್ಥಾನ ಕೈ ತಪ್ಪಿರುವ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಸಭೆಯಲ್ಲಿ ಕಿತ್ತೂರು ಕರ್ನಾಟಕ ಹೈದರಾಬಾದ್ ಕರ್ನಾಟಕದ ಭಾಗದ ಪ್ರಚಾರ ಸಮಿತಿ ಮುಖಂಡರು ಶಾಸಕರಿಗೆ ದಯವಿಟ್ಟು ನಿಗಮಮಂಡಳಿ ಕೊಡಬೇಡಿ ಎಂದು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಪಕ್ಷದ ನಿಷ್ಠವಂತ ಕಾರ್ಯಕರ್ತರಿಗೆ ನೀಡಿ ಎಂದು ಹಲವು ಬಾರೀ ಹೇಳಿದ್ದೇವೆ. ನಿಗಮ ಮಂಡಳಿ ಸ್ಥಾನ ಕಾರ್ಯಕರ್ತರಿಗೆ ನೀಡದೇ ಹೋದರೆ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.
ಇನ್ನೂ ಸರ್ಕಾರ ರಚನೆಯ ಆರಂಭದಿಂದಲೂ ಶಾಸಕರು ಹಾಗೂ ಸಚಿವರ ನಡುವೆ ಸಮನ್ವಯ ಕೊರತೆ ಉಂಟಾಗಿದ್ದು, ಈ ವಿಚಾರವನ್ನೂ ಸಹ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಸಚಿವರ ಮೇಲಿನ ಅಸಮಾಧಾನದಿಂದ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಇತ್ತ ಶಾಸಕರ ನಡೆ ವಿಚಾರವಾಗಿಯೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಬಳಿ ದೂರಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications