ಗಡಿ ವಿವಾದ; ಬಸವರಾಜ ಬೊಮ್ಮಾಯಿಯವರ ಕುಮ್ಮುಕ್ಕಿದೆ: ಬಿ.ಕೆ.ಹರಿಪ್ರಸಾದ್
ಬೆಂಗಳೂರು, ಡಿಸೆಂಬರ್ 5: ಹೆಸರುಗಳನ್ನ ಬದಲಾಯಿಸಿ ಅವಹೇಳನ ಮಾಡುವುದು ಬಿಜೆಪಿಯ ಸಂಪ್ರದಾಯ. ನಾಮಕರಣ ಮಾಡಲು ಪುರೋಹಿತರಿದ್ದಾರೆ, ಸಿದ್ದರಾಮಯ್ಯಗೆ ಹೆಸರಿಡಲು ಸಿ.ಟಿ ರವಿ ಯಾರು? ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿ ಪ್ರಸಾದ್ ಪ್ರಶ್ನಿಸಿದ್ದಾರೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸಿದ್ದರಾಮಯ್ಯಗೆ ಸಿದ್ದರಾಮುಲ್ಲ ಖಾನ್ ಎಂದು ಬಿಜೆಪಿ ನಾಯಕರು ಹೆಸರು ಕರೆದ ವಿಚಾರವಾಗಿ ಮಾತನಾಡಿದ ಅವರು, ಈ ಹಿಂದೆ ಪ್ರಧಾನಿ ಮೋದಿಯವರೇ, ಸಿದ್ರಾಮಯ್ಯನವರ ಹೆಸರು ಬದಲಾಯಿಸಿ ಹೇಳಿಕೆ ಕೊಟ್ಟಿದ್ರು. ಈಗ ಅವರ ಚೇಲಾಗಳು ಹೆಸರು ಬದಲಾಯಿಸುತ್ತಿದ್ದಾರೆ. ಸಿದ್ರಾಮಯ್ಯನವರಿಗೆ ಅವರ ತಂದೆ ತಾಯಿ ನಾಮಕರಣ ಮಾಡಿದಾರೆ. ಮೊದಲು ಇವರ ಹೆಸರು ಏನು ಅನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಕಿಡಿಕಾರಿದರು.
ಯೂಸುಫ್ ಖಾನ್ ಅಂತಾ ಯಡಿಯೂರಪ್ಪನವರನ್ನ ಕರಿಯೋಕ್ ಆಗುತ್ತಾ?
ಚಿಕ್ಕಮಗಳೂರಿನಲ್ಲಿ ಇವರು ಏನು ಅನ್ನುವುದು ಎಲ್ಲರಿಗೂ ತಿಳಿದಿದೆ. ಒಬ್ಬರ ಕುರಿತಾಗಿ ಏನಾದರೂ ವಿರೋಧಗಳು ಭಿನ್ನಾಭಿಪ್ರಾಯ ಇದ್ದರೆ ಅದರ ಬಗ್ಗೆ ಚರ್ಚೆ ಮಾಡಬೇಕೇ ಹೊರತು ಹೆಸರುಗಳನ್ನು ಬದಲಾಯಿಸುವುದು ತಪ್ಪು. ಇವರ ನಡೆಗಳಿಂದಲೇ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಬಾಗಿಲು ಮುಚ್ಚಲಿದೆ. ಟಿಪ್ಪುವಿನ ಟೋಪಿ ಹಾಕಿದ್ದ ಯಡಿಯೂರಪ್ಪ, ಈಶ್ವರಪ್ಪನವರನ್ನ ಏನಂತಾ ಕರಿಬೇಕು? ಯೂಸುಫ್ ಖಾನ್ ಅಂತಾ ಯಡಿಯೂರಪ್ಪನವರನ್ನ ಕರಿಯೋಕ್ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿ ಗಡಿ ವಿವಾದ- ತ್ರಿಬಲ್ ಇಂಜಿನ್ ಸರ್ಕಾರದ ಪ್ರಾಯೋಜಿತ ನೂರಿ ಕುಸ್ತಿ ಆಟ
ಜನ ಸಮಾನ್ಯರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಬಿಜೆಪಿ ಸರ್ಕಾರ ಚರ್ಚೆ ಮಾಡದೆ, ಭಾವನಾತ್ಮಕ ವಿಷಯಗಳ ಬಗ್ಗೆ ಮಾತಾಡಿ ಲಾಭ ಪಡೆಯಲು ಹೊರಟಿದೆ. ಬೆಳಗಾವಿ ಗಡಿ ವಿವಾದ ತ್ರಿಬಲ್ ಇಂಜಿನ್ ಸರ್ಕಾರ ಪ್ರಾಯೋಜಿತವಾಗಿ ನಡೆಸುತ್ತಿರುವ ನೂರಿ ಕುಸ್ತಿಯಂತಿದೆ. ಕರ್ನಾಟಕದಲ್ಲೂ ಬಿಜೆಪಿ ಇದೆ, ಕೇಂದ್ರದಲ್ಲೂ ಬಿಜೆಪಿ ಇದೆ, ಮಹಾರಾಷ್ಟ್ರದಲ್ಲೂ ಬಿಜೆಪಿ ಇದೆ. ಇದು ತ್ರಿಬಲ್ ಇಂಜಿನ್ ಸರ್ಕಾರ ಮಾಡಿರುವ ಹೊಂದಾಣಿಕೆ ರಾಜಕೀಯ. ಇದರ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕುಮ್ಮುಕ್ಕಿದೆ ಎಂದು ಆಕ್ರೋಶ ಹೊರ ಹಾಕಿದರು.

ಬಿಜೆಪಿ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಜನರನ್ನ ಕೆರಳಿಸುವಂತೆ ಮಾಡುತ್ತಿದ್ದಾರೆ. ಕನ್ನಡಿಗರ ಮೇಲೆ ಹಲ್ಲೆ ನಡೆದಿರುವುದು ತೀವ್ರ ಖಂಡನೀಯ. ಇದರ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಅಧಿವೇಶನದಲ್ಲಿ ಬೇರೆ ವಿಷಯಗಳು ಚರ್ಚೆಯಾಗದಂತೆ ತಡೆಯುವ ಹುನ್ನಾರವಿದೆ. ಮಹಾರಾಷ್ಟ್ರದ ಸಚಿವರು ಕರ್ನಾಟಕಕ್ಕೆ ಬಂದು ಹೇಳಿಕೆ ನೀಡುತ್ತಲೇ ಇದ್ದಾರೆ. ಕಳೆದ ಬಾರಿ ಬೆಳಗಾವಿ ಅಧಿವೇಶನ ಸಮಯದಲ್ಲಿ ಮಹಾರಾಷ್ಟ್ರದ ಗೃಹ ಸಚಿವರು ಬೆಳಗಾವಿಯಲ್ಲಿ ಉಳಿದುಕೊಂಡಿದ್ದರು. ಆದರೆ ನಮ್ಮ ಗೃಹ ಸಚಿವರಿಗೆ ಈ ಬಗ್ಗೆ ಗೊತ್ತೇ ಇರಲಿಲ್ಲ. ನಾನೇ ಈ ವಿಚಾರವನ್ನು ಪ್ರಸ್ತಾಪಿಸಿದ್ದೆ. ನಮ್ಮ ಹೋಮ್ ಮಿನಿಸ್ಟರ್ ಗೆ ಮಾಹಿತಿಯೇ ಗೊತ್ತಿರಲಿಲ್ಲ, ಅವರ ಇಲಾಖೆ ಬಿಟ್ಟು ಬೇರೆ ಎಲ್ಲಾ ವಿಚಾರಗಳು ಗೊತ್ತಿದೆ ಎಂದರು.
ಇನ್ನೂ ಡಿಸೆಂಬರ್ ತಿಂಗಳ ಕೊನೆಯಲ್ಲಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಪ್ರಯತ್ನ ಮಾಡಲಾಗಿತ್ತು. ಆದ್ರೆ ಈಗ ಕಷ್ಟವಿದೆ, ಜನವರಿಯಲ್ಲಿ ಚರ್ಚೆ ನಡೆಸಿ ಘೋಷಿಸುವ ಸಾಧ್ಯತೆಗಳಿವೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಫಲಿತಾಂಶ ನಮ್ಮ ರಾಜ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಅವಧಿ ಪೂರ್ಣ ಚುನಾವಣೆ ನಡೆಯುವುದಿಲ್ಲ ಎಂದರು.












Click it and Unblock the Notifications