ಹಂಪಿಗಿಂತ ಕಡಿಮೆಯಿಲ್ಲದ ಲಕ್ಕುಂಡಿ ಆಗುತ್ತಿದೆ ಕೊಂಪೆ!
ಲಕ್ಕುಂಡಿ (ಗದಗ), ಫೆಬ್ರವರಿ, 11 : ಹಂಪಿಗಿಂತ ಲಕ್ಕುಂಡಿಯು ಕಡಿಮೆಯೇನಿಲ್ಲ. ಈ ನಿಟ್ಟಿನಲ್ಲಿ ಲಕ್ಕುಂಡಿಯನ್ನು ಅಭಿವೃದ್ದಿಪಡಿಸಿ ಇತಿಹಾಸವನ್ನು ಮರುಕಳಿಸಬೇಕಿದೆ. ಇದಕ್ಕೆ ಇಲ್ಲಿನ ಜನರ ತ್ಯಾಗ, ಸಹಕಾರವು ಮುಖ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಹೇಳಿದ್ದಾರೆ.
ಅವರು ತಾಲ್ಲೂಕಿನ ಲಕ್ಕುಂಡಿ ಗ್ರಾಮದ ವಚನಕಾರ ಅಜಗಣ್ಣ- ಮುಕ್ತಾಯಕ್ಕ ಸಮಾನಂತರ ವೇದಿಕೆಯಲ್ಲಿ ಲಕ್ಕುಂ ಉತ್ಸವ- 2017ರ ಅಂಗವಾಗಿ ನಡೆದ ಗದಗ ಜಿಲ್ಲೆ ಇತಿಹಾಸ -ಸಂಸ್ಕೃತಿ-ಪರಂಪರೆ ಕಾರ್ಯಾಗಾರವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.

ಲಕ್ಕುಂಡಿ ಅಭಿವೃದ್ದಿ ಪ್ರಾದಿಕಾರ ಸ್ಥಾಪಿಸಲು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದ್ದು ಈ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದರು.
ಲಕ್ಕುಂಡಿ ಉತ್ಸವ ಬರೀ ಜಿಲ್ಲೆಗೆ ಮಾತ್ರವಲ್ಲದೇ ರಾಜ್ಯಕ್ಕೆ, ರಾಷ್ಟ್ರಕ್ಕೆ ಪರಿಚಯಿಸುವ ಕೆಲಸವಾಗಬೇಕಿದೆ. ಗದಗ ಜಿಲ್ಲೆಯನ್ನು ಸಂಗೀತ, ಸಾಹಿತ್ಯ, ಕಲೆ ರಾಜಕೀಯ ಹಾಗೂ ಕೋಮಸೌಹಾರ್ದತೆಯಲ್ಲಿ ಮೀರಿಸುವವರು ಯಾರೂ ಇಲ್ಲ. ಮುಳಗುಂದದ ನಯಸೇನ, ಲಕ್ಷ್ಮೇಶ್ವರದ ರನ್ನ, ಗದುಗಿನ ಕುಮಾರವ್ಯಾಸ, ನಾರಾಯಣಪೂರದ ಚಾಮರಸ ಸೇರಿದಂತೆ ಹಲವಾರು ಮಹನೀಯರು ಜಿಲ್ಲೆಗೆ ಹೆಸರು ತಂದುಕೊಟ್ಟಿದ್ದಾರೆ ಎಂದರು.

ಲಕ್ಕುಂಡಿ ಗ್ರಾಮದಲ್ಲಿ 101 ದೇವಸ್ಥಾನಗಳು ಹಾಗೂ 101 ಬಾವಿಗಳಿದ್ದವು ಎಂದು ಪ್ರತೀತಿ ಇದೆ. ಆದರೆ, ಇಲ್ಲಿನ ಗ್ರಾಮಸ್ಥರು ಅವುಗಳನ್ನು ಅತಿಕ್ರಮಿಸಿಕೊಂಡಿರುವುದರಿಂದ ಅವುಗಳನ್ನು ಸಂಶೋಧಿಸಲು ಸಾದ್ಯವಾಗುತ್ತಿಲ್ಲ. ಈಗಾಗಲೇ ರಾಜ್ಯದ 14 ಗ್ರಾಮಗಳಲ್ಲಿ ಸಂಶೋಧನೆ ಕಾರ್ಯ ಆರಂಭಗೊಂಡಿದ್ದು, ಅದರಲ್ಲಿ ಲಕ್ಕುಂಡಿ ಗ್ರಾಮವು ಪೂರ್ಣಗೊಂಡಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯುಳ್ಳ ಲಕ್ಕುಂಡಿ ರಿಡಿಸ್ಕವರಿಂಗ್ ಗ್ಲೋರಿಯಸ್ ಹೆರಿಟೇಜ್ ಎನ್ನುವ ಪುಸ್ತಕವನ್ನು ಭಾನುವಾರ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಹಿಂದೆ ಈ ಗ್ರಾಮದಲ್ಲಿ ಮಳೆ ಬಂದರೆ ಮುತ್ತು ರತ್ನಗಳು ರಸ್ತೆ ಬದಿಯಲ್ಲಿ ಕಾಣಸಿಗುತ್ತಿದ್ದವು ಎಂದು ಹಿರಿಯರು ಹೇಳುತ್ತಾರೆ. ಆದರೆ, ಇಂದಿನ ದಿನಗಳಲ್ಲಿ ಅಮೂಲ್ಯ ಶಾಸನಗಳು ರಸ್ತೆಯ ಬದಿಯ ತಿಪ್ಪೆಯಲ್ಲಿ, ಮನೆಯ ಕಟ್ಟೆಯನ್ನು ಕಟ್ಟಲು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಲಕ್ಕುಂಡಿಯ ಇತಿಹಾಸವನ್ನು ಜಗತ್ತಿಗೆ ಪರಿಚಯಿಸುವುದು ಪ್ರಾಧಿಕಾರದ ಉದ್ದೇಶವಾಗಿದೆ ಎಂದೂ ಅವರು ಹೇಳಿದರು.

ಲಕ್ಕುಂಡಿಯ ಇತಿಹಾಸದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲು ಸರಕಾರಕ್ಕೆ 5 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ದಾನಚಿಂತಾಮಣಿ ಅತ್ತಿಮಬ್ಬೆಯು ಈ ಪ್ರದೇಶದಲ್ಲಿ ಜೀನ ಭವನಗಳನ್ನು ಸ್ಥಾಪನೆ ಮಾಡಿದ್ದಾರೆ. ಲಕ್ಕುಂಡಿಯಲ್ಲಿ 12 ಜೀನಾಲಯಗಳಿದ್ದವು ಎಂದು ಇಲ್ಲಿನ ಶಾಸನಗಳಿಂದ ತಿಳಿದು ಬಂದಿದೆ. ಜೈನರು, ಶೈವರು ಸೇರಿದಂತೆ ಹಲವಾರು ಧರ್ಮೀಯರ ಧರ್ಮ ಸಂಘರ್ಷ ನಡೆದರೂ ಲಕ್ಕುಂಡಿ ತನ್ನ ಇತಿಹಾಸವನ್ನು ಕಾಪಾಡಿಕೊಳ್ಳುವ ಮೂಲಕ ಬೆಳೆದು ನಿಂತಿದೆ.
ಇಲ್ಲಿನ ಶಾಸನ ಹೇಳುವಂತೆ 101 ದೇವಸ್ಥಾನಗಳಲ್ಲಿ ಈಗ 40 ರಿಂದ 45 ದೇವಸ್ಥಾನಗಳನ್ನು ಮಾತ್ರ ಇಲ್ಲಿ ಕಾಣಬಹುದು ಎಂದು ಹೇಳಿದರು. ಇಲ್ಲಿನ ಪ್ರತಿಯೊಂದು ಕಲ್ಲುಗಳು ಕಥೆಗಳನ್ನು ಹೇಳುತ್ತವೆ. ನಂದರು, ಮೌರ್ಯರು, ಶಾತವಾಹನರು, ಹೊಯ್ಸಳರು, ಕದಂಬರು, ಆದಿಲ್ ಶಾಹಿಗಳು ಸೇರಿದಂತೆ 28 ಅರಸು ಮನೆತನದವರು ಆಳಿದ್ದಾರೆ ಎಂದು ಹೇಳಿದರು.
ಗದಗ ಜಿಲ್ಲೆಗೆ ಬೇಕು ಹೆಚ್ಚಿನ ಗರಡಿ ಮನೆ
ಗದಗ ಜಿಲ್ಲೆಯಲ್ಲಿಯ ಗರಡಿ ಮನೆಗಳನ್ನು ಸುಸಜ್ಜಿತಗೊಳಿಸಿ ಜಿಲ್ಲೆಯ ಜನರಿಗೆ ಹೆಚ್ಚು ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದ್ದಾರೆ.

ಅವರು ಶನಿವಾರ ನಗರದ ವಿವೇಕಾನಂದ ಸಭಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ 14 ಮತ್ತು 17 ವಯೋಮಾನದೊಳಗಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಜಂಪರೋಪ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯ ನೈಪುಣ್ಯತೆ ಪ್ರದರ್ಶನ ಮುಖ್ಯ. ಕ್ರೀಡಾಪಟುಗಳಿಗೆ ಕ್ರೀಡಾಂಗಣದ ಜೊತೆಗೆ ಸಮವಸ್ತ್ರ, ಪಾದರಕ್ಷೆ ಮೂಲಭೂತ ಸೌಲಭ್ಯಗಳು ಅವಶ್ಯಕ ಎಂದರು. ಉತ್ತರ ಕರ್ನಾಟಕ ಭಾಗದ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಬಂಗಾರದ ಪದಕ ತರುವಂತಹ ಕೆಲಸವಾಗಬೇಕು ಎಂದು ಆಶಿಸಿದರು.












Click it and Unblock the Notifications