ಕುಂದಾಪುರ : ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಿಗೂಢ ಸಾವು
ಉಡುಪಿ, ಜೂ. 18 : ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳ ಶವ ಕಾಡಿನಲ್ಲಿ ಪತ್ತೆಯಾದ ಘಟನೆ ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ಒತ್ತಿನೆಣೆಯ ಹೆನ್ನಬೇರು ಎಂಬಲ್ಲಿ ನಡೆದಿದೆ. ಉಡುಪಿ ಎಸ್ಪಿ ಅಣ್ಣಾಮಲೈ, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತಪಟ್ಟ ವಿದ್ಯಾರ್ಥಿನಿಯನ್ನು ಬಾಬು ದೇವಾಡಿಗ ಹಾಗೂ ರಾಧಾ ಅವರ ಪುತ್ರಿ ಅಕ್ಷತಾ (17) ಎಂದು ಗುರುತಿಸಲಾಗಿದೆ. ಬೈಂದೂರು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಕ್ಷತಾ ಬುಧವಾರ ಬೆಳಗ್ಗೆ ಕಾಲೇಜಿಗೆ ಹೋಗಿದ್ದಳು, ಸಂಜೆ ಮನೆ ಸಮೀಪದ ಕಾಡಿನಲ್ಲಿ ಆಕೆಯ ಶವ ಪತ್ತೆಯಾಗಿದೆ.

ಪ್ರತಿದಿನ ಸಂಜೆ 4.30ರ ವೇಳೆಗೆ ಅಕ್ಷತಾ ಮನೆಗೆ ವಾಪಸ್ ಆಗುತ್ತಿದ್ದಳು. ಬುಧವಾರ 6ಗಂಟೆಯಾದರೂ ಆಕೆ ಮನೆಗೆ ಆಗಮಿಸಿರಲಿಲ್ಲ. ಆತಂಕಗೊಂಡ ಫೋಷಕರು ಕಾಲೇಜಿನವರ ಬಳಿ ಮಾಹಿತಿ ಪಡೆದಿದ್ದರು, ಪೊಲೀಸರಿಗೆ ಮೌಖಿಕವಾಗಿ ವಿಚಾರವನ್ನು ತಿಳಿಸಿದ್ದರು. [ಕಾಸರಗೋಡು-ಬೈಂದೂರು ನಡುವೆ ರೈಲು ಸಂಚಾರ ಭಾಗ್ಯ]
ಸ್ಥಳೀಯರ ಜೊತೆ ಸೇರಿ ಅಕ್ಷತಾಳಿಗಾಗಿ ಮನೆಯವರು ಹುಡುಕಾಟ ಆರಂಭಿಸಿದ್ದರು. ಆಗ ಆಕೆಯ ಶವ ಮನೆ ಸಮೀಪದ ಕಾಡಿನಲ್ಲಿ ಪತ್ತೆಯಾಗಿದೆ. ಕುತ್ತಿಗೆಗೆ ಚೂಡಿದಾರ ದುಪ್ಪಟ್ಟದಿಂದ ಬಿಗಿಯಲಾದ ಸ್ಥಿತಿಯಲ್ಲಿ ಶವ ಕಂಡು ಬಂದಿದ್ದು ಪ್ರಾಥಮಿಕವಾಗಿ ಕೊಲೆ ಎಂದು ಶಂಕಿಸಲಾಗಿದೆ. [ಕುಂದಾಪುರ: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆ]
ಅಕ್ಷತಾ ಕಾಲೇಜಿನಿಂದ ಮರಳುವುದನ್ನು ಆಕೆಯ ಸಂಬಂಧಿಕರೊಬ್ಬರು ನೋಡಿದ್ದರು. ಅಲ್ಲದೇ ಆಕೆ ಮುಂಭಾಗದ ಕೆಲವು ದೂರದಲ್ಲಿ ಇನ್ನೊಬ್ಬ ಯುವಕ ನಡೆದು ಹೋಗಿದ್ದಾನೆ ಎಂಬ ಬಗ್ಗೆ ಈಗಾಗಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆ ಯುವಕನ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾರೆ.
ಅಕ್ಷತಾ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಗುರುವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಯಲಿದೆ. ಉಡುಪಿ ಎಸ್ಪಿ ಅಣ್ಣಾಮಲೈ, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications