ಮಳೆಯಿಂದ ರಾಜ್ಯಕ್ಕೆ ಆಗಿರುವ ನಷ್ಟ ಎಷ್ಟು? ಕೇಂದ್ರದಿಂದ ಕೇಳಿರುವ ನೆರವೆಷ್ಟು?
Recommended Video

ನವದೆಹಲಿ, ಆಗಸ್ಟ್ 30: ಇಂದು ನವದೆಹಲಿಗೆ ಭೇಟಿ ನೀಡಿದ್ದ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಮತ್ತು ಇನ್ನು ಕೆಲವು ಸಚಿವರು ಮಳೆಯಿಂದ ರಾಜ್ಯದಲ್ಲಾದ ಹಾನಿಯ ಬಗ್ಗೆ ಪೂರ್ಣ ಮಾಹಿತಿ ನೀಡಿದ್ದಾರೆ.
ಕೊಡಗು ಪ್ರವಾಹದ ಜೊತೆಗೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದ ಆಗಿರುವ ಒಟ್ಟು ಹಾನಿಯ ಬಗ್ಗೆ ಪೂರ್ಣ ವರದಿಯನ್ನು ಮುಖ್ಯಮಂತ್ರಿ ಮತ್ತು ಅವರ ಬಳಗವು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ನೀಡಿದ್ದು, 2000 ಕೋಟಿ ನೆರವು ನೀಡುವಂತೆ ಕೇಳಿದೆ.
ಮಳೆಯಿಂದಾಗಿ ರಾಜ್ಯದಲ್ಲಿ ಒಟ್ಟು 65 ಜನ ಜೀವ ಕಳೆದುಕೊಂಡಿದ್ದಾರೆ. ಇದರಲ್ಲಿ ಕೆಲವು ಇನ್ನೂ ಪತ್ತೆಯಾಗಿಲ್ಲ. 5000 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಎಂದು ವರದಿ ನೀಡಲಾಗಿದೆ.

2.26 ಲಕ್ಷ ಹೆಕ್ಟೇರ್ ಕಾಫಿ ಪ್ಲಾಂಟೆಶನ್ ಹಾನಿ
2.26 ಲಕ್ಷ ಹೆಕ್ಟೇರ್ ಕಾಫಿ ಪ್ಲಾಂಟೇಷನ್ ನಾಶವಾಗಿದೆ. 2000 ಕಿ.ಮೀಗೂ ಹೆಚ್ಚು ರಸ್ತೆಗಳು ಹಾನಿಗೊಳಗಾಗಿವೆ. 165 ಪ್ರಾಣಿಗಳು ಪ್ರವಾಹದಿಂದ ಪ್ರಾಣ ಕಳೆದುಕೊಂಡಿವೆ. ಒಟ್ಟು ಕೃಷಿ ಹಾನಿಯನ್ನು ಇದರಲ್ಲಿ ಸೇರಿಸಿಲ್ಲ.

ಒಟ್ಟು 3436 ಕೋಟಿ ನಷ್ಟ
ಮಳೆಯಿಂದಾಗಿ ರಾಜ್ಯದಲ್ಲಿ ಒಟ್ಟು 3436 ಕೋಟಿ ರೂಪಾಯಿ ಹಾನಿಗೊಳಗಾಗಿದೆ. ರಾಜ್ಯ ಸರ್ಕಾರವು ಕೇಂದ್ರದ ಬಳಿ 2000 ಕೋಟಿ ರೂಪಾಯಿ ನೆರವನ್ನು ಕೇಳಿದೆ. ಇದು ನಷ್ಟದ ಪ್ರಾಥಮಿಕ ವರದಿಯಷ್ಟೆ ಆಗಿದೆ. ಪೂರ್ಣ ವರದಿ ಬರಲು ಇನ್ನಷ್ಟು ತಡವಾಗಲಿದೆ.

ರಾಜ್ಯ ಈವರೆಗೆ 249 ಕೋಟಿ ಪರಿಹಾರ ನೀಡಿದೆ
ರಾಜ್ಯ ಸರ್ಕಾರವು ಈ ವರೆಗೆ 249 ಕೋಟಿ ರೂಪಾಯಿಗಳನ್ನು ತುರ್ತು ಪರಿಹಾರ ಕಾರ್ಯಕ್ಕಾಗಿ ಕೊಡಗಿಗೆ ನೀಡಿದೆ. ಜನರು ನೀಡಿರುವ ನೆರವಿನಿಂದ ಆಗಸ್ಟ್ 24ರವರೆಗಿನ ಲೆಕ್ಕದ ಪ್ರಕಾರ ಒಟ್ಟು 46.16 ಕೋಟಿ ರೂಪಾಯಿ ಸಂಗ್ರಹವಾಗಿದೆ.

ಕೇಂದ್ರ ಎಷ್ಟು ಕೊಡಬಹುದು?
ಕೇಂದ್ರ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು, ಆರು ಕೋಟಿ ನೆರವನ್ನು ತಮ್ಮ ಇಲಾಖೆ ಮತ್ತು ತಮ್ಮ ಸಂಸದರ ನಿಧಿಯಿಂದ ನೀಡಿದ್ದಾರೆ. ಇದಷ್ಟೆ ಈ ವರೆಗೆ ರಾಜ್ಯಕ್ಕೆ ಬಂದಿರುವ ಕೇಂದ್ರದ ನೆರವಾಗಿದೆ. ಪ್ರವಾಹಕ್ಕೆ ಈಡಾಗಿರುವ ಕೇರಳ ಕೇಂದ್ರದ ಬಳಿ 20000 ಕೋಟಿ ನೆರವು ಕೇಳಿತ್ತು ಆದರೆ ಅವರಿಗೆ ಸಿಕ್ಕಿದ್ದು 600 ಕೋಟಿ ಈಗ ರಾಜ್ಯಕ್ಕೆ ಎಷ್ಟು ನೆರವು ಸಿಗುತ್ತದೆ ಎಂಬುದು ಪ್ರಶ್ನೆ.












Click it and Unblock the Notifications