ಎಚ್ಡಿಕೆಗೆ ಅರ್ಥವಾಗಲಿಲ್ಲವೇ ಜಮೀರ್ ಬರೆದ ಉರ್ದು ಪತ್ರ?
ಬೆಂಗಳೂರು, ಅ 7: ಚುನಾವಣೆಯಲ್ಲಿನ ಹೀನಾಯ ಸೋಲು ಮತ್ತು ಆಂತರಿಕ ಭಿನ್ನಮತದಿಂದ ತೀವ್ರ ಹಿನ್ನಡೆ ಅನುಭಿಸುತ್ತಿರುವ ಜೆಡಿಎಸ್ ನಲ್ಲಿನ ಭಿನ್ನಮತ ಮತ್ತೊಮೆ ಸ್ಫೋಟಗೊಂಡಿದೆ.
ಒಂದು ಕಾಲದಲ್ಲಿ ಗಳಸ್ಯ ಕಂಠಸ್ಯದಂತಿದ್ದ ಕುಮಾರಸ್ವಾಮಿ ಮತ್ತು ಜಮೀರ್ ಅಹಮದ್ ನಡುವೆ ಏನೇನೂ ಸರಿಯಿಲ್ಲ ಎನ್ನುವುದು ಮತ್ತೊಮ್ಮೆ ಬಟಾಬಯಲಾಗಿದೆ, ಜೊತೆಗೆ ಕುಮಾರಸ್ವಾಮಿ ತಮ್ಮ ಪಕ್ಷದ ಶಾಸಕರ ಜೊತೆ ಉತ್ತಮ ಸಂಬಂಧವಿಲ್ಲ ಎನ್ನುವುದೂ ಜಗಜ್ಜಾಹೀರಾಗಿದೆ.
ಸೋಮವಾರ (ಅ 6) ತಮ್ಮ ಸ್ವಕ್ಷೇತ್ರ ಚಾಮರಾಜಪೇಟೆಯಲ್ಲಿನ ಈದ್ಗಾ ಮೈದಾನದಲ್ಲಿ ಜೆಡಿಎಸ್ ಶಾಸಕ ಜಮೀರ್ ಈದ್ -ಉಲ್- ಜುಹಾ (ಬಕ್ರೀದ್) ಸಾಮೂಹಿಕ ಪ್ರಾರ್ಥನೆ ಆಯೋಜಿಸಿದ್ದರು.
ಪ್ರಾರ್ಥನೆಗೆ ಜಮೀರ್ ಅಹಮದ್ ಅವರು ಕುಮಾರಸ್ವಾಮಿಯವರನ್ನು ಪತ್ರ ಮುಖೇನ ಪ್ರಾರ್ಥನಾ ಸಭೆಗೆ ಆಹ್ವಾನಿಸಿದ್ದರು. ಆದರೆ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಗೈರಾಗಿದ್ದರು. ಇದಕ್ಕೆ ಜಮೀರ್ ಮಾಧ್ಯಮದ ಮುಂದೆ ತಮ್ಮ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು. (ಅ 15ಕ್ಕೆ ಜೆಡಿಎಸ್ ಕೋರ್ ಕಮಿಟಿ ಪಟ್ಟಿ)
ಸಿಎಂ ಆಗಿದ್ದಾಗ ಮತ್ತು ನಂತರ ಕೂಡಾ, ಜಮೀರ್ ಆಯೋಜಿಸುವ ಪ್ರಾರ್ಥನಾ ಸಭೆಗೆ ಕುಮಾರಸ್ವಾಮಿ ತಪ್ಪದೇ ಹಾಜರಾಗುತ್ತಿದ್ದರು. ಆದರೆ ಈ ಬಾರಿ ಕುಮಾರಸ್ವಾಮಿ ಗೈರುಹಾಜರಾಗಿರುವುದು ಜಮೀರ್ ಅಹಮದಿಗೂ ತಮ್ಮ ಸಮುದಾಯದಲ್ಲಿ ಮುಜುಗರ ತಂದಿತ್ತು.
ಜಮೀರ್ ಮೇಲಿನ ಹೇಳಿಕೆಗೆ ಕಾರಣ ಕುಮಾರಸ್ವಾಮಿಯವರೇ.. ಮುಂದೆ ಓದಿ..

ಉರ್ದುವಿನಲ್ಲಿ ಆಹ್ವಾನ ನೀಡಿದ್ದೆ
ಕಾರ್ಯಕ್ರಮಕ್ಕೆ ಬರುವಂತೆ ಕುಮಾರಸ್ವಾಮಿಯವರಿಗೆ ಉರ್ದುವಿನಲ್ಲಿ ಆಹ್ವಾನ ನೀಡಿದ್ದೆ. ನನಗೆ ಕನ್ನಡ ಬರೆಯಲು ಬರುವುದಿಲ್ಲ ಎಂದೂ ಅವರಿಗೂ ಅರಿತಿದೆ. ಬಹುಷಃ ಅವರಿಗೆ ನಾನು ಬರೆದ ಉರ್ದು ಪತ್ರವಾಗಲಿಲ್ಲವೇನೋ ಎಂದು ಮಾಧ್ಯಮದ ಮುಂದೆ ವ್ಯಂಗ್ಯ ನಗುಬೀರಿದ್ದಾರೆ.

ಜೆಡಿಎಸ್ ತೊರೆಯುವುದಿಲ್ಲ ಎಂದ ಜಮೀರ್
ಜೆಡಿಎಸ್ ನಿಂದ ಜಮೀರ್ ಈಗಾಗಲೇ ಒಂದು ಹೆಜ್ಜೆ ಹೊರಗೆ ಇಟ್ಟಿರುವ ವಿಚಾರ ಎಲ್ಲರಿಗೂ ತಿಳಿದಿದ್ದರೂ, ನಾನು ಜೆಡಿಎಸ್ ತೊರೆಯುವುದಾಗಿ ಎಲ್ಲೂ ಹೇಳಿಲ್ಲ. ಪಕ್ಷ ಬಿಡುವ ನಿರ್ಧಾರ ಮಾಡಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕುಮಾರಸ್ವಾಮಿ ಕರೆದಿದ್ದ ಸಭೆ
ಕಳೆದ ಸೆಪ್ಟಂಬರ್ ಮೂರರಂದು ಪಕ್ಷದ ಸಭೆಗೆ ಎಲ್ಲರೂ ಹಾಜರಾಗುವಂತೆ ಕುಮಾರಸ್ವಾಮಿ ಎಲ್ಲಾ ಶಾಸಕರಿಗೆ ಪತ್ರದ ಮೂಲಕ ಆಹ್ವಾನಿಸಿದ್ದರು. ಆದರೆ ಎಚ್ಡಿಕೆ ಆಯೋಜಿಸಿದ್ದ ಸಭೆಗೆ ಅಂದು ಜಮೀರ್ ಹಾಜರಾಗಿರಲಿಲ್ಲ.

ಎರಡೆರಡು ಬಾರಿ ಆಹ್ವಾನಿಸಿದ್ದೆ
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕುಮಾರಸ್ವಾಮಿ, ಕೆಲವರಿಗೆ ಎರಡೆರಡು ಬಾರಿ ಪತ್ರ ಬರೆದು ಆಹ್ವಾನಿಸಿದ್ದೆ. ಎಲ್ಲಾ ಪತ್ರವನ್ನು ಕನ್ನಡದಲ್ಲಿ ಬರೆದಿದ್ದೆ. ಆದರೆ ಜಮೀರ್ ಅವರಿಗೆ ಇಂಗ್ಲಿಶ್ ಅಥವಾ ಉರ್ದುವಿನಲ್ಲಿ ಪತ್ರ ಬರೆಯ ಬೇಕಾಗಿತ್ತು.

ಜಮೀರ್ ತಿರುಗೇಟು
ನಾನು ಕನ್ನಡದಲ್ಲಿ ಬರೆದ ಒಕ್ಕಣೆ ಅವರಿಗೆ ಅರ್ಥವಾಗದೇ ಇದ್ದಿರಬಹುದು, ಅದಕ್ಕೆ ಅವರು ಸಭೆಗೆ ಹಾಜರಾಗಲಿಲ್ಲ ಎಂದು ಕುಮಾರಸ್ವಾಮಿ ತಮಾಷೆ ಮಾಡಿದ್ದರು. ತಿಂಗಳ ಹಿಂದೆ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಸೋಮವಾರ ಜಮೀರ್ ತಿರುಗೇಟು ನೀಡಿದ್ದಾರೆ.












Click it and Unblock the Notifications