ದುರ್ಗಾಪರಮೇಶ್ವರಿಗೆ ಪ್ರಾಕೃತಿಕ ಜಲಾಭಿಷೇಕ: ಧನ್ಯರಾದ ಭಕ್ತಗಣ
ಉಡುಪಿ, ಜುಲೈ 20: ಪುರಾಣ ಪ್ರಸಿದ್ದ ಜಿಲ್ಲೆಯ ಆದಿಶಕ್ತಿ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿಗೆ ನದಿನೀರು ನುಗ್ಗಿ ಪ್ರಾಕೃತಿಕ ಜಲಾಭಿಷೇಕವಾಗಿದೆ.
ದೇವಾಲಯದ ಗರ್ಭಗುಡಿಗೆ ಭಾನುವಾರ (ಜು 19) ಕುಬ್ಜೆ ನದಿ ನೀರು ನುಗ್ಗಿ ಲಿಂಗಸ್ವರೂಪಿಣಿಯಾಗಿರುವ ದೇವಿಯ ಮೂರ್ತಿಯನ್ನು ತೋಯಿಸಿದೆ. ಈ ದೇವಾಲಯವು ಕುಬ್ಜೆ ನದಿ ಹಾಗೂ ನಾಗತೀರ್ಥಗಳ ಸಂಗಮ ಸ್ಥಳದಲ್ಲಿದೆ.
ವರ್ಷಕೊಮ್ಮೆ ದೇವಿಯ ವಿಗ್ರಹವನ್ನು ಕುಬ್ಜೆ ನದಿ ಸ್ನಾನ ಮಾಡಿಸುವುದು ಪುರಾಣ ಕಾಲದಿಂದಲೂ ಸಂಪ್ರದಾಯವೆಂಬಂತೆ ನಡೆದುಕೊಂಡು ಬರುತ್ತಿರುವುದು ವಿಶೇಷ. (ಕಮಲಶಿಲೆ ದೇಗುಲ ಟ್ರಸ್ಟಿಗಳ ಮೇಲೆ ದೂರು)

ಮಲೆನಾಡು ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಭಾನುವಾರ ದೇವಾಲಯದ ಪ್ರಾಂಗಣಕ್ಕೆ ನೀರು ಹರಿದು ಬರುತ್ತಿದ್ದಂತೆ ದೇವಾಲಯಕ್ಕೆ ತಂಡೋಪತಂಡವಾಗಿ ಬಂದ ಭಕ್ತರು ಪವಿತ್ರ ನೀರಿನಲ್ಲಿ ಸ್ನಾನ ಮಾಡಿ , ದೇವಿಯ ದರ್ಶನ ಪಡೆದು ಪುನೀತರಾದರು.
ಕುಬ್ಜೆ ನದಿಯು ಪ್ರತಿ ಮಳೆಗಾಲದಲ್ಲಿ ಮಹಾದ್ವಾರದ ಮೂಲಕ ಒಳಪ್ರವೇಶಿಸಿ ಶ್ರೀ ದೇವಿಯ ಲಿಂಗಕ್ಕೆ ಸ್ವಯಂ ಸ್ನಾನ ಮಾಡಿಸುತ್ತಾಳೆ. ಈ ಐತಿಹಾಸಿಕ ಕ್ಷಣಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾಗಿ ಭಾವ ಪರವಶರಾಗುತ್ತಾರೆ.
ದೇವಾಲಯದ ಬಗ್ಗೆ: ಉಡುಪಿ ಜಿಲ್ಲೆ ಕುಂದಾಪುರದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು.
ಪುರಾಣದ ಪುಟವನ್ನು ತಿರುವಿದಾಗ, ಶಿವ ಮತ್ತು ಪಾರ್ವತಿಗೆ ಪಿಂಗಳೆ ಎನ್ನುವ ಕಲಾವಿದೆ ನೃತ್ಯದ ಸವಿಯನ್ನು ಉಣಬಡಿಸುತ್ತಿದ್ದಳು. ಒಮ್ಮೆ ಆಕೆ ನೃತ್ಯಕ್ಕೆ ಒಪ್ಪದಿದ್ದಾಗ ಸಿಟ್ಟಾದ ಪಾರ್ವತಿ ನೀನು ಅಂಕುಡೊಂಕಿನ, ಗೂನು ಬೆನ್ನಿನ ಕುಬ್ಜೆಯಾಗಿ ಭೂಲೋಕದಲ್ಲಿ ಜನಿಸು' ಎಂದು ಶಾಪ ನೀಡುತ್ತಾಳೆ.

ತನ್ನ ತಪ್ಪಿನ ಅರಿವಾಗಿ ಪಿಂಗಳೆ ಶಾಪ ವಿಮೋಚನೆಗಾಗಿ ಪಾರ್ವತಿಯನ್ನು ಕಾಡಿ ಬೇಡಿದಾಗ, ಭೂಲೋಕದಲ್ಲಿ ಖರರಟ್ಟಾಸುರ ರಕ್ಕಸ ಸಂಹಾರಕ್ಕಾಗಿ ಶ್ರಾವಣ ಮಾಸದ ನವಮಿಯಂದು ಕಮಲಶಿಲಾ' ರೂಪದಲ್ಲಿ ಲಿಂಗೆಯಾಗಿ ನಾನು ಜನಿಸುತ್ತೇನೆ.
ಶಾಪಗ್ರಸ್ತಳಾದ ನೀನು ಭೂಲೋಕದಲ್ಲಿ ಸುಪಾರ್ಶ್ವ ಗುಹೆಯಿಂದ ಹೊರಡುವ ನಾಗತೀರ್ಥ ಸಮೀಪ ಆಶ್ರಮ ರಚಿಸಿಕೊಂಡು ನನ್ನ ತಪಸ್ಸು ಮಾಡು. ನಿನ್ನ ಶಾಪ ವಿಮೋಚನೆ ಆಗುತ್ತದೆ' ಎಂದು ಅಭಯ ನೀಡುತ್ತಾಳೆ.
ವರ್ಷಗಳ ನಂತರ ಪಿಂಗಾಲೆಯ ತಪಸ್ಸಿಗೆ ಮೆಚ್ಚಿದ ಪಾರ್ವತಿ ಶಾಪ ವಿಮೋಚನೆ ಮಾಡುತ್ತಾಳೆ. ಅಲ್ಲಿಯೇ ನದಿಯಾಗಿ ಹರಿಯುವಂತೆ ಆಕೆಗೆ ವರದಾನ ಕೂಡ ಪ್ರಾಪ್ತವಾಗುತ್ತದೆ. ಇದುವೇ ಕುಬ್ಜೆ ನದಿ ಮತ್ತು ಕಮಲಶಿಲೆ ದೇವಾಲಯದ ಇತಿಹಾಸ. ದೇವಾಲಯದ ಅಂತರ್ಜಾಲಕ್ಕೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications