ಒನ್ಇಂಡಿಯಾ Impact: ಸಾರಿಗೆ ಇಲಾಖೆ ಅಧಿಕಾರಿ ವರ್ಗಾವಣೆ
ಬೆಂಗಳೂರು, ಜೂ. 23: ಲಾಕ್ಡೌನ್ ಇದ್ದರೂ ಕೆಎಸ್ಆರ್ಟಿಸಿ ಚಾಲಕರು ಹಾಗೂ ನಿರ್ವಾಹಕರು ದಿನಕ್ಕೆ ಇಂತಿಷ್ಟು ಆದಾಯ ತರಲೇಬೇಕು ಎಂದು ಸುತ್ತೋಲೆ ಹೊರಡಿಸಿದ್ದ ಸಾರಿಗೆ ಇಲಾಖೆ ಅಧಿಕಾರಿಗೆ ಸರ್ಕಾರ ವರ್ಗಾವಣೆ ಶಿಕ್ಷೆ ನೀಡಿದೆ.
Recommended Video
ಮೈಸೂರು ಗ್ರಾಮಾಂತರ ವಿಭಾಗದ ಕೆ.ಆರ್. ನಗರ ಘಟಕದ ಡಿಪೋ ಮ್ಯಾನೇಜರ್ ಪಾಪ ನಾಯ್ಕ್ ಅವರು ಡ್ರೈವರ್ ಹಾಗೂ ಕಂಡಕ್ಟರ್ಗಳು ದಿನಕ್ಕೆ ಇಂತಿಷ್ಟು ಆದಾಯ ತಂದರೆ ಮಾತ್ರ ಹಾಜರಾತಿ ಕೊಡಲಾಗುವುದು ಎಂದು ಆದೇಶ ಮಾಡಿದ್ದರು. ಈ ಕುರಿತು "ಒನ್ಇಂಡಿಯಾ ಕನ್ನಡ' ಸವಿಸ್ತಾರ ವರದಿ ಮಾಡಿತ್ತು. ಇದೀಗ ಎಚ್ಚೆತ್ತು ಕೊಂಡಿರುವ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಅವರು ಅಧಿಕಾರಿ ವರ್ಗಾವಣೆಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೈಸೂರು ಗ್ರಾಮಾಂತರ ವಿಭಾಗದಿಂದ ಪಾಪ ನಾಯ್ಕ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಪಾಪ ನಾಯ್ಕ್ ವರ್ಗಾವಣೆ
ದಿನಕ್ಕೆ ಇಂತಿಷ್ಟು ಆದಾಯ ತರಲೇಬೇಕು ಎಂದು ಆದೇಶ ಮಾಡಿದ್ದ ಅಧಿಕಾರಿಯನ್ನು ಕೆಆರ್ ನಗರದಿಂದ ಘಟಕದಿಂದ ಕಲಬುರಗಿ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ. ಆಡಳಿತಾತ್ಮಕ ಕಾರಣಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕೆ.ಆರ್. ನಗರ ಡಿಪೊ ಮ್ಯಾನೇಜರ್ ಪಾಪ ನಾಯ್ಕ್ ಅವರನ್ನು ತಕ್ಷಣ ಅವರನ್ನು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕಲಬುರಗಿ ಘಟಕಕ್ಕೆ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ.
ಆದಾಯ ತಂದರೆ ಮಾತ್ರ ಹಾಜರಾತಿ: KSRTC ಸಿಬ್ಬಂದಿಗೆ ಹೊಸ ಸಂಕಷ್ಟ
ತಕ್ಷಣ ಕೃಷ್ಣರಾಜನಗರದಿಂದ ಕಲಬುರಗಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಕೆಎಸ್ಆರ್ಟಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಮಾಡಿದ್ದಾರೆ.
ಆದೇಶ ಹಿಂಪಡೆಯಲು ಸೂಚನೆ
ಜೊತೆಗೆ ಚಾಲಕರು ಹಾಗೂ ನಿರ್ವಾಹಕರಿಗೆ ನೀಡಿದ್ದ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಘಟಕ ವ್ಯವಸ್ಥಾಪಕ ಪಾಪ ನಾಯ್ಕ್ ಅವರಿಗೆ ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ ಕುಮಾರ್ ಅವರು ಆದೇಶ ಮಾಡಿದ್ದರು.
ಯಾವುದೇ ಆದೇಶವನ್ನು ಹೊರಡಿಸುವ ಮೊದಲು ನನ್ನ ಗಮನಕ್ಕೆ ತರುವುದು ನಿಮ್ಮ ಕರ್ತವ್ಯವಾಗಿರುತ್ತದೆ. ಆದರೆ ನೀವು ಜವಾಬ್ದಾರಿ ಮರೆತು ಆದೇಶ ಹೊರಡಿಸಿದ್ದೀರಿ. ಅದು ಮಾಧ್ಯಮದಲ್ಲಿ ಪ್ರಕಟವಾಗಿದ್ದು, ನಿಮ್ಮ ಅಚಾತುರ್ಯದಿಂದ ಸಂಸ್ಥೆಯ ಘನತೆಗೆ ಧಕ್ಕೆ ಉಂಟಾಗಿದ್ದು ಸಾರ್ವಜನಿಕರಲ್ಲಿ ಸಂಸ್ಥೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಲು ಕಾರಣರಾಗಿರುತ್ತೀರಿ. ಆದ್ದರಿಂದ ತಕ್ಷಣ ನೀಡಿದ್ದ ಆದೇಶವನ್ನು ಹಿಂದಕ್ಕೆ ಪಡೆಯಿರಿ ಎಂದು ಅಶೋಕ್ ಕುಮಾರ್ ಸೂಚಿಸಿದ್ದರು.
ಏನದು ಆದೇಶ?
ಲಾಕ್ಡೌನ್ನಿಂದ ಸಂಸ್ಥೆಯ ಆದಾಯ ಕಡಿಮೆಯಾಗಿದ್ದು, ವೇಗದೂತ ಬಸ್ಗಳ ಚಾಲಕರು ಹಾಗೂ ನಿರ್ವಾಹಕರು ಪ್ರತಿದಿನ 3 ನೂರು ಕಿಲೋ ಮೀಟರ್ ಪ್ರಯಾಣಿಸಿ, 9 ಸಾವಿರ ರೂ. ಆದಾಯ ತರಲೇಬೇಕು. ಸಾಮಾನ್ಯ ಸಾರಿಗೆ ಬಸ್ಗಳ ಚಾಲಕರು ಹಾಗೂ ನಿರ್ವಾಹಕರು ಪ್ರತಿದಿನ 280 ಕಿಲೋ ಮೀಟರ್ ಕ್ರಮಿಸಿ ಕನಿಷ್ಠ 7 ಸಾವಿರ ರೂ. ಆದಾಯ ತಂದಲ್ಲಿ ಮಾತ್ರ ಹಾಜರಾತಿ ಕೊಡಲಾಗುವುದು ಎಂದು ಕೆ.ಆರ್. ನಗರ ಘಟಕ ವ್ಯವಸ್ಥಾಪಕ ಪಾಪ ನಾಯ್ಕ್ ಆದೇಶ ಮಾಡಿದ್ದರು.
ಎಲ್ಲ ಸಿಬ್ಬಂದಿಗೆ ಸಂಕಷ್ಟ
ಕೆಎಸ್ಆರ್ಟಿಸಿ ಮೈಸೂರು ಗ್ರಾಮಾಂತರ ವಿಭಾಗದ ಕೆಆರ್ ನಗರ ಘಟಕ ವ್ಯವಸ್ಥಾಕರ ಪಾಪ ನಾಯ್ಕ್ ಅವರು ಮಾಡಿದ್ದ ಆದೇಶವನ್ನೇ ಆಧಾರವಾಗಿಟ್ಟುಕೊಂಡು ಉಳಿದ ಸಾರಿಗೆ ಸಂಸ್ಥೆಗಳ ಡಿಪೊ ಮ್ಯಾನೇಜರ್ಗಳು ಬಸ್ ಡ್ರೈವರ್ ಹಾಗೂ ಕಂಡಕ್ಟರ್ಗಳಿಗೆ ನಿಗದಿತ ಆದಾಯ ತರುವಂತೆ ಒತ್ತಡ ಹಾಕುತ್ತಿದ್ದರು.
ಲಾಕ್ಡೌನ್ ಸಂದರ್ಭದಲ್ಲಿ ನಾವು ಹೇಗೆ ಆದಾಯ ತರುವುದು ಎಂದು "ಒನ್ಇಂಡಿಯಾ ಕನ್ನಡ'ಕ್ಕೆ ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದರು. ಇದೀಗ ವರ್ಗಾವಣೆ ಆದೇಶದಿಂದ ಕೆಎಸ್ಆರ್ಟಿಸಿ ಟ್ರೈವರ್, ಕಂಡಕ್ಟರ್ ಮೇಲಿನ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ.