ವಿಆರ್ಎಸ್ ಯೋಜನೆ ಪ್ರಕಟಿಸಿದ ಕೆಎಸ್ಆರ್ಟಿಸಿ
ಬೆಂಗಳೂರು, ಜೂನ್ 12 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ಪ್ರಕಟಿಸಿದೆ. ಕೆಲಸ ಮಾಡಲು ಸಾಧ್ಯವಿಲ್ಲದಷ್ಟು ಅನಾರೋಗ್ಯ ಇರುವವರು ವಿಆರ್ಎಸ್ಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
Recommended Video
ಕೊರೊನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ, ಆಡಳಿತಾತ್ಮಕ ಕಾರಣದಿಂದ ಮತ್ತು ನೌಕರರ ಹಿತದೃಷ್ಟಿಯಿಂದ ವಿಆರ್ಎಸ್ ಯೋಜನೆ ಘೋಷಣೆ ಮಾಡಲಾಗಿದೆ. ಸ್ವಯಂ ನಿವೃತ್ತಿ ಪಡೆಯುವವರಿಗೆ ಆಕರ್ಷಕ ಪರಿಹಾರವೂ ಸಿಗಲಿದೆ.
ನೌಕರರು ಸ್ವಯಂ ನಿವೃತ್ತಿ ಪಡೆಯಲು ಅರ್ಜಿಗಳನ್ನು ಸಲ್ಲಿಸಬೇಕು. ಅವುಗಳನ್ನು ಪರಿಶೀಲಿಸಿ ಅಂಗೀಕರಿಸಲು ವಿಭಾಗೀಯ ಮಟ್ಟದಲ್ಲಿಯೇ ಸಮಿತಿಗಳನ್ನು ರಚನೆ ಮಾಡಲಾಗಿದೆ. ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ.

ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಈ ಕುರಿತು ಮಾಹಿತಿ ನೀಡಿದ್ದಾರೆ. "2012ರ ಅಕ್ಟೋಬರ್ 12ರ ಸುತ್ತೋಲೆಯ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ದೂರುಗಳಿಗೆ ಆಸ್ಪದ ಕೊಡದಂತೆ ಪ್ರಕ್ರಿಯೆ ಪೂರ್ಣಗೊಳಿಸಬೇಕು" ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿವಿಧ ಸಮಿತಿಗಳ ರಚನೆ : ವಿಆರ್ಎಸ್ ಯೋಜನೆ ಘೋಷಣೆ ಮಾಡಿರುವ ಕೆಎಸ್ಆರ್ಟಿಸಿ ಅರ್ಜಿಗಳ ವಿಲೇವಾರಿಗಾಗಿ ವಿವಿಧ ಸಮಿತಿಗಳನ್ನು ರಚನೆ ಮಾಡಿದೆ. ವಿಭಾಗೀಯ ಮಟ್ಟದಿಂದ ಕೇಂದ್ರ ಕಚೇರಿ ತನಕ ವಿವಿಧ ಸಮಿತಿಗಳು ಕಾರ್ಯ ನಿರ್ವಹಣೆ ಮಾಡಲಿವೆ.
ದರ್ಜೆ 3 ಮತ್ತು 4ರ ನೌಕರರು ಸಲ್ಲಿಸಿದ್ದ ಅರ್ಜಿಗಳನ್ನು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಅಧ್ಯಕ್ಷತೆಯ ಸಮಿತಿ ಪರಿಶೀಲಿಸಿ ಅಂಗೀಕರಿಸಲಿದೆ. ಕೇಂದ್ರ ಕಚೇರಿ ನೌಕರರ ಅರ್ಜಿಗಳ ಪರಿಶೀಲನೆಗೆ ಕೇಂದ್ರ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದೆ.












Click it and Unblock the Notifications