3 ಲಕ್ಷ ರೂ. ಹಣ ಪಾವತಿಸುವಂತೆ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿಗೆ ನೋಟಿಸ್
ಬೆಂಗಳೂರು, ಜೂ 02: ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ಮೌದ್ಗಿಲ್ ಅವರ ಪತ್ರ ಸಮರ ತಾರಕಕ್ಕೇರಿದೆ. ಅನಾಮತ್ತಾಗಿ ಎತ್ತಿಕೊಂಡು ಹೋಗಿರುವ ನಿಗಮದ ಕಲಾಕೃತಿಗಳಿಗೆ ಪಾವತಿಸಬೇಕಾಗಿರುವ 3 ಲಕ್ಷ ರೂ. ಹಣ ಪಾವತಿಸುವಂತೆ ಕೋರಿ ರೂಪಾ ಅವರು ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿಗೆ ನೋಟಿಸ್ ನೀಡಿದ್ದಾರೆ.
ಎರಡು ಪುಟಗಳ ನೋಟಿಸ್ ನೀಡಿರುವ ರೂಪಾ ಅವರು, ನೀವು ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಕರ್ನಾಟಕ ರಾಜ್ಯ ಕರಕುಶಲ ನಿಗಮದ ಮಳಿಗೆಗಳಲ್ಲಿ ಹಲವು ವಸ್ತುಗಳನ್ನು ಎತ್ತಿಕೊಂಡು ಹೋಗಿರುತ್ತೀರಿ. ಎತ್ತಿಕೊಂಡು ಹೋಗಿರುವ ವಸ್ತುಗಳ ಮೊತ್ತವನ್ನು ಪಾವತಿ ಮಾಡುವಂತೆ ಮೌಖಿಕವಾಗಿ ಅನೇಲ ಸಲ ಕೋರಿದರೂ ಪಾವತಿ ಮಾಡಿರುವುದಿಲ್ಲ. ಈ ಕೆಳಕಂಡ ಕರಕುಶಲ ವಸ್ತುಗಳ ಮೊತ್ತವನ್ನು ನಿಗಮಕ್ಕೆ ಪಾವತಿಸಲು ತಿಳಿಸಿದೆ ಎಂದು ಉಲ್ಲೇಖಿಸಿದ್ದಾರೆ. ಇದರ ಜತೆಗೆ ರಾಘವೇಂದ್ರ ಶೆಟ್ಟಿ ತೆಗೆದುಕೊಂಡು ಹೋಗಿರುವ ವಸ್ತುಗಳ ವಿವರ ಮತ್ತು ಅದರ ಮೌಲ್ಯ ಉಲ್ಲೇಖಿಸಿ 3,10, 166 ರೂ ಪಾವತಿಸುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.
ನಿಗಮದ ಮಳಿಗೆ ಅಲ್ಲದೇ ನಿಗಮದ ಕರಕುಶಲ ಕರ್ಮಿಗಳು ಹಾಗೂ ನೋಂದಾಯಿತ ಮಾರಾಟಗಾರರ ಬಳಿ ಅನೇಕ ಕಲಾಕೃತಿಗಳನ್ನು ತೆಗೆದುಕೊಂಡು ಹೋಗಿರುವ ಮಾಹಿತಿ ತಿಳಿದು ಬಂದಿದ್ದು, ಮೇಲೆ ಹೇಳಿರುವ ಮಾರಾಟಗಾರರಿಗೂ ನಿಗಮಕ್ಕೂ ಯಾವುದೇ ಸಂಬಂಧ ಇಲ್ಲದಿದ್ದರೂ, ನಿಗಮಕ್ಕೆ ಮತ್ತು ಅಧ್ಯಕ್ಷರ ಹುದ್ದೆಗೆ ಕಳಂಕ ತರುವಂತಿದೆ. ಆದ್ದರಿಂದ ಮೇಲೆ ಹೇಳಿದ ಎಲ್ಲಾ ಪಾವತಿಗಳನ್ನು ಕೂಡಲೇ ಮಾಡಬೇಕೆಂದು ತಿಳುವಳಿಕೆ ನೋಟಿಸ್ ನಲ್ಲಿ ಡಿ. ರೂಪಾ ಅವರು ಉಲ್ಲೇಖಿಸಿದ್ದಾರೆ.

ಬೇಳೂರು ರಾಘವೇಂದ್ರ ಶೆಟ್ಟಿ ಉಚಿತವಾಗಿ ತೆಗೆದುಕೊಂಡಿರುವ ಕಲಾಕೃತಿಗಳ ವಿವರ ( ಡಿ. ರೂಪಾ ಅವರು ಉಲ್ಲೇಖಿಸಿದ ಪತ್ರದಂತೆ )
1. ಶ್ರೀಗಂಧ ಮಣಿ ಹಾರ - 2145 ರೂ.
2. ಶ್ರೀಗಂಧ ಮಣಿ ಪುಷ್ಪ ಹಾರ- (ಎರಡು) 4290 ರೂ.
3. ಶ್ರೀಗಂಧ ಕೃಷ್ಣ ವಿಗ್ರಹ- 94, 575 ರೂ.
4. ಶ್ರೀಗಂಧ ರಾಮ ವಿಗ್ರಹ- 1,40,400 ರೂ.
5. ಶಿವಾನಿ ವುಡ್ ರಾಮ ವಿಗ್ರಹ- 28,666 ರೂ.
6. ಶಾಲುಗಳು (190) 40,090, ರೂ.












Click it and Unblock the Notifications