ಕನ್ನಂಬಾಡಿ ಕಟ್ಟೆಗೆ Z ಶ್ರೇಣಿ ಭದ್ರತೆ ಪ್ರಾಪ್ತಿಯಾಗಲಿದೆ

'KRS ಅಣೆಕಟ್ಟೆಗೆ ಭಯೋತ್ಪಾದಕರಿಂದ ಬೆದರಿಕೆ ಇದೆ. ಈ ಹಿನ್ನೆಲೆಯಲ್ಲಿ ದಿನವಿಡಿ ಕ್ಯಾಮೆರಾ, ಪೊಲೀಸ್ ಕಣ್ಗಾವಲು ಹಾಕುವುದರಿಂದ ವಿಶೇಷ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೊರಸೆ ಭೂಷಣ್ ಗುಲಾಬ್ ರಾವ್ ತಿಳಿಸಿದ್ದಾರೆ. ( ಸಪತ್ನೀಕರಾಗಿ ಬಾಗಿನ ಅರ್ಪಿಸುತ್ತಾರಾ ಸಿಎಂ ಸಿದ್ದು? )
CCTV ಕ್ಯಾಮೆರಾ ಕಣ್ಗಾವಲು
ಅಣೆಕಟ್ಟೆಯ ಕೆಳಭಾಗದ ನೀರಿನಲ್ಲಿ ಬೋಟಿಂಗ್ ಮೂಲಕ ದಾಳಿ ಮಾಡಿದರೆ ಅಥವಾ ನಿಷೇಧಿತ ಪ್ರದೇಶದಲ್ಲಿ ಅಪರಿಚಿತರು ಕಂಡು ಬಂದರೆ, ರಾತ್ರಿ ವೇಳೆಯಲ್ಲೂ ಸ್ಪಷ್ಟ ಚಿತ್ರಣ ಮತ್ತು ಎಚ್ಚರಿಕೆ ನೀಡುವ ಸರ್ವೈಲೆನ್ಸ್ ಕ್ಯಾಮೆರಾ ಅಳವಡಿಸಲು ಉದ್ದೇಶಿಸಲಾಗಿದೆ. ಮೆಟಲ್ ಡಿಟೆಕ್ಟರ್, ದೈಹಿಕ ಮತ್ತು ಎಲೆಕ್ಟ್ರಾನಿಕ್ ರೂಪದಲ್ಲಿ ಎರಡು ಹಂತದಲ್ಲಿ ಭದ್ರತೆ ವ್ಯವಸ್ಥೆ ಮಾಡಲಾಗುವುದು.
ಅಣೆಕಟ್ಟೆಯ ಉತ್ತರ ಮತ್ತು ದಕ್ಷಿಣ ಭಾಗದ ಗೇಟುಗಳಿಗೆ ಬ್ಲೂಮ್ ಬ್ಯಾರಿಯರ್ಸ್ ಹಾಕಲಾಗುವುದು. ಅಲ್ಲದೇ, ಸಿಬ್ಬಂದಿ ಮತ್ತು ಪೊಲೀಸರೂ ಸಹ ಎಲೆಕ್ಟ್ರಾನಿಕ್ಸ್ ಗುರುತಿನ ಕಾರ್ಡ್ ಅನ್ನು ಬಳಸಿದರೆ ಮಾತ್ರ ಅಣೆಕಟ್ಟೆಯ ಗೇಟ್ ತೆರೆಯುವಂತಹ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತಿಸಲಾಗಿದೆ.
ಈ ನಿಟ್ಟಿನಲ್ಲಿ 5 ಕೋಟಿ ರೂ ಯೋಜನೆ ಹಾಗೂ ನೀಲನಕ್ಷೆಯೊಂದನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ. KRSನ ವಿಶೇಷ ಭದ್ರತೆಗಾಗಿ ಕಾವೇರಿ ನೀರಾವರಿ ನಿಗಮದ ವತಿಯಿಂದ 4.72 ಕೋಟಿ ಆರ್ಥಿಕ ನೆರವು ಸಿಗಲಿದೆ. ಇನ್ನೂ ಹೆಚ್ಚಿನ ಹಣದ ಅಗತ್ಯ ಕಂಡು ಬಂದರೆ ನಿಗಮ ನೆರವು ನೀಡುವ ಭರವಸೆ ನೀಡಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮಂಡ್ಯ ಎಸ್ಪಿ ಭೂಷಣ್ ಜಿ. ಬೊರಸೆ ನೇತೃತ್ವದಲ್ಲಿ ಜಲ ಸಂಪನ್ಮೂಲ ಇಲಾಖೆ, ತೋಟಗಾರಿಕೆ, ಪ್ರವಾಸೋದ್ಯಮ ಇಲಾಖೆಗಳ ಅಧಿಕಾರಿಗಳ ಉನ್ನತ ಮಟ್ಟದ ಸಭೆ ಇತ್ತೀಚೆಗೆ ನಡೆಯಿತು. ಕೆಆರ್ಎಸ್ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡಿರುವ ಸೂಚನೆಗಳನ್ನು ಪಾಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯ ನಿರ್ಧಾರದಂತೆ 60 CCTV ಕ್ಯಾಮೆರಾಗಳ ಖರೀದಿ ಮತ್ತು ಅದರ ಉಸ್ತುವಾರಿಗಾಗಿ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. KRS ಶಾಶ್ವತ ಭದ್ರತೆ ಜೊತೆಗೆ ಅಣೆಕಟ್ಟೆಯ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಉನ್ನತ ಮಟ್ಟದ ಅಧಿಕಾರಿಗಳು ಅವಲೋಕಿಸಲಿದ್ದಾರೆ ಎಂದು ಎಸ್ಪಿ ಭೂಷಣ್ ತಿಳಿಸಿದ್ದಾರೆ ಎಂದು ಕನ್ನಡಪ್ರಭ ವರದಿ ಮಾಡಿದೆ.












Click it and Unblock the Notifications