KRS Dam: ಕನ್ನಡಿಗರಿಗೆ ಅನ್ಯಾಯ.. ಕೆಆರ್ಎಸ್ ಜಲಾಶಯ ತುಂಬಿದ ತಕ್ಷಣ ತಮಿಳುನಾಡಿಗೆ ನೀರು?
ಕಾವೇರಿ ನದಿ ನೀರು ಉಕ್ಕಿ ಹರಿಯುತ್ತಿದ್ದು, ಕೆಆರ್ಎಸ್ ಡ್ಯಾಂಗೆ ಇದೀಗ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಕಾವೇರಿ ನದಿಗೆ ಮತ್ತು ಕಾವೇರಿಯ ಉಪ ನದಿಗಳಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯಗಳು ಇದೀಗ ತುಂಬಿಕೊಳ್ಳುತ್ತಿವೆ. ಕೆಆರ್ಎಸ್, ಕಬಿನಿ, ಹೇಮಾವತಿ, ಹಾರಂಗಿ ಜಲಾಶಯಗಳಿಗೆ ಭಾರಿ ನೀರು ಹರಿದು ಬರುತ್ತಿರುವ ಸಮಯದಲ್ಲೇ ತಮಿಳುನಾಡಿಗೆ ಕಾವೇರಿ ನೀರು ಬಿಡುವ ಆತಂಕ ಶುರುವಾಗಿದೆ!
ಕಾವೇರಿ ಕನ್ನಡ ನಾಡಲ್ಲಿ ಹೆಚ್ಚಾಗಿ ಹರಿದರೂ ಅದರ ಉಪಯೋಗ ಮಾತ್ರ ತಮಿಳುನಾಡಿಗೆ ಹೆಚ್ಚು. ಮಳೆಗಾಲ ಬಂತು ಅಂದ್ರೆ ಸಾಕು ತಮಿಳುನಾಡು ಸರ್ಕಾರ ಕಾವೇರಿ ನೀರಿಗಾಗಿ ಹೀಗೆ ಸಿಕ್ಕಾಪಟ್ಟೆ ಕಿರಿಕ್ ಮಾಡುತ್ತೆ, ಈಗ ಮತ್ತೊಮ್ಮೆ ಅದೇ ರೀತಿಯ ಹೋರಾಟಕ್ಕೆ ಸಜ್ಜಾಗುತ್ತಿದೆ. ಒಂದು ಕಡೆ ಕೆಆರ್ಎಸ್ ಡ್ಯಾಂ ವೇಗವಾಗಿ ತುಂಬುತ್ತಿರುವ ಈ ಸಮಯದಲ್ಲೇ ಕನ್ನಡಿಗರಿಗೆ ಮತ್ತೊಂದು ಆತಂಕ ಶುರುವಾಗಿದೆ. ಅದು ಏನೆಂದರೆ ಶೀಘ್ರವೇ ತಮಿಳುನಾಡಿಗೆ ಕರ್ನಾಟಕದ ಕಡೆಯಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಹೋಗುವ ಸಾಧ್ಯತೆ ದಟ್ಟವಾಗಿದೆ!

ಕೆಆರ್ಎಸ್ ಜಲಾಶಯ ಫುಲ್?
ಕೆಆರ್ಎಸ್ ಜಲಾಶಯದಲ್ಲಿ ಒಟ್ಟು 49.45 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಇದ್ದು, ಈಗ 25.09 ಅಡಿ ನೀರು ಇದೆ. ಕಳೆದ ವರ್ಷ ಇದೇ ಸಮಯಕ್ಕೆ ಕೇವಲ 11.69 ಟಿಎಂಸಿ ಅಡಿ ನೀರು ಇತ್ತು. 8,245 ಕ್ಯುಸೆಕ್ ನೀರು ಕೆಆರ್ಎಸ್ ಡ್ಯಾಂಗೆ ಹರಿದು ಬರ್ತಿದೆ. ಹಾಗೂ ಮುಂದಿನ ಕೆಲ ದಿನಗಳ ಕಾಲ ಇದೇ ರೀತಿ ಭರ್ಜರಿ ಮಳೆ ನಿರೀಕ್ಷೆ ಇದ್ದು, ಡ್ಯಾಂಗೆ ಮತ್ತಷ್ಟು ನೀರು ಹರಿದು ಬರುವ ಸಾಧ್ಯತೆ ಇದೆ. ಹೀಗಿದ್ದಾಗ ತಮಿಳುನಾಡಿಗೆ ನೀರು ಹರಿದು ಹೋಗುವ ಭಯ ಕೂಡ ಆವರಿಸಿದೆ.
ಕಬಿನಿ ಡ್ಯಾಂನಲ್ಲಿ ಎಷ್ಟಿದೆ ನೀರು?
ಕಾವೇರಿ ನದಿಗೆ ಕಟ್ಟಿರುವ ಪ್ರಮುಖ ಡ್ಯಾಂಗಳ ಪೈಕಿ ಕಬಿನಿ ಕೂಡ ಒಂದಾಗಿದೆ. 19.52 ಟಿಎಂಸಿ ಅಡಿ ನೀರನ್ನು ಕಬಿನಿ ಜಲಾಶಯದಲ್ಲಿ ಸಂಗ್ರಹ ಮಾಡಬಹುದು. ಕಬಿನಿ ಡ್ಯಾಂನಲ್ಲಿ 18.17 ಟಿಎಂಸಿ ಅಡಿ ನೀರು ಸಂಗ್ರಹ ಇದೆ. 4,711 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಬಿನಿ ಡ್ಯಾಂ ಭಾಗಶಃ ಭರ್ತಿ ಆಗಿದೆ. ಇನ್ನೇನು ನಾಳೆ ಅಥವಾ ನಾಡಿದ್ದು ಸಂಪೂರ್ಣ ಫುಲ್ ಆಗುವ ಬಗ್ಗೆ ನಿರೀಕ್ಷೆ ಇದೆ.
ಹೇಮಾವತಿ ಡ್ಯಾಂಗೆ ಭರ್ಜರಿ ನೀರು!
ಹಾಸನ ಜಿಲ್ಲೆಯ ಹೇಮಾವತಿ ಡ್ಯಾಂ ಒಟ್ಟು 37 ಟಿಎಂಸಿ ಸಾಮರ್ಥ್ಯ ಹೊಂದಿದೆ. ಈಗ ಡ್ಯಾಂಗೆ ಬರೋಬ್ಬರಿ 9,000 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೀಗೆ ಹೇಮಾವತಿ ಜಲಾಶಯದಲ್ಲಿ 19 ಟಿಎಂಸಿ ನೀರು ಸಂಗ್ರಹ ಆಗಿದೆ 2922 ಅಡಿ ಎತ್ತರ ಇರುವ ಈ ಡ್ಯಾಂಗೆ ಇದೀಗ 2898 ಅಡಿ ನೀರು ಬಂದಿದ್ದು, ಮಳೆ ಮುಂದುವರಿದರೆ ಜುಲೈ ಅಂತ್ಯಕ್ಕೆಲ್ಲಾ ಹೇಮಾವತಿ ಡ್ಯಾಂ ತುಂಬಿ ತುಳುಕುವ ಸಾಧ್ಯತೆ ದಟ್ಟವಾಗಿದೆ.
ಹೀಗೆ ಕಾವೇರಿ ಕೊಳ್ಳದಲ್ಲಿ ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವ ಕಾರಣಕ್ಕೆ, ತಮಿಳುನಾಡು ಮತ್ತೆ ಕಿರಿಕ್ ತೆಗೆದು ನೀರು ಬಿಡಿಸಿಕೊಳ್ಳುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಕರ್ನಾಟಕ ಕೂಡ ಈ ಬಗ್ಗೆ ಅಲರ್ಟ್ ಆಗಿದ್ದು, ಹೀಗೆ ಪರಿಸ್ಥಿತಿ ಮುಂದುವರಿದರೆ ಕನ್ನಡಿಗರಿಗೆ ಮತ್ತೊಮ್ಮೆ ಅನ್ಯಾಯ ಆಗುತ್ತೆ ಅನ್ನೊ ಮಾತುಗಳು ಕೂಡ ಕೇಳಬರುತ್ತಿವೆ.












Click it and Unblock the Notifications