ಯುವ ಘಟಕದ ಅಧ್ಯಕ್ಷ ಸ್ಥಾನ: ಸಿದ್ದರಾಮಯ್ಯ ನಡೆದಿದ್ದೇ ದಾರಿ, ಡಿಕೆಶಿಗೆ ಸೆಟ್ ಬ್ಯಾಕ್?
ಬಿಜೆಪಿಯಲ್ಲಿನ ನಾಯಕತ್ವ ಬದಲಾವಣೆಯ ಗೊಂದಲ, ಕೊರೊನಾ ನಿರ್ವಹಣೆ ಮುಂತಾದ ವಿಚಾರಗಳನ್ನು ಇಟ್ಟುಕೊಂಡು, ಭರ್ಜರಿ ಮೈಲೇಜ್ ಪಡೆಯಬಹುದಾಗಿದ್ದ ಕಾಂಗ್ರೆಸ್ ಈಗ ಒಳಸುಳಿಯಲ್ಲಿ ಸಿಲುಕಿದೆ. ಹಾಗಾಗಿ, ಮುಖ್ಯವಿಚಾರ ಸೈಡ್ಲೈನ್ ಆಗುತ್ತಿದೆ.
Recommended Video
ಸಿದ್ದರಾಮಯ್ಯ ಭಾವೀ ಸಿಎಂ ಎಂದು ಅವರ ಆಪ್ತ ಶಾಸಕ ಹಚ್ಚಿದ ಕಿಡಿ, ಪಕ್ಷದ ಒಗ್ಗಟ್ಟನ್ನೇ ಆಪೋಸನೆಗೆ ತೆಗೆದುಕೊಳ್ಳುತ್ತಿದೆ. ಎಷ್ಟೇ ಎಚ್ಚರಿಕೆ ನೀಡಿದರೂ, ಒಂದಲ್ಲಾ ಒಂದು ಪರವಿರೋಧ ಹೇಳಿಕೆಗಳು ಕಾಂಗ್ರೆಸ್ ಮುಖಂಡರಿಂದ ಬರುತ್ತಿದೆ.
ಇದೆಲ್ಲಾ ಒಂದು ಕಡೆಯಾದರೆ, ಹಲವು ದಿನಗಳಿಂದ ಗೊಂದಲದ ಗೂಡಾಗಿದ್ದ ರಾಜ್ಯ ಯುವ ಘಟಕದ ಅಧ್ಯಕ್ಷ ಸ್ಥಾನ ಯಾರಿಗೆ ಎನ್ನುವುದು ಒಂದು ಹಂತಕ್ಕೆ ಇತ್ಯರ್ಥವಾಗಿದೆ. ಇದು, ಸ್ಪಷ್ಟವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗಾದ ಹಿನ್ನಡೆ ಇದು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಮೊದಲ ಬಾರಿಗೆ ಕೆಪಿಸಿಸಿ ಯುವ ಘಟಕಕ್ಕೆ ಚುನಾವಣೆ ನಡೆದಿತ್ತು. ಫಲಿತಾಂಶದ ಪ್ರಕಾರ ಮೊಹಮ್ಮದ್ ನಳಪಾಡ್ ಅವರಿಗೆ ಹೆಚ್ಚಿನ ಮತಗಳು ಬಿದ್ದಿದ್ದರೂ, ರಿಸಲ್ಟ್ ಅನ್ನು ತಡೆ ಹಿಡಿಯಲಾಗಿತ್ತು. ಜೊತೆಗೆ, ಕಣದಲ್ಲಿದ್ದ ರಕ್ಷಾ ರಾಮಯ್ಯ ಅವರನ್ನು ಅಧ್ಯಕ್ಷರೆಂದು ಘೋಷಿಸಲಾಗಿತ್ತು. ಅಲ್ಲಿಂದ, ಎರಡು ಬಣಗಳ ನಡುವೆ ಹೊಸ ಸಮರ ಆರಂಭವಾಗಿತ್ತು.

ರಕ್ಷಾ ರಾಮಯ್ಯ ಪರ ಸಿದ್ದರಾಮಯ್ಯ ಮತ್ತು ನಳಪಾಡ್ ಪರ ಡಿಕೆಶಿ
ರಕ್ಷಾ ರಾಮಯ್ಯ ಪರ ಸಿದ್ದರಾಮಯ್ಯ ಮತ್ತು ನಳಪಾಡ್ ಪರ ಡಿಕೆಶಿ ಇರುವ ವಿಚಾರ ಗೌಪ್ಯವಾಗಿಯೇನೂ ಉಳಿದಿರಲಿಲ್ಲ. ನಳಪಾಡ್ ಪರ ಡಿ.ಕೆ.ಶಿವಕುಮಾರ್, ಶಾಸಕ ಹ್ಯಾರಿಸ್ ಸೇರಿದಂತೆ ಪ್ರಮುಖರು ದೆಹಲಿ ಮಟ್ಟದಲ್ಲಿ ಲಾಬಿ ನಡೆಸಿದ್ದರು. ಇತ್ತ, ರಕ್ಷಾ ರಾಮಯ್ಯ ಪರ ಸಿದ್ದರಾಮಯ್ಯ ಖಡಕ್ಕಾಗಿ ನಿಂತಿದ್ದರು. ಆದರೂ, ಸಮಸ್ಯೆಗೆ ಇತಿಶ್ರೀ ಹಾಡಲು ಆಗಿರಲಿಲ್ಲ.

ರಾಷ್ಟ್ರೀಯ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಬಿ.ವಿ.ಶ್ರೀನಿವಾಸ್
ಕೊನೆಗೆ, ಫಿಫ್ಟಿ ಸೂತ್ರದಡಿ ರಕ್ಷಾ ರಾಮಯ್ಯ ಮತ್ತು ನಳಪಾಡ್ ಗೆ ತಲಾ ಹದಿನೆಂಟು ತಿಂಗಳು ಅಧ್ಯಕ್ಷ ಸ್ಥಾನ ಕೊಡುವ ಬಗ್ಗೆ ಡಿಕೆಶಿ ಮಾತುಕತೆ ನಡೆಸಿದ್ದರು. ಈ ಹೊಂದಾಣಿಕೆಯ ಸೂತ್ರವನ್ನು ಹಿಡಿದುಕೊಂಡು ರಾಷ್ಟ್ರೀಯ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಳಿ ಬಂದಿದ್ದರು. ಆದರೆ, ಈ ಸೂತ್ರಕ್ಕೆ ಸಿದ್ದರಾಮಯ್ಯ ಒಪ್ಪಿರಲಿಲ್ಲ ಎಂದು ಹೇಳಲಾಗುತ್ತಿದೆ.

ಡಿಕೆಶಿ ಉಸ್ತುವಾರಿ ರಣದೀಪ್ ಸುರ್ಜೇವಾಲ ಜೊತೆಗೆ ಮಾತುಕತೆ
ಅತ್ತ, ಡಿಕೆಶಿಯವರು ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್ ಜೊತೆಗೆ ಮಾತುಕತೆ ನಡೆಸಿದ್ದರು. ಇನ್ನೇನು, ಹೊಸ ಹೊಂದಾಣಿಕೆ ಸೂತ್ರ ಅಧಿಕೃತವಾಗಿ ಹೊರಬೀಳುತ್ತದೆ ಎನ್ನುವಷ್ಟರಲ್ಲಿ, ಬೆಂಗಳೂರಿನಲ್ಲೇ ಕೂತು ಸಿದ್ದರಾಮಯ್ಯ ದೆಹಲಿ ಮಟ್ಟದಲ್ಲಿ ಆಡಿದ ಗೇಂ ಪ್ಲ್ಯಾನ್ ನಿಂದಾಗಿ, ನಳಪಾಡ್ ಬಣಕ್ಕೆ ಭಾರೀ ಹಿನ್ನಡೆಯಾಗಿದೆ. ನೇರವಾಗಿ ಸಿದ್ದರಾಮಯ್ಯನವರು ರಾಹುಲ್ ಗಾಂಧಿಯವರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ರಕ್ಷಾ ರಾಮಯ್ಯ ಅವರೇ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಕೆ
ರಕ್ಷಾ ರಾಮಯ್ಯ ಅವರೇ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಕೆಯಾಗಿರುವುದಾಗಿ ಈಗ ಅಧಿಕೃತವಾಗಿ ಘೋಷಣೆಯನ್ನು ಮಾಡಲಾಗಿದೆ. ಭಾರತೀಯ ಯುವ ಕಾಂಗ್ರೆಸ್ ಘಟಕದ ವೆಬ್ಸೈಟಿನಲ್ಲಿ ಈ ಬಗ್ಗೆ ಘೋಷಣೆಯನ್ನು ಮಾಡಲಾಗಿದೆ. ನಲಪಾಡ್ ಗೆ ಅಧಿಕಾರ ಮುಂದೆ ಹಸ್ತಾಂತರ ಎಂಬುದು ಸುಳ್ಳು ಸುದ್ದಿ ಎಂದು ಹೇಳಲಾಗಿದೆ. ಆ ಮೂಲಕ, ಡಿಕೆಶಿ ಬಣದ ಎಲ್ಲಾ ಲೆಕ್ಕಾಚಾರ ಉಲ್ಟಾ ಹೊಡೆದು, ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ.












Click it and Unblock the Notifications