'144 ಸೆಕ್ಷನ್ ಹಾಕಿದರೆ ನಾವಿಬ್ಬರೇ ಪಾದಯಾತ್ರೆ ಮಾಡುತ್ತೇವೆ'
ಬೆಂಗಳೂರು, ಜ 5: "ಕಾಂಗ್ರೆಸ್ ರಾಜ್ಯದ ಹಿತದೃಷ್ಟಿಯಿಂದ ನೀರಿಗಾಗಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನವರಿ 9 ರಿಂದ 19 ರವರೆಗೂ ಯಾತ್ರೆ ಕೈಗೊಂಡಿದ್ದೇವೆ. ಪಕ್ಷಭೇದ ಮರೆತು ಎಲ್ಲರಿಗೂ ಆಹ್ವಾನ ನೀಡಿದ್ದೇವೆ.
ಪಕ್ಷಾತೀತವಾಗಿ ಇದಕ್ಕೆ ಬೆಂಬಲ ಘೋಷಿಸಿದ್ದಾರೆ. ಈ ಮಧ್ಯೆ ಸರ್ಕಾರ, ಕೆಲ ಪಕ್ಷದವರಿಗೆ ಇದನ್ನು ತಡೆದುಕೊಳ್ಳಲು ಆಗುತ್ತಿಲ್ಲ"ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
"ಏನಾದರೂ ಮಾಡಿ ಪಾದಯಾತ್ರೆ ನಿಲ್ಲಿಸಲು ಸಂಚನ್ನು ರೂಪಿಸಲು ಮುಂದಾಗಿದ್ದಾರೆ. ನಾವು ಯಾವುದೇ ಕಾರ್ಯಕ್ರಮ ಮಾಡದಂತೆ 19ರ ವರೆಗೂ ನಿರ್ಬಂಧ ಹಾಕಿದ್ದಾರೆ. ರ್ಯಾಲಿ, ರಾಜಕೀಯ ಕಾರ್ಯಕ್ರಮ, ಸಭೆ ಸಮಾರಂಭ ಮಾಡಬಾರದೆಂದು ನಿರ್ಬಂಧ ಮಾಡಿದ್ದಾರೆ. 19ರಂದು ಸಾರ್ವಜನಿಕ ಸಭೆ ಇಟ್ಟಿದ್ದೆವು. ನಾವು ರಾಜ್ಯದ ಹಿತಕ್ಕೋಸ್ಕರ ನೀರಿಗಾಗಿ ನಡಿಗೆ ಮಾಡುತ್ತಿದ್ದೇವೆ" ಎಂದು ಡಿಕೆಶಿ ಹೇಳಿದರು.
"ರಾಜಕೀಯಕ್ಕೋಸ್ಕರ ಈ ಪಾದಯಾತ್ರೆ ಮಾಡುತ್ತಿಲ್ಲ, ರಾಜಕೀಯ ಮಾಡುತ್ತೇವೆ, ಆದರೆ ಕೋವಿಡ್ ನಿಯಮ ಅನುಸರಿಸಿ ಪಾದಯಾತ್ರೆ ಮಾಡುತ್ತೇವೆ. 9ರಂದು ಪಾದಯಾತ್ರೆ ಆರಂಭ ಮಾಡಿ 19 ರಂದು ಬಹಿರಂಗ ಸಭೆಯ ಮೂಲಕ ಮುಕ್ತಾಯ ಮಾಡುತ್ತೇವೆ. ಹರಿಯೋ ನೀರನ್ನ, ಉರಿಯೋ ಸೂರ್ಯನನ್ನ ಯಾರು ನಿಲ್ಲಿಸಲಾಗೋಲ್ಲ, ನಾವು ನಿರ್ಧರಿಸಿದ್ದ ಪಾದಯಾತ್ರೆಯನ್ನ ನಾವು ನಡೆಸಲು ಬದ್ದವಾಗಿದ್ದೇವೆ" ಎಂದು ಡಿಕೆಶಿ ಪುನರುಚ್ಚರಿಸಿದರು.
"ಬಹಳ ದಿನಗಳಿಂದ ಮೇಕೆದಾಟು ಯೋಜನೆ ವಿಳಂಬ ಆಗಿದೆ, ಬಂದು 2 ವರ್ಷವಾದರೂ ಅನುಷ್ಠಾನಕ್ಕೆ ಪ್ರಯತ್ನ ಮಾಡಿಲ್ಲ. ನಾವು ಬಹಳ ದಿನಗಳಿಂದ ಕಾದಿದ್ದೆವು. ಆದರೆ ಬೆಂಗಳೂರಿನ ಜನರ ಹಿತದೃಷ್ಟಿಯಿಂದ ವಿಪಕ್ಷವಾಗಿ ಯೋಜನೆ ಜಾರಿಗೆ ಒತ್ತಾಯ, ಪ್ರತಿಭಟನೆ ಮಾಡುವ ಕಾರ್ಯ ಹಮ್ಮಿಕೊಂಡಿದ್ದೇವೆ" ಎಂದು ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಹೇಳಿದರು.

144 ಸೆಕ್ಷನ್ ಹಾಕಿದರೆ ನಾವಿಬ್ಬರೆ ಪಾದಯಾತ್ರೆ ಮಾಡುತ್ತೇವೆ
ನಾವು ಮಾಡುತ್ತಿರೋದೇ ಹೋರಾಟ,ನಾವು ಎಲ್ಲರಿಗೂ ಭಾಗವಹಿಸಲು ಮನವಿ ಮಾಡಿದ್ದೇವೆ, ಬಂದ ಜನರಿಗೆ ಮಾಸ್ಕ್, ಸ್ಯಾನಿಟೈಜ್ ಕೊಟ್ಟು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸುತ್ತೇವೆ. ಒಂದು ವೇಳೆ ಅವರು 144 ಸೆಕ್ಷನ್ ಹಾಕಿದರೆ, ನಾವಿಬ್ಬರೆ ಪಾದಯಾತ್ರೆ ಮಾಡುತ್ತೇವೆ. 144 ಸೆಕ್ಷನ್ ನಲ್ಲಿ 5 ಜನರ ಮೇಲೆ ಪಾಲ್ಗೊಳ್ಳುವ ಹಾಗಿಲ್ಲ, ನಾನು, ಡಿಕೆಶಿ, ರಾಮಲಿಂಗ ರೆಡ್ಡಿ, ಧೃವನಾರಾಯಣ ನಾಲ್ಕು ಜನ ಪಾಲ್ಗೊಳ್ಳುತ್ತೇವೆ"ಎಂದು ಸಿದ್ದರಾಮಯ್ಯನವರು ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

ನಾವು 9ನೇ ತಾರೀಕಿನಂದು ನೀರಿಗಾಗಿ ಪಾದಯಾತ್ರೆ ಕಾರ್ಯಕ್ರಮ ಆರಂಭ ಮಾಡುತ್ತೇವೆ
ನಿನ್ನೆ ಸರ್ಕಾರ ಕೆಲವು ನಿರ್ಬಂಧ ಹೇರಿದೆ, ವೀಕೇಂಡ್ ಕರ್ಪ್ಯೂ, 15 ದಿನ ಕೆಲ ನಿರ್ಬಂಧ ಜಾರಿಮಾಡಿದ್ದಾರೆ. ನಾವು 9ನೇ ತಾರೀಕಿನಂದು ನೀರಿಗಾಗಿ ಪಾದಯಾತ್ರೆ ಕಾರ್ಯಕ್ರಮ ಆರಂಭ ಮಾಡುತ್ತೇವೆ. ನಮ್ಮ ಜವಾಬ್ದಾರಿಯ ಬಗ್ಗೆ ನಮಗೆ ಅರಿವಿದೆ, ಸರ್ಕಾರದ ನಿಯಮ ಗೌರವಿಸಬೇಕು. ನಿಯಮಾವಳಿ ಪ್ರಕಾರ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರು ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಪಾಲನೆ ಮಾಡಿಕೊಂಡು ಪಾದಯಾತ್ರೆ ಮಾಡುತ್ತೇವೆ" ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕಕ್ಕೆ ಕೇಂದ್ರ ದೊಡ್ಡ ಅನ್ಯಾಯ ಮಾಡುತ್ತಿದೆ
"ಸರ್ಕಾರದ ನಿಯಮಾವಳಿ ನಾವು ಉಲ್ಲಂಘನೆ ಮಾಡುವುದಿಲ್ಲ. ನಾವು ಹೋರಾಟ ಮಾಡಬಾರದೆಂಬ ಷಡ್ಯಂತ್ರ ಅವರದು. ಅವರು ಜನರ ಮುಂದೆ ಬೆತ್ತಲೆ ಆಗಿದ್ದಾರೆ. ಕೇಂದ್ರ ಸರ್ಕಾರ ಕೂಡ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಮಹದಾಯಿ, ಕೃಷ್ಣ ಮೇಲ್ದಂಡೆ ಯೋಜನೆ, ಸೇರಿದಂತೆ ಅನೇಕ ವಿಚಾರಗಳಲ್ಲಿ ಕರ್ನಾಟಕಕ್ಕೆ ಕೇಂದ್ರ ದೊಡ್ಡ ಅನ್ಯಾಯ ಮಾಡುತ್ತಿದೆ. ಮೇಕೆದಾಟು ಯೋಜನೆ ನಮ್ಮ ಸರ್ಕಾರ ಇದ್ದಾಗ ಮಾಡಿದ್ದು, ಇದನ್ನ ಇನಿಶೀಯೇಟ್ ಮಾಡಿ ಡಿಪಿಆರ್ ತಯಾರ್ ಮಾಡಿದ್ದು. ಡಿಕೆಶಿಯವರು ಜಲಸಂಪನ್ಮೂಲ ಸಚಿವರಾಗಿದ್ದಾಗ" ಎಂದು ಸಿದ್ದರಾಮಯ್ಯ ಹೇಳಿದರು.

ಅಣ್ಣಾಮಲೈ ತಮಿಳುನಾಡಿನ ಬಿಜೆಪಿ ಅಧ್ಯಕ್ಷ, ಸಿ.ಟಿ.ರವಿ ತಮಿಳುನಾಡಿನ ಬಿಜೆಪಿ ಉಸ್ತುವಾರಿ
"ಅವರು ಅಧಿಕಾರಕ್ಕೆ ಬಂದಾಗಿಂದ ಯಾವುದೇ ಪ್ರಯತ್ನ ಮಾಡಿಲ್ಲ. ಯಡಿಯೂರಪ್ಪ ಇದ್ದಾಗ ಸ್ಟೇಟ್ ಮೆಂಟ್ ಕೊಟ್ಟಿದ್ದರಷ್ಟೇ. ಈ ಯೋಜನೆಯಿಂದ ಎರಡೂವರೆ ಕೋಟಿ ಜನರಿಗೆ ಅನುಕೂಲವಾಗುತ್ತದೆ. ಅಣ್ಣಾಮಲೈ ತಮಿಳುನಾಡಿನ ಬಿಜೆಪಿ ಅಧ್ಯಕ್ಷ, ಸಿ.ಟಿ.ರವಿ ತಮಿಳುನಾಡಿನ ಬಿಜೆಪಿ ಉಸ್ತುವಾರಿ ಕೇಂದ್ರ ಸರ್ಕಾರ ಇವರದೆ. ಅಣ್ಣಾಮಲೈಗೆ ಹೇಳಿ ಇವರು ನಿಲ್ಲಿಸಬಹುದಿತ್ತಲ್ಲ? ಇವರ ದುರುದ್ದೇಶ ಯಾರಿಗಾದರೂ ಅರ್ಥವಾಗುತ್ತದೆ, ಇದು ಬಿಜೆಪಿಯ ಹುನ್ನಾರ" ಎಂದು ಸಿದ್ದರಾಮಯ್ಯ ಆರೋಪಿಸಿದರು.












Click it and Unblock the Notifications