ಬಿಜೆಪಿ ಒಡ್ಡುತ್ತಿರುವ ಆಮಿಷದ ಮೊತ್ತ ಬಹಿರಂಗ ಪಡಿಸಿದ ದಿನೇಶ್ ಗುಂಡೂರಾವ್
Recommended Video

ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ವಿರುದ್ದ ಒಂದು ವೇಳೆ ಅವಿಶ್ವಾಸ ನಿರ್ಣಯ ಮಂಡನೆಯಾದರೆ ವಿಶ್ವಾಸಮತ ಗೆಲ್ಲುವುದು ಎಷ್ಟು ಮುಖ್ಯನೋ, ಅಷ್ಟೇ ಮುಖ್ಯ ಬಜೆಟ್ ಒಪ್ಪಿಗೆ ಪಡೆಯುವುದು. ಇದೇ ಶುಕ್ರವಾರ ( ಫೆ 8) ಹಣಕಾಸು ಸಚಿವರೂ ಆಗಿರುವ ಸಿಎಂ ಬಜೆಟ್ ಮಂಡಿಸಲಿದ್ದಾರೆ..
ಬಜೆಟ್ ಮಂಡನೆಯಾದ ಒಂದು ವಾರದ ಅವಧಿಯಲ್ಲಿ ಹಣಕಾಸು ವಿಧೇಯಕಕ್ಕೆ ಲೇಖಾನುದಾನ ಪಡೆಯಬೇಕಾಗುತ್ತದೆ. ಇದೆಲ್ಲಾ ಸಾಧ್ಯವಾಗುವುದು ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ತಮ್ಮತಮ್ಮ ಪಕ್ಷದ ನಿಷ್ಠೆಯನ್ನು ಸಮ್ಮಿಶ್ರ ಸರಕಾರದ ಮೇಲಿಟ್ಟರೆ ಮಾತ್ರ.
ಆದರೆ, ಶನಿವಾರ (ಫೆ 3) ಬಿಜೆಪಿ ಮುಖಂಡ ಆರ್ ಅಶೋಕ್, ಕುಮಾರಸ್ವಾಮಿ ಬಜೆಟ್ ಮಂಡಿಸಲು ಸಂಖ್ಯಾಬಲದ ಕೊರತೆ ಕಾಡಲಿದೆ ಎಂದು ಹೇಳಿದ್ದಾರೆ. ಬಿಜೆಪಿಯವರು ಹೀಗೆ ಹೇಳುವುದು ಇದೇನು ಮೊದಲಲ್ಲದಿದ್ದರೂ, ಅಶೋಕ್ ಹೇಳಿಕೆಗೆ ಅತ್ತ ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಕೂಡಾ ಧ್ವನಿಗೂಡಿಸಿದ್ದಾರೆ.
ಇದಾದ ನಂತರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿಯ ಆಪರೇಶನ್ ಕಮಲದ ಕಥೆಯನ್ನು ಸವಿಸ್ತಾರವಾಗಿ ಮಾಧ್ಯಮದ ಮುಂದಿಟ್ಟಿದ್ದಾರೆ. ಬಿಜೆಪಿ ಒಡ್ಡುತ್ತಿರುವ ಆಮಿಷದ ಮೊತ್ತ ಎಷ್ಟು ಎಂದು ಬಹಿರಂಗ ಪಡಿಸಿದ್ದಾರೆ.

ಸರಕಾರ ಇದ್ದರೂ ಒಂದೇ, ಬಿದ್ದರೂ ಒಂದೇ
ಬಿಜೆಪಿ ಇನ್ನೂ ಲೆಕ್ಕಾಚಾರದ ಹಿಂದೆಯೇ ಬಿದ್ದಿದೆ. ಇಬ್ಬರು ಪಕ್ಷೇತರರು ತಮ್ಮ ಜೊತೆಗಿದ್ದಾರೆ. ಜೊತೆಗೆ, ತಾವು ಲೆಕ್ಕ ಹಾಕುತ್ತಿರುವ ಹನ್ನೊಂದು ಆಡಳಿತಾರೂಢ ಪಕ್ಷದ ಸದಸ್ಯರು ಕೈಜೋಡಿಸಿದರೆ 106+2+11=119 ಆಗುತ್ತದೆ. ಆವಾಗ, ಬಜೆಟ್ ಅನುಮೋದನೆ ಪಡೆಯಲು ಸಾಧ್ಯವಾಗುವುದಿಲ್ಲ. ಬಜೆಟಿಗೆ ಆಂಗೀಕಾರವಾಗದೇ ಇದ್ದಲ್ಲಿ, ನಯಾಪೈಸೆ ಬೊಕ್ಕಸದಿಂದ ಖರ್ಚು ಮಾಡುವಂತಿಲ್ಲ. ಒಂದು ರೀತಿಯಲ್ಲಿ ಸರಕಾರ ಇದ್ದರೂ ಒಂದೇ, ಬಿದ್ದರೂ ಒಂದೇ..

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
ಈ ನಡುವೆ, ಬಿಜೆಪಿ ಮುಖಂಡ ಅಶೋಕ್ ಹೇಳಿಕೆ ನೀಡಿದ ಒಂದು ದಿನದ ನಂತರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್,ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಒಡ್ಡುತ್ತಿರುವ ಆಮಿಷದ ಮೊತ್ತ ಕೇಳಿದರೆ ರಾಜ್ಯದ ಜನತೆ ಶಾಕ್ ಆಗುತ್ತಾರೆ. ಇವರಿಗೆ ಇಷ್ಟೊಂದು ದುಡ್ಡು ಯಾವ ಮೂಲದಿಂದ ಬರುತ್ತಿದೆ. ರಾಜ್ಯದ ಜನರು ಇದನ್ನು ಅರ್ಥಮಾಡಿಕೊಳ್ಳಬೇಕು. ನಳಿನ್ ಕುಮಾರ್ ಕಟೀಲ್ ಹಣ ಹೊಂದಿಸುತ್ತಿದ್ದಾರಾ ಎಂದು ದಿನೇಶ್ ಶಂಕೆ ವ್ಯಕ್ತಪಡಿಸಿದ್ದಾರೆ.

ಕನಿಷ್ಠ ಹದಿನೆಂಟರಿಂದ ಇಪ್ಪತ್ತು ಶಾಸಕರಿಗೆ ಬಿಜೆಪಿ ಗಾಳ
ನಮ್ಮ ಸಮ್ಮಿಶ್ರ ಸರಕಾರದ ಕನಿಷ್ಠ ಹದಿನೆಂಟರಿಂದ ಇಪ್ಪತ್ತು ಶಾಸಕರಿಗೆ ಬಿಜೆಪಿ ಗಾಳ ಹಾಕುತ್ತಿದೆ. ಅವರಲ್ಲಿ ಯಾರೂ ಬಿಜೆಪಿಯ ಆಫರ್ ಗೆ ಕ್ಯಾರೇ ಅನ್ನುತ್ತಿಲ್ಲ. ಆದರೂ, ಬಿಜೆಪಿಯವರು ಅವರನ ಹಿಂದೆ ಬಿದ್ದಿದ್ದಾರೆ. ಒಬ್ಬರು ಶಾಸಕರಿಗೆ ಮೊದಲು ಮೂವತ್ತು ಕೋಟಿಯ ಆಮಿಷ ಒಡ್ಡುತ್ತಿದ್ದಾರೆ. ಅದರಲ್ಲಿ ಕೆಲವರಿಗೆ ನಲವತ್ತು ಕೋಟಿಯವರೆಗೂ ಹಣಕೊಡುವುದಾಗಿ ಹೇಳಿದ್ದಾರೆ. ಬಿಜೆಪಿ ಒಡ್ಡುತ್ತಿರುವ ಇಷ್ಟೊಂದು ಮೊತ್ತದ ಮೂಲ ಯಾವುದು - ದಿನೇಶ್ ಗುಂಡೂರಾವ್.

ಅಗ್ರೀಮೆಂಟಿಗೆ ಸಹಿಹಾಕಿ ದುಡ್ಡು ತೆಗೆದುಕೊಂಡು ಹೋಗಿ
ನಿಮಗೆ ಎಷ್ಟು ದುಡ್ಡು ಬೇಕು... ಕೇಳಿ.. ಎಲ್ಲಿ ಕಳುಹಿಸಬೇಕು, ಅಲ್ಲಿಗೆ ಕಳುಹಿಸುತ್ತೇವೆ.. ಅಥವಾ ನಾವು ಹೇಳಿದ ಜಾಗಕ್ಕೆ ಬಂದು, ಅಗ್ರೀಮೆಂಟಿಗೆ ಸಹಿಹಾಕಿ ದುಡ್ಡು ತೆಗೆದುಕೊಂಡು ಹೋಗಿ..ಎಂದು ನಮ್ಮ ಪಕ್ಷದವರಿಗೆ ಹೇಳಿದ್ದಾರೆ. ಆಮಿಷಕ್ಕೊಳಗಾದ ಶಾಸಕರೇ ಈ ವಿಷಯವನ್ನು ನನ್ನ ಬಳಿ ಹೇಳಿದ್ದಾರೆ. ಈ ಕುದುರೆ ವ್ಯಾಪಾರದಲ್ಲಿ ಸಂಸದ ನಳಿನ್ ಕಟೀಲ್ ಏನಾದಾರೂ ಪಾಲುದಾರಿಕೆ ಹೊಂದಿದ್ದಾರಾ ಎಂದು ದಿನೇಶ್ ಪ್ರಶ್ನಿಸಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್
ಬಿಜೆಪಿಯವರು ಗುರುಗ್ರಾಮದ ಐಷಾರಾಮಿ ರೆಸಾರ್ಟಿನಲ್ಲಿ ಇದ್ದದ್ದು ತಪ್ಪು, ನಾವು ಈಗಲ್ ಟನ್ ರೆಸಾರ್ಟಿನಲ್ಲಿ ಇದ್ದದ್ದು ಸರಿ ಎಂದು ಸಮರ್ಥಿಸಿಕೊಂಡಿರುವ ದಿನೇಶ್, ಬಿಜೆಪಿಯವರು ಎಷ್ಟೇ ಪ್ರಯತ್ನ ಪಟ್ಟರೂ, ನಮ್ಮ ಎಂಬತ್ತು ಶಾಸಕರನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಆದರೆ, ಆಪರೇಶನ್ ಕಮಲದ ತಂಟೆಗೂ ನಾವು ಹೋಗುತ್ತಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ. (ಚಿತ್ರದಲ್ಲಿ ರವಿಕುಮಾರ್, ಬಲದಿಂದ ಎರಡನೆಯವರು)












Click it and Unblock the Notifications