ನಾನು ಸದಾಶಿವನಗರದಲ್ಲಿ 4 ಮನೆ ಕಟ್ಟಿದ್ದೀನಾ: ರಾಜಣ್ಣ ಟಾಂಗ್ ಕೊಟ್ಟಿದ್ದು ಯಾರಿಗೆ?
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಸ್ವಪಕ್ಷದ ಸಚಿವರಾದ ಕೆ.ಎನ್.ರಾಜಣ್ಣ ಗುಡುಗಿದ್ದಾರೆ. ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳುವುದು ಬೇಡ ಎಂದು ಡಿಕೆ ಶಿವಕುಮಾರ್ ಹೇಳಿದ್ದ ಮಾತಿಗೆ ರಾಜಣ್ಣ ಕೌಂಟರ್ ಕೊಟ್ಟಿದ್ದಾರೆ. ನಾನೇನು ದುರ್ಬಳಕೆ ಮಾಡಿಕೊಂಡು ಸದಾಶಿವನಗರದಲ್ಲಿ ನಾಲ್ಕು ಮನೆ ಕಟ್ಟಿದ್ದೀನಾ? ಎಂದು ಟಾಂಗ್ ನೀಡಿದ್ದಾರೆ. ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಅವರ ಹೇಳಿಕೆಯಷ್ಟೇ. ಅದು ಎಚ್ಚರಿಕೆಯಲ್ಲ, ಆ ಎಚ್ಚರಿಕೆ ಎಲ್ಲ ನಡೆಯಲ್ಲ ಎಂದು ಕೆಎನ್ ರಾಜಣ್ಣ ತಿರುಗೇಟು ಕೊಟ್ಟಿದ್ದಾರೆ.
ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಯಾರ ಹೆಸರೂ ದುರ್ಬಳಕೆ ಮಾಡಿಕೊಂಡಿಲ್ಲ. ಅವರು ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ. ಪ್ರತಿಯೊಂದಕ್ಕೂ ಎಐಸಿಸಿ ಹೇಳಿದೆ ಎಂದು ಹೇಳಬೇಕಿಲ್ಲ. ನಾನು ಮಾಡುತ್ತಿರುವುದು ಆರೋಪವಲ್ಲ, ವಾಸ್ತವ. ಅಲ್ಲದೆ ನಾನು ಯಾರಿಂದಲೂ ಶಿಸ್ತಿನ ಪಾಠ ಕಲಿಯಬೇಕಾಗಿಲ್ಲ ಎಂದೂ ತಿರುಗೇಟು ನೀಡಿದ್ದಾರೆ.

ನಾನು ಕಳೆದ 50 ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ನಾನು ಮಾತನಾಡಿದರೆ ಒಳ್ಳೆಯ ಪರಿಣಾಮವೇ ಬೀರುತ್ತೆ. ನನಗೂ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೂ ವೈಯಕ್ತಿಕವಾಗಿ ಏನೂ ಇಲ್ಲ. ನಮ್ಮ ವಿಚಾರಗಳಲ್ಲಿ ಬೇಧ ಇರಬಹುದಷ್ಟೇ. ವಿಧಾನಸೌಧಕ್ಕೆ ನಾನೊಂದು ರಸ್ತೆಯಲ್ಲಿ ಹೋದರೆ, ಅವರೊಂದು ರಸ್ತೆಯಲ್ಲಿ ಬರಬಹುದು. ಆದರೆ ನಾವಿಬ್ಬರು ಹಲವು ವರ್ಷಗಳಿಂದ ಸ್ನೇಹಿತರು ಎಂದೂ ಹೇಳಿದ್ದಾರೆ. ನಾವಿಬ್ಬರೂ ಒಟ್ಟಾಗಿ ವಿದೇಶ ಪ್ರವಾಸ ಮಾಡಿದ್ದೇವೆ. ನಮ್ಮ ವಿಚಾರಗಳಲ್ಲಿ ಭೇದವಿರಬಹುದು, ಆದರೆ ವೈಯಕ್ತಿಕವಾಗಿ ನಮ್ಮ ನಡುವೆ ಏನಿಲ್ಲ. ಅವರನ್ನು ನಮ್ಮ ಮನೆಗೆ ಊಟಕ್ಕೂ ಕರೆಯುತ್ತೇನೆ ಎಂದು ಕೆಎನ್ ರಾಜಣ್ಣ ಹೇಳಿದ್ದಾರೆ.
ನಿನ್ನೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯನ ಅವರು ನಮ್ಮ ನಾಯಕರು. ಪಕ್ಷದ ಎಲ್ಲ ಚುನಾವಣೆಗಳಿಗೂ ಅವರು ಬೇಕು. ಅವರು ಜಿಲ್ಲಾ ಪಂಚಾಯಿತಿ ಚುನಾವಣೆಗೂ ಬೇಕು, ತಾಲೂಕು ಪಂಚಾಯಿತಿ, ವಿಧಾನಸಭೆ, ಲೋಕಸಭೆ ಚುನಾವಣೆಗೂ ಬೇಕು. ಕಾಂಗ್ರೆಸ್ ಪಕ್ಷ ಅವರನ್ನ ಎರಡು ಬಾರಿ ಸಿಎಂ ಮಾಡಿದೆ. ದಿನಬೆಳಗಾದರೆ ಅವರ ಹೆಸರೇಳಿಕೊಂಡು ದುರ್ಬಳಕೆ ಮಾಡಿಕೊಳ್ಳುವುದು ಬೇಡ ಎಂದು ಹೇಳಿದ್ದರು. ಇದಕ್ಕೆ ಕೆಎನ್ ರಾಜಣ್ಣ ತಿರುಗೇಟು ನೀಡಿದ್ದಾರೆ.

ಕರ್ನಾಟಕದಲ್ಲಿ ಸಿಎಂ ಬದಲಾವಣೆ ವಿಚಾರವಾಗಿಯೂ ಮಾತನಾಡಿದ ಅವರು, ನಮ್ಮ ಹೈಕಮಾಂಡ್ ಏಕಪಕ್ಷೀಯವಾಗಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲ್ಲ. ಎಲ್ಲರ ಅಭಿಪ್ರಾಯವನ್ನು ಸಂಗ್ರಹ ಮಾಡಲೇಬೇಕು. ನಾವು ತಪ್ಪು ಮಾಡಿದ್ರೆ ಮಾತ್ರವೇ ಎಚ್ಚರಿಕೆ ಕೊಡಬೇಕು. ನಾವು ಯಾವ ತಪ್ಪನ್ನೂ ಮಾಡಿಲ್ಲ. ಹೈಕಮಾಂಡ್ ವಿರುದ್ಧ ಯಾರೂ ಇಲ್ಲ ಎಂದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಅಂದರೆ ಎರಡು ಕೊಂಬಿದೆಯೇ? ಜಿ.ಸಿ.ಚಂದ್ರಶೇಖರ್ ಯಾರು? ಅವರ ಮಾತಿಗೆ ಯಾಕಿಷ್ಟು ಮನ್ನಣೆ? ಎಂದೂ ಗುಡುಗಿದ್ದಾರೆ.
ಸದ್ಯ ಕಾಂಗ್ರೆಸ್ನಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಡಿಕೆ ಶಿವಕುಮಾರ್ ಹಾಗೂ ಸಚಿವ ಕೆಎನ್ ರಾಜಣ್ಣ ಅವರ ನಡುವೆ ಟಾಕ್ವಾರ್ ಜೋರಾಗಿದೆ. ರಾಜಣ್ಣ ಇತ್ತೀಚೆಗೆ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಬಂದಿದ್ದರು. ಅಲ್ಲದೆ ಹೈಕಮಾಂಡ್ ನಾಯಕರು ಒಪ್ಪಿದರೆ ನಾನು ಸಚಿವ ಸ್ಥಾನ ಬಿಟ್ಟು ಕೆಪಿಸಿಸಿ ಸ್ಥಾನದಲ್ಲಿ ಕೂರುತ್ತೇನೆ ಎಂದೂ ರಾಜಣ್ಣ ಹೇಳಿದ್ದರು. ಬಳಿಕ ಕಾಂಗ್ರೆಸ್ನಲ್ಲೇ ಆಂತರಿಕ ಕಚ್ಚಾಟ ಶುರುವಾಗಿದೆ.












Click it and Unblock the Notifications